ಕೋರ್ಟ್‌ನಲ್ಲಿ ದುನಿಯಾ ವಿಜಯ್‌ ಸಲ್ಲಿಸಿರುವ ವಿಚ್ಛೇದನ ಅರ್ಜಿ ವಜಾ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ದಾಖಲಿಸಿರುವ ಅವರು, ‘ನನ್ನ ದಾಂಪತ್ಯ ಬದುಕಿನ ಹೋರಾಟದಲ್ಲಿ ನನಗೆ ಜಯ ಸಿಕ್ಕಿದ್ದು ಖುಷಿ ಕೊಟ್ಟಿದೆ. ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು. 

ಬೆಂಗಳೂರು (ಜೂ.15): ‘ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ, ಇಲ್ಲಿ ನನ್ನ ಜಯಕ್ಕಿಂತ ನನ್ನ ಪತಿ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಎನ್ನುವುದೇ ನನಗೆ ತೃಪ್ತಿ ಕೊಟ್ಟಿದೆ. ನನ್ನ ಜೀವ ಇರುವವರೆಗೂ ಅವರ ಜೊತೆಯಲ್ಲೇ ಇದ್ದು ಸಾಯುತ್ತೇನೆ. ಇನ್ನು ಮೇಲೆ ಕೀರ್ತಿಯನ್ನು ದುನಿಯಾ ವಿಜಯ್‌ 2ನೇ ಹೆಂಡತಿ ಎನ್ನಬೇಡಿ’ ಎಂದು ದುನಿಯಾ ವಿಜಯ್‌ ಪತ್ನಿ ನಾಗರತ್ನ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕೋರ್ಟ್‌ನಲ್ಲಿ ದುನಿಯಾ ವಿಜಯ್‌ ಸಲ್ಲಿಸಿರುವ ವಿಚ್ಛೇದನ ಅರ್ಜಿ ವಜಾ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ದಾಖಲಿಸಿರುವ ಅವರು, ‘ನನ್ನ ದಾಂಪತ್ಯ ಬದುಕಿನ ಹೋರಾಟದಲ್ಲಿ ನನಗೆ ಜಯ ಸಿಕ್ಕಿದ್ದು ಖುಷಿ ಕೊಟ್ಟಿದೆ. ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು, ಗಂಡನ ಮನೆಯೇ ನಿನ್ನ ಮನೆ, ಎಷ್ಟೇ ಕಷ್ಟಗಳು, ಏನೇ ಸಮಸ್ಯೆ ಬಂದರೂ ಅದೇ ಮನೆಯಲ್ಲೇ ಇರಬೇಕು, ಅವರೇ ನಿನಗೆ ಎಲ್ಲಾ ಎಂದಿದ್ದ ನನ್ನ ತಂದೆ- ತಾಯಿ ಮಾತನ್ನು ಶಿರಸಾ ಪಾಲಿಸುತ್ತೇನೆ’ ಎಂದಿದ್ದಾರೆ.

ಏನೋ ಆಗಿಹೋಯ್ತು ಸಾರ್‌... ತನಿಖೆ ವೇಳೆ ಪೊಲೀಸರೆದುರು ದರ್ಶನ್‌ ಕಣ್ಣೀರು: ನಖರಾ ಬಿಡದ ಪವಿತ್ರಾಗೌಡ

‘ನಮ್ಮ ಕಾನೂನಿನ ಪ್ರಕಾರ ಇನ್ನೊಂದು ಮದುವೆ ಆಗಬೇಕಾದರೆ ವಿಚ್ಛೇದನ ಆಗಬೇಕು. ಈ ಹಿನ್ನೆಲೆಯಲ್ಲಿ ನನ್ನ ಪತಿ ಇನ್ನೊಂದು ಮದುವೆಯಾಗಿಲ್ಲ’ ಎಂದು ಹೇಳಿದ್ದಾರೆ. ‘ಹೀಗಾಗಿ ಕೀರ್ತಿಯನ್ನು ಅವರ 2ನೇ ಹೆಂಡತಿ ಎಂದು ಮಾಧ್ಯಮಗಳು ಪ್ರಸಾರ ಮಾಡಬಾರದು. ನಮ್ಮ ಸಂಸಾರ ಚೆನ್ನಾಗಿರಲಿ ಅಂತ ಹರಸಿ ಹಾರೈಸಿ’ ಎಂದೂ ಅವರು ಹೇಳಿದ್ದಾರೆ.

