Asianet Suvarna News Asianet Suvarna News

Raghavendra Rajkumar: ಅಪ್ಪು ನೆನಪಲ್ಲಿ ಒಂದು ಲಕ್ಷ ಸಸಿ ನೆಡಲು ನಿರ್ಧಾರ

ಕರ್ನಾಟಕ ರತ್ನ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮ ದಿನದ ಅಂಗವಾಗಿ ರಾಜ್ಯಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಿದ್ದೇವೆ ಎಂದು ಹಿರಿಯ ಸೋದರ ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು.

Decision to plant One Lakh Saplings in Memory of Puneeth Rajkumar gvd
Author
Bangalore, First Published Feb 2, 2022, 7:47 AM IST | Last Updated Feb 2, 2022, 8:13 AM IST

ಬೆಂಗಳೂರು (ಫೆ.02): ಕರ್ನಾಟಕ ರತ್ನ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನ್ಮ ದಿನದ ಅಂಗವಾಗಿ ರಾಜ್ಯಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಿದ್ದೇವೆ ಎಂದು ಹಿರಿಯ ಸೋದರ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಹೇಳಿದರು.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಲಾಲಿ ