ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ತಮ್ಮದೇ ಛಾಪು ಮೂಡಿಸಿರುವ ಡಾಲಿ ಧನಂಜಯ, ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ತಮ್ಮದೇ ಛಾಪು ಮೂಡಿಸಿರುವ ಡಾಲಿ ಧನಂಜಯ, ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಬಡವ ರಾಸ್ಕಲ್‌’, ‘ಹೆಡ್‌ ಬುಷ್‌’, ‘ಟಗರು ಪಲ್ಯ’ ಸೇರಿದಂತೆ ಹಲವು ಸಿನಿಮಾಗಳನ್ನು ಬೆಂಬಲಿಸಿರುವ ಅವರ ಡಾಲಿ ಪಿಕ್ಚರ್ಸ್‌ ನಿರ್ಮಾಣದ ಹೊಸ ಚಿತ್ರ ‘ಹೆಗ್ಗಣ ಮುದ್ದು’ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಸಂಬಂಧಗಳ ಸುತ್ತ ಹೆಣೆದಿರುವ ಈ ಸಿನಿಮಾದ ರಿಲೀಸ್‌ ಡೇಟ್‌ ಕೂಡ ಫಿಕ್ಸ್‌ ಆಗಿದ್ದು, ಸೆಪ್ಟೆಂಬರ್‌ 25ರಂದು ‘ಹೆಗ್ಗಣ ಮುದ್ದು’ ಚಿತ್ರಮಂದಿರಕ್ಕೆ ಬರಲಿದೆ.

‘ಹೆತ್ತವರಿಗೆ ಹೆಗ್ಗಣ ಮುದ್ದು’ ಈಗ ಸಿನಿಮಾ!

‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಜನಪ್ರಿಯ ಗಾದೆ ಮಾತು ಕನ್ನಡಿಗರಿಗೆ ಚಿರಪರಿಚಿತ. ಇದೇ ಸಾಲಿನಿಂದ ಪ್ರೇರಣೆ ಪಡೆದಂತೆ ಕಾಣುವ ‘ಹೆಗ್ಗಣ ಮುದ್ದು’ ಎಂಬ ವಿಭಿನ್ನ ಶೀರ್ಷಿಕೆ ಈಗಾಗಲೇ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್‌ ನಟಿಸಿಲ್ಲ. ಬದಲಿಗೆ ತಮ್ಮ ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಮೂಲಕ ಚಿತ್ರವನ್ನು ನಿರ್ಮಿಸಿದ್ದಾರೆ. ಸೆಪ್ಟೆಂಬರ್‌ 25ರಂದು ಸಿನಿಮಾ ತೆರೆಗೆ ಬರಲಿದೆ ಎಂಬುದನ್ನು ಧನಂಜಯ್‌ ಹಾಗೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಹಂಚಿಕೊಂಡು, ನವಿರು ಹಾಸ್ಯ, ಭರಪೂರ ಭಾವನೆಗಳು ಹಾಗೂ ಸಾಂಸಾರಿಕ-ಸಾಮಾಜಿಕ ಅಂಶಗಳನ್ನು ಒಳಗೊಂಡ ಸಿನಿಮಾ ಎಂದು ಪರಿಚಯಿಸಿದೆ.

ಹೊಸಬ ನಿರ್ದೇಶಕನಿಗೆ ಡಾಲಿ ಧನಂಜಯ್‌ ಸಾಥ್‌!

‘ಹೆಗ್ಗಣ ಮುದ್ದು’ ಮೂಲಕ ಅವಿನಾಶ್‌ ಬಳೆಕ್ಕಳ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆಯುತ್ತಿರುವ ಡಾಲಿ ಪಿಕ್ಚರ್ಸ್‌, ಮತ್ತೊಮ್ಮೆ ಹೊಸ ನಿರ್ದೇಶಕರಿಗೆ ವೇದಿಕೆ ಕಲ್ಪಿಸಿದೆ. ಸಿನಿಮಾದಲ್ಲಿ ಬರಹಗಾರ-ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ಣ ಮೈಸೂರು ಅವರಿಗೆ ನಾಯಕಿಯಾಗಿ ಅದಿತಿ ಸಾಗರ್‌ ಜೋಡಿಯಾಗಿದ್ದಾರೆ.