ವಿಚ್ಛೇದನ ಅರ್ಜಿ ವಜಾ: ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ. ಕ್ರೌರ್ಯ ಆಧಾರದ ಮೇಲೆ ಪತ್ನಿ ನಾಗರತ್ನ ಅವರ ಜೊತೆಗಿನ ತಮ್ಮ ವಿವಾಹವನ್ನು ಅನೂಜಿರ್ತಗೊಳಿಸಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ದುನಿಯಾ ವಿಜಯ್‌ ಅರ್ಜಿ ಸಲ್ಲಿಸಿದ್ದರು.

ಆದರೆ, ಅರ್ಜಿಯಲ್ಲಿ ಪತ್ನಿ ವಿರುದ್ಧ ಮಾಡಿರುವ ಆರೋಪಗಳನ್ನು ಸಾಕ್ಷ್ಯಧಾರ ಸಮೇತ ಸಾಬೀತುಪಡಿಸುವಲ್ಲಿ ದುನಿಯಾ ವಿಜಯ್‌ ವಿಫಲವಾಗಿದ್ದಾರೆ. ಆದ್ದರಿಂದ ಇಬ್ಬರ ನಡುವಿನ ವಿವಾಹ ರದ್ದುಪಡಿಸಿ ವಿಚ್ಛೇದನ ಮಂಜೂರು ಮಾಡಲಾಗದು ಎಂದು ತೀರ್ಮಾನಿಸಿದ ನಗರದ 1ನೇ ಪ್ರಧಾನ ಕೌಟುಂಬಿಕ ನ್ಯಾಯಾಲಯ, ದುನಿಯಾ ವಿಜಯ್‌ ಅವರ ಅರ್ಜಿ ವಜಾಗೊಳಿಸಿ ಆದೇಶಿಸಿದೆ ಎಂದು ತಿಳಿದು ಬಂದಿದೆ. ವಿಸ್ತೃತ ಆದೇಶ ಇನ್ನೂ ಲಭ್ಯವಾಗಿಲ್ಲ.

ಬಿಎಸ್‌ವೈ ಕುಟುಂಬ ನಾಶಕ್ಕೆ ಕಾಂಗ್ರೆಸ್‌ ಕುತಂತ್ರ: ಎಚ್‌.ಡಿ.ಕುಮಾರಸ್ವಾಮಿ

ಪತ್ನಿ ನಾಗರತ್ನ ಅವರು ತಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು ದಾಂಪತ್ಯ ಜೀವನ ನಡೆಸುತ್ತಿಲ್ಲ. ಪೋಷಕರಿಗೆ ಗೌರವ ತೋರುತ್ತಿಲ್ಲ. ಪತ್ನಿಯೊಂದಿಗೆ ಮನಸ್ತಾಪ ಹೆಚ್ಚಾಗಿದೆ. ಇದರಿಂದ ತಮಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ. ಹಾಗಾಗಿ, ಕ್ರೌರ್ಯ ಆಧಾರದ ಮೇಲೆ ಪತ್ನಿ ನಾಗರತ್ನ ಅವರ ಜೊತೆಗಿನ ತಮ್ಮ ವಿವಾಹವನ್ನು ರದ್ದುಪಡಿಸಬೇಕು. ಆ ಮೂಲಕ ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ದುನಿಯಾ ವಿಜಯ್‌ ಅರ್ಜಿ ಸಲ್ಲಿಸಿದ್ದರು.