Golden Star Ganesh: ಇತ್ತೀಚಿನ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಬಗ್ಗೆ ಮಾತನಾಡಿದ ಗಣೇಶ್, "ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಕಾತುರ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಉತ್ತಮ ಕಂಟೆಂಟ್ ಕೊರತೆ.

ನಮಸ್ಕಾರ... ನಮಸ್ಕಾರ... ನಮಸ್ಕಾರ... ಈ ಡೈಲಾಗ್ ಮೂಲಕ ಕನ್ನಡ ಸಿನಿಪ್ರೇಕ್ಷಕರ ಹೃದಯ ಗೆದ್ದು, ಗೋಲ್ಡನ್ ಸ್ಟಾರ್ ಆಗಿ ಬೆಳೆದ ನಟ ಗಣೇಶ್ ಇಂದು (ಜುಲೈ 2) ತಮ್ಮ 48ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಸ್ನೇಹಿತರು ಹಾಗೂ ಸಾವಿರಾರು ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಕೆಲವು ವರ್ಷಗಳಿಂದ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಸಂಪ್ರದಾಯದಿಂದ ದೂರ ಉಳಿದಿರುವ ಗಣೇಶ್, ಇತ್ತೀಚೆಗೆ ತಮ್ಮ ನಿರ್ಮಾಣದ ಕನ್ನಡ-ತುಳು ದ್ವಿಭಾಷಾ ಚಿತ್ರ 'ಪಿಚ್ಚರ್' ಪತ್ರಿಕಾಗೋಷ್ಠಿಯ ಬಳಿಕ ಮಾಧ್ಯಮದವರೊಂದಿಗೆ ಮುಕ್ತವಾಗಿ ಮಾತನಾಡಿದರು. ಈ ವೇಳೆ ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗತಿ, ಸಿನಿಮಾಗಳ ಬಿಡುಗಡೆ ಹಾಗೂ ಪ್ರೇಕ್ಷಕರ ಅಭಿರುಚಿ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಗಣೇಶ್ ಅವರ ಮಾತುಗಳಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಕಾಳಜಿ ಸ್ಪಷ್ಟವಾಗಿ ಗೋಚರಿಸಿತು. "ಕನ್ನಡ ಚಿತ್ರರಂಗ ಗೆಲ್ಲಬೇಕಾದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಹೇಳಿದ ಅವರು, 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ಸಿನ ಬಳಿಕವೂ ಸುಮಾರು ಎರಡು ವರ್ಷಗಳಿಂದ ತಮ್ಮ ಹೊಸ ಸಿನಿಮಾ ಬಿಡುಗಡೆಯಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಆದರೆ, ಮುಂದಿನ ದಿನಗಳ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು. "ಉಳಿದಿರುವ ಆರು ತಿಂಗಳೊಳಗೆ ಕನ್ನಡದಲ್ಲಿ ಒಂದು ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಬರಲಿದೆ ಎಂಬ ನಂಬಿಕೆ ಇದೆ. ಅದು ನನ್ನದೇ ಸಿನಿಮಾ ಆಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಅಂತಹ ಗೆಲುವಿನ ಅಗತ್ಯವಿದೆ" ಎಂದು ಹೇಳಿದರು.

ಮತ್ತಷ್ಟು ಲಾಭವಾಗಲಿದೆ

ಇದೇ ವೇಳೆ, ಇಬ್ಬರು ಪ್ರಮುಖ ನಾಯಕ ನಟರೊಂದಿಗೆ ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿರುವುದಾಗಿ ಗಣೇಶ್ ಬಹಿರಂಗಪಡಿಸಿದರು. ದೊಡ್ಡ ನಟರು ಪರಸ್ಪರ ಸಮನ್ವಯ ಸಾಧಿಸಿ ಚಿತ್ರಗಳನ್ನು ಯೋಜಿತವಾಗಿ ಬಿಡುಗಡೆ ಮಾಡಿದರೆ, ಚಿತ್ರರಂಗಕ್ಕೆ ಮತ್ತಷ್ಟು ಲಾಭವಾಗಲಿದೆ ಎಂಬ ಸಂದೇಶವನ್ನೂ ಅವರು ನೀಡಿದರು.

ಇತ್ತೀಚಿನ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಬಗ್ಗೆ ಮಾತನಾಡಿದ ಗಣೇಶ್, "ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಕಾತುರ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಉತ್ತಮ ಕಂಟೆಂಟ್ ಕೊರತೆ. ತಿಂಗಳಿಗೆ ಕನಿಷ್ಠ ಒಂದಾದರೂ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಗುಣಮಟ್ಟದ ಸಿನಿಮಾ ಬರಬೇಕು. ಆಗ ಮಾತ್ರ ಕನ್ನಡ ಚಿತ್ರರಂಗ ಮತ್ತೆ ಬಲಿಷ್ಠವಾಗಲಿದೆ" ಎಂದು ಅಭಿಪ್ರಾಯಪಟ್ಟರು.

ಸದ್ಯ ಗಣೇಶ್ ಅಭಿನಯದ ಬಹುನಿರೀಕ್ಷಿತ 'ಪಿನಾಕ' ಹಾಗೂ 'ಬೃಂದಾವಿಹಾರಿ' ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಈ ಎರಡೂ ಚಿತ್ರಗಳು ಇದೇ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಅಕ್ಟೋಬರ್ 2ರಂದು 'ಪಿನಾಕ' ಹಾಗೂ ಅಕ್ಟೋಬರ್ 16ರಂದು 'ಬೃಂದಾವಿಹಾರಿ' ಪ್ರೇಕ್ಷಕರ ಮುಂದೆ ಬರಲಿವೆ ಎಂದು ಗಣೇಶ್ ಮಾಹಿತಿ ನೀಡಿದರು.