‘ವೇದ’ ನಂತರ ಪೂರ್ಣ ಪ್ರಮಾಣದ ನಾಯಕಿಯಾಗಿ ಅದಿತಿ ಸಾಗರ್‌!

ನಟ ಹಾಗೂ ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರ ಪುತ್ರಿ ಅದಿತಿ ಸಾಗರ್‌ ಈಗಾಗಲೇ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ‘ವೇದ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಹೆಗ್ಗಣ ಮುದ್ದು’ ಮೂಲಕ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಹೀಗಾಗಿ ಅದಿತಿ ಸಾಗರ್‌ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಮೂಡಿದೆ. ಸಂಬಂಧಗಳ ಸುತ್ತ ಸಾಗುವ ಕಥೆಯಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರಲಿದೆ ಎನ್ನಲಾಗಿದೆ.

ಸೈಲೆಂಟ್‌ ಆಗಿ ಶೂಟಿಂಗ್‌ ಮುಗಿಸಿದ ಚಿತ್ರತಂಡ!

ಯಾವುದೇ ದೊಡ್ಡ ಮಟ್ಟದ ಪ್ರಚಾರವಿಲ್ಲದೆ ‘ಹೆಗ್ಗಣ ಮುದ್ದು’ ಸಿನಿಮಾದ ಶೂಟಿಂಗ್‌ ಅನ್ನು ಚಿತ್ರತಂಡ ಪೂರ್ಣಗೊಳಿಸಿದೆ. ಇದೀಗ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೂ ಮುಗಿದಿದ್ದು, ರಿಲೀಸ್‌ಗೆ ಸಿದ್ಧತೆ ನಡೆದಿದೆ. ಕಾರ್ತಿಕ್‌ ಚೆನ್ನೂಜಿ ರಾವ್‌ ಹಾಗೂ ರೋಣದ ಬಕ್ಕೆಶ್‌ ಸಂಗೀತ ಸಂಯೋಜನೆ ಮಾಡಿದ್ದು, ನಚಿಕೇತ್‌ ಬಳೆಕ್ಕಳ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

‘ಹೆಗ್ಗಣ ಮುದ್ದು’ ಮೇಲೆ ನಿರೀಕ್ಷೆ ಯಾಕೆ?

ಡಾಲಿ ಧನಂಜಯ್‌ ಅವರ ಡಾಲಿ ಪಿಕ್ಚರ್ಸ್‌ ಈ ಹಿಂದೆ ವಿಭಿನ್ನ ಕಂಟೆಂಟ್‌ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆದಿದೆ. ಇದೀಗ ಅದೇ ಸಾಲಿಗೆ ‘ಹೆಗ್ಗಣ ಮುದ್ದು’ ಕೂಡ ಸೇರುತ್ತಿದೆ. ವಿಶೇಷವೆಂದರೆ ಸಿನಿಮಾದ ಟೈಟಲ್‌ ಕೇಳಿದ ಕೂಡಲೇ ಕುತೂಹಲ ಮೂಡಿಸುವಂತಿದೆ. ಹಾಸ್ಯ, ಭಾವನೆ ಹಾಗೂ ಸಂಬಂಧಗಳ ಕಥೆಯನ್ನು ಒಳಗೊಂಡಿರುವುದಾಗಿ ಚಿತ್ರತಂಡ ಹೇಳಿಕೊಂಡಿರುವುದರಿಂದ ಸಿನಿಮಾ ಹೇಗಿರಲಿದೆ ಎಂಬ ಪ್ರಶ್ನೆ ಸಿನಿಪ್ರಿಯರಲ್ಲಿ ಮೂಡಿದೆ. ಸದ್ಯ ಸೆಪ್ಟೆಂಬರ್‌ 25ರಂದು ‘ಹೆಗ್ಗಣ ಮುದ್ದು’ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಡಾಲಿ ಧನಂಜಯ್‌ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ವಿಭಿನ್ನ ಶೀರ್ಷಿಕೆಯ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುತ್ತದೆಯೇ ಎಂಬುದನ್ನು ರಿಲೀಸ್‌ ಬಳಿಕ ನೋಡಬೇಕಿದೆ.

View post on Instagram