ನಿವೇದಿತಾ ಜೊತೆಗಿನ ವಿಚ್ಛೇದನ ನಂತರ, ಚಂದನ್ ಶೆಟ್ಟಿ ಸಿನಿಮಾ ಮತ್ತು ಸಂಗೀತದತ್ತ ಗಮನ ಹರಿಸಿದ್ದಾರೆ. 'ಸೂತ್ರಧಾರಿ' ಚಿತ್ರದ ಪ್ರಚಾರದ ವೇಳೆ, ಜೀವನದ ಪಾಠಗಳ ಬಗ್ಗೆ ಮಾತನಾಡಿದ ಅವರು, ಆತ್ಮಪ್ರೀತಿ ಮತ್ತು ವೃತ್ತಿ ಬೆಳವಣಿಗೆ ಮೇಲೆ ಕೇಂದ್ರೀಕರಿಸಿರುವುದಾಗಿ ತಿಳಿಸಿದರು. 'ಸೂತ್ರಧಾರಿ', 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರಗಳಲ್ಲಿ ನಟಿಸುತ್ತಿರುವ ಚಂದನ್, ಸಂಗೀತ ನಿರ್ದೇಶನದಲ್ಲೂ ಸಕ್ರಿಯರಾಗಿದ್ದಾರೆ.

ನಿವೇದಿತಾ ಗೌಡ ಜೊತೆಗಿನ ನಾಲ್ಕು ವರ್ಷದ ದಾಂಪತ್ಯ ಜೀವನ ಮುರಿದು ಬಿದ್ದ ಬಳಿಕ ಗಾಯಕ ಚಂದನ್‌ ಶೆಟ್ಟಿ ಅವರು ಈಗ ಕಂಪ್ಲೀಟ್‌ ಆಗಿ ಕರಿಯರ್‌ ಕಡೆಗೆ ಗಮನ ಕೊಡುತ್ತಿದ್ದಾರೆ. ಈಗ ಹೀರೋ ಆಗಿರುವ ಅವರು ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ. ಇವರ ಮುಂಬರುವ ʼಸೂತ್ರಧಾರಿʼ ಸಿನಿಮಾ ಪ್ರಚಾರದ ವೇಳೆ ಅವರು ವೈಯಕ್ತಿಕ ಜೀವನದ ಏರುಪೇರುಗಳ ಬಗ್ಗೆ ಮಾತನಾಡಿದ್ದಾರೆ.

ಘಟನೆಯಿಂದ ಏನು ಕಲಿಯುತ್ತೀರಿ? 

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಿವೇದಿತಾ ಗೌಡ ಜೊತೆಗಿನ ಬ್ರೇಕಪ್‌ ವಿಷಯವನ್ನು ಪ್ರಶ್ನೆ ಮಾಡಲಾಗಿತ್ತು. ಆಗ ಚಂದನ್‌ ಅವರು ನಾನು ಪ್ರಮುಖವಾಗಿ ಅದರ ಬಗ್ಗೆ ಮಾತನಾಡಲ್ಲ, ಆದರೆ ಒಟ್ಟಾರೆಯಾಗಿ ಹೇಳ್ತೀನಿ ಎಂದಿದ್ದಾರೆ. “ಜೀವನದಲ್ಲಿ ಒಂದಷ್ಟು ಘಟನೆಗಳು ಆಗುತ್ತಲೇ ಇರುತ್ತವೆ. ಇಷ್ಟುದಿನ ನಡೆದಿದ್ದೆಲ್ಲ ಕನಸು ಥರ ಇರುತ್ತದೆ. ಒಂದು ನಿಮಿಷದ ಹಿಂದೆ ಆಗಿದ್ದು ಕೂಡ ಕನಸಿನ ಥರ ಇರುತ್ತದೆ. ಆ ಘಟನೆಯಿಂದ ನಾವು ಏನು ಕಲಿತಿರಿ ಎನ್ನೋದು ಮುಖ್ಯ ಆಗುತ್ತದೆ. ನಾನು ಸ್ಟ್ರಾಂಗ್‌ ಆಗಿದೀನಿ, ಆ ಒಂದು ಪರಿಸ್ಥಿತಿಯಿಂದ ಎದ್ದು ಬಂದು ಗೆಲುವು ನೋಡಿದೀನಿ. ಜೀವನದಲ್ಲಿ ತಪ್ಪುಗಳು ಎನ್ನೋದಿಲ್ಲ, ಅವೆಲ್ಲವೂ ಪಾಠ ಅಷ್ಟೇ” ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ. 

