ಕೆಲಸಕ್ಕೆ ರಾಜಿನಾಮೆ ಕೊಟ್ಟ ಬಳಿಕ 'ಕರ್ನಾಟಕದ ಸಿಂಗಂ' ಸಿನಿಮಾಗೆ ಎಂಟ್ರಿ!
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜಿನಾಮೆ ಬಳಿಕ ರಾಜಕೀಯ ಸೇರುತ್ತಾರೆ ಎಂದೆಲ್ಲಾ ಊಹಾಪೋಹಗಳಿದ್ದವು. ಅಚ್ಚರಿ ಎಂದರೆ ಅವರು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಯಾವುದು ಆ ಸಿನಿಮಾ? ಇಲ್ಲಿದೆ ನೋಡಿ.
ಕರ್ನಾಟಕದ ಸಿಂಗಂ, ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದ ಖಡಕ್ ಪೊಲೀಸ್ ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಲಸಕ್ಕೆ ರಾಜಿನಾಮೆ ನೀಡಿ ರಾಜಕೀಯ ಸೇರುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ರಾಜಕೀಯ ಸೇರುವ ಬಗ್ಗೆ ಅವರು ಅಧಿಕೃತವಾಗಿ ಎಲ್ಲಿಯೂ ಕೇಳಿ ಬಂದಿಲ್ಲ. ಇದೀಗ ಅಣ್ಣಾಮಲೈ ಸಿನಿಮಾಗೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.
'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?
ನಮ್ಮ ಬೆಂಗಳೂರು ಮೂಲದ ಕೈಗಳಿಲ್ಲದ ಪ್ಯಾರಾ ಈಜುಪಟು ಕೆ ಎಸ್ ವಿಶ್ವಾಸ್ ಜೀವನಾಧಾರಿತ 'ಅರಬ್ಬೀ' ಎನ್ನುವ ಸಿನಿಮಾ ತೆರೆಗೆ ಬರುತ್ತಿದೆ. ಸ್ವತಃ ವಿಶ್ವಾಸ್ ಅವರೇ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಪ್ಯಾರಾ ಸ್ವಿಮ್ಮಿಂಗ್ನಲ್ಲಿ ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವಾಸ್ ಈ ಹಿಂದೆ ಡ್ಯಾನ್ಸ್ ಕಲಿತು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು. ಕೆನಡಾ ಹಾಗೂ ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದು ಕೊಟ್ಟವರು. ಹತ್ತನೇ ವಯಸ್ಸಲ್ಲಿ ಮನೆಯಿಂದ ಹೈಟೆನ್ಷನ್ ವೈರ್ ಮೇಲೆ ಬಿದ್ದೂ ಎರಡು ತಿಂಗಳುಗಳ ಕಾಲ ಕೋಮಾದಲ್ಲಿದ್ದರು. ವಿದ್ಯುತ್ ಸ್ಪರ್ಶಕ್ಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡರು. ವಿಶ್ವಾಸ್ರನ್ನು ರಕ್ಷಿಸಲು ಮುಂದಾದ ತಂದೆ ವಿದ್ಯುತ್ ಶಾಕ್ನಿಂದ ತೀರಿಹೋದರು ಹಾಗೂ ವಿಶ್ವಾಸ್ ಅವರಿಗೆ ಜೀವನದಲ್ಲಿ ಮತ್ತೆನಾದರೂ ಸಾಧನೆ ಮಾಡಬಹುದು ಎಂದು ಸ್ಪೂರ್ತಿ ತುಂಬಿದ ತಾಯಿಯನ್ನು 2009 ರಲ್ಲಿ ಕಳೆದುಕೊಂಡರು. ಇವರ ಜೀವನಾಧಾರಿತ ಕಥೆಯನ್ನು ಇಟ್ಟುಕೊಂಡು 'ಅರಬ್ಬಿ' ಎನ್ನುವ ಸಿನಿಮಾವನ್ನು ಮಾಡಲಾಗುತ್ತಿದೆ.
ಅಣ್ಣಾಮಲೈ ಅವರನ್ನು ಖಡಕ್ ಅಧಿಕಾರಿಯನ್ನಾಗಿ ನೋಡಿದ್ದೇವೆ. ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ನೋಡಿದ್ದೇವೆ. ತೆರೆ ಮೇಲೆ ಅವರು ಹೇಗೆ ಕಾಣಿಸಬಹುದೆಂಬ ಕುತೂಹಲ ಮೂಡಿಸಿದ್ದಾರೆ. ಇನ್ನೂ ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಸಿನಿಮಾಗೆ ಅಣ್ಣಾಮಲೈ ಪಡೆದ ಸಂಭಾವನೆ ಬರೋಬ್ಬರಿ 1 ರೂ! ಎನ್ನುವ ಸುದ್ದಿಯೂ ಇದೆ.