ಶಿವಣ್ಣ ನಟನೆಯ ಹೊಸ ಸಿನಿಮಾ 'ಸತ್ಯಮಂಗಳ!
ಮಮ್ಮಿ ಖ್ಯಾತಿಯ ಲೋಹಿತ್ ನಿರ್ದೇಶನ, ಖ್ಯಾತ ನಿರ್ಮಾಪಕ ಕೃಷ್ಣಸಾರ್ಥಕ್ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಡಾ.ಶಿವರಾಜ್ಕುಮಾರ್ ಸಹಿ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅನೌನ್ಸ್ ಮಾಡಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ನಟನೆಯ ಹೊಸ ಸಿನಿಮಾ ಘೋಷಣೆಯಾಗಿದೆ. ಹೆಸರು ‘ಸತ್ಯಮಂಗಳ’. ‘ಮಮ್ಮಿ’, ‘ದೇವಕಿ’ ಸಿನಿಮಾ ಖ್ಯಾತಿಯ ಭರವಸೆಯ ನಿರ್ದೇಶಕ ಲೋಹಿತ್ ಎಚ್ ನಿರ್ದೇಶನದ ಸಿನಿಮಾ ಇದು. ಪ್ಯಾಶನೇಟ್ ನಿರ್ಮಾಪಕ ಕೃಷ್ಣಸಾರ್ಥಕ್ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಪ್ರಸ್ತುತ ಅವರು ಶಿವಣ್ಣ, ಡಾಲಿ ಧನಂಜಯ್ ನಟನೆಯ ‘ಬೈರಾಗಿ’ ಸಿನಿಮಾ ನಿರ್ಮಿಸುತ್ತಿದ್ದಾರೆ.
ಕೃಷ್ಣಸಾರ್ಥಕ್ ಮತ್ತು ಲೋಹಿತ್ ಬಹಳ ದಿನಗಳಿಂದ ಜೊತೆಗೆ ಸಿನಿಮಾ ಮಾಡಬೇಕು ಎಂಬ ಉದ್ದೇಶ ಇದ್ದ ಜೋಡಿ. ಬೈರಾಗಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಲೋಹಿತ್ ತಾನು ಮಾಡಿರುವ ಕತೆಯ ಎಳೆಯನ್ನು ಕೃಷ್ಣಸಾರ್ಥಕ್ಗೆ ತಿಳಿಸಿದ್ದಾರೆ. ಅವರು ಖುಷಿಯಾಗಿ ಅದನ್ನು ಶಿವಣ್ಣರಿಗೆ ಒಪ್ಪಿಸಿದ್ದಾರೆ. ನಿರ್ಮಾಪಕ, ನಾಯಕ ಇಬ್ಬರೂ ಒಪ್ಪಿದ ಕಾರಣ ಲೋಹಿತ್ ಮತ್ತಷ್ಟುತನ್ಮಯತೆ ಕತೆ ಸಿದ್ಧಗೊಳಿಸಿ ಈಗ ಶೂಟಿಂಗ್ ಆರಂಭಿಸುತ್ತಿದ್ದಾರೆ.
ಶಿವರಾಜ್ಕುಮಾರ್ 124ನೇ ಚಿತ್ರ 'ನೀ ಸಿಗೋವರೆಗೂ' ಶೂಟಿಂಗ್ ಶುರು!‘ಶಿವಣ್ಣನ ನಟಿಸಿದ 123 ಸಿನಿಮಾಗಳಲ್ಲೂ ಇರದ ಕತೆ, ದೃಶ್ಯ ಪರಿಕಲ್ಪನೆ ಲೋಹಿತ್ ಬರೆದಿರುವ ಈ ಸಿನಿಮಾದಲ್ಲಿದೆ. ರೆಗ್ಯುಲರ್ ಅಲ್ಲದ, ವಿಭಿನ್ನ ರೀತಿಯ ಸಿನಿಮಾ ಇದು. ಲೋಹಿತ್ ಸಣ್ಣ ಬಜೆಟ್ನಲ್ಲಿ ಉತ್ತಮ ಸಿನಿಮಾ ಮಾಡಿದ್ದಾರೆ. ಈಗ ಅವರು ದೊಡ್ಡ ಹೀರೋನ, ದೊಡ್ಡ ಬಜೆಟ್ ಸಿನಿಮಾ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ವಿಲನ್ಗಳು, ವಿಶಿಷ್ಟರೀತಿಯ ಕತೆ ಇದೆ. ಒಳ್ಳೆಯ ಸಿನಿಮಾ ಮಾಡುತ್ತಿದ್ದೇನೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಕೃಷ್ಣಸಾರ್ಥಕ್.
‘ಶಿವಣ್ಣ ಜೊತೆಗೆ ಸಿನಿಮಾ ಮಾಡಬೇಕು ಅನ್ನುವುದು ಪ್ರತಿಯೊಬ್ಬ ಸಿನಿಮಾ ನಿರ್ದೇಶಕನ ಕನಸು. ಈ ಸಿನಿಮಾ ಮೂಲಕ ಅಬಿಮಾನಿಯೊಬ್ಬನ ಕನಸು ನನಸಾಗುತ್ತಿದೆ. ಅನೇಕ ಎಲಿಮೆಂಟ್ಗಳಿರುವ ಸಿನಿಮಾ ಇದು. ಒಂದೊಳ್ಳೆ ಕಂಟೆಂಟ್ ಅನ್ನು ಕಮರ್ಷಿಯಲ್ ರೀತಿಯಲ್ಲಿ ಪ್ರಸ್ತುತ ಪಡಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಲೋಹಿತ್ ಎಚ್. ಫಸ್ಟ್ಲುಕ್, ಟೈಟಲ್ ಬಿಡುಗಡೆ ಆಗಿದೆ. ಕಾಡಿನ ದಾರಿಯಲ್ಲಿ ಚಿರತೆ ಸಿನಿಮಾದ ಕುರಿತ ಕುತೂಹಲವನ್ನು ಹೆಚ್ಚು ಮಾಡಿದೆ.