ನಾನು ನನ್ನನ್ನು ಜಾಸ್ತಿ ಪ್ರೀತಿಸ್ತೀನಿ! 
“ನನ್ನನ್ನು ಜಾಸ್ತಿ ಪ್ರೀತಿಸೋಕೆ ಶುರು ಮಾಡಿದೀನಿ. ಜೀವನದಲ್ಲಿ ಬೇರೆಯವರ ಖುಷಿಗೋಸ್ಕರ ಬದುಕ್ತಿದ್ದೆ. ನಾನು ಎಲ್ಲರನ್ನು ಪ್ರೀತಿಸ್ತಿದ್ದೆ, ಬೇರೆಯವರ ಖುಷಿಗೋಸ್ಕರ ಬದುಕ್ತಿದ್ದೆ. ಒಂದು ಟೈಮ್‌ನಲ್ಲಿ ನಮ್ಮನ್ನು ಯಾರು ಖುಷಿಯಾಗಿ ಇಡ್ತಾರೆ? ನಮ್ಮ ಸುತ್ತ ನೋಡಿದಾಗ ನಮ್ಮನ್ನು ಪ್ರೀತಿಸೋರು ಯಾರು ಇಲ್ಲ ಅಂದಾಗ ಏನು ಮಾಡೋದು? ನಾನು ನನ್ನ ಬಾಡಿ, ಆರೋಗ್ಯ, ಕರಿಯರ್‌ ಮೇಲೆ ಗಮನ ಕೊಡ್ತಿದೀನಿ. ದೊಡ್ಡ ದೊಡ್ಡ ಹಾಡು ಮಾಡಬೇಕು, ಎಲ್ಲ ಕಡೆ ಕನ್ನಡ ಹಾಡು ಮೊಳಗಬೇಕು” ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ. 

ಬ್ಯುಸಿ ಆಗಿರುವ ಚಂದನ್‌ ಶೆಟ್ಟಿ! 
“ಸಿನಿಮಾದಲ್ಲಿ ನನಗೆ ಟ್ರೆಂಡಿಂಗ್‌ ಸ್ಟಾರ್‌ ಅಂತ ಕೊಟ್ಟಿದ್ದಾರೆ. ಹಾಡುಗಳು ಟ್ರೆಂಡಿಂಗ್‌ ಆಗಬೇಕು ಎಂದು ಬಯಸ್ತೀವಿ. ಆದರೆ ವೈಯಕ್ತಿಕ ಜೀವನ ಟ್ರೆಂಡಿಂಗ್‌ ಇರಬೇಕು ಅಂತ ನಾನು ಬಯಸಿದ್ದಲ್ಲ” ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ. ಅಂದಹಾಗೆ ʼಸೂತ್ರಧಾರಿʼ, ʼವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಮುಂತಾದ ಸಿನಿಮಾಗಳಲ್ಲಿ ಚಂದನ್‌ ಶೆಟ್ಟಿ ನಟಿಸಿದ್ದಾರೆ. ಸಂಗೀತ ಸಂಯೋಜನೆ, ನಟನೆ, ಗಾಯನ ಎಂದು ಅವರು ಚಿತ್ರರಂಗದಲ್ಲಿ ಫುಲ್‌ ಬ್ಯುಸಿ ಆಗಿದ್ದಾರೆ.

ಸ್ನೇಹ,‌ ಪ್ರೀತಿ, ಮದುವೆ, ಡಿವೋರ್ಸ್
ʼಬಿಗ್‌ ಬಾಸ್‌ ಕನ್ನಡ ಸೀಸನ್‌ 5’ ಶೋನಲ್ಲಿ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಭಾಗವಹಿಸಿದ್ದರು. ಶೋವೊಳಗಡೆ ಇದ್ದ ಸ್ನೇಹ ದೊಡ್ಮನೆಯಿಂದ ಹೊರಗಡೆ ಬರುತ್ತಿದ್ದ ಹಾಗೆ ಪ್ರೀತಿಯಾಗಿ ತಿರುಗಿತ್ತು. ಕುಟುಂಬದ ಸಮ್ಮುಖದೊಂದಿಗೆ ಮೈಸೂರಿನಲ್ಲಿ ಈ ಜೋಡಿ ಗ್ರ್ಯಾಂಡ್‌ ಆಗಿ ಮದುವೆ ಆಗಿತ್ತು. ಅದಾದ ನಂತರದಲ್ಲಿ ಇವರಿಬ್ಬರು ʼರಾಜಾ ರಾಣಿʼ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು, ಮ್ಯೂಸಿಕ್‌ ಆಲ್ಬಮ್‌ ಹಾಡುಗಳಲ್ಲಿ ಕಾಣಿಸಿಕೊಂಡರು, ಸಿನಿಮಾ ಕೂಡ ಒಟ್ಟಿಗೆ ಮಾಡಿದ್ದರು. ಅದಾದ ಬಳಿಕ ಪರಸ್ಪರ ಒಪ್ಪಿ ಡಿವೋರ್ಸ್‌ ಪಡೆದಿದ್ದಾರೆ. ಹೊಂದಾಣಿಕೆ ಸಮಸ್ಯೆಯಿಂದ ಒಟ್ಟಿಗೆ ಇರಲು ಆಗುತ್ತಿಲ್ಲ, ದೂರ ಇದ್ದು ಖುಷಿಯಾಗಿ ಇರೋದು ಒಳ್ಳೆಯದು ಎಂದು ಇವರಿಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಡಿವೋರ್ಸ್‌ ಬಳಿಕವೂ ಈ ಜೋಡಿ ʼಮುದ್ದು ರಾಕ್ಷಸಿʼ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿತ್ತು.

ಅಂದಹಾಗೆ ನಿವೇದಿತಾ ಗೌಡ ಅವರು ಇತ್ತೀಚೆಗೆ ʼಬಾಯ್ಸ್‌ v/s ಗರ್ಲ್ಸ್‌ʼ ಶೋನಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ನಿವೇದಿತಾ ಗೌಡ ಕೂಡ ಇನ್ನೂ ಹೆಚ್ಚು ಸಿನಿಮಾ ಮಾಡುವ ಆಸೆ ಇಟ್ಟುಕೊಂಡಿದ್ದಾರೆ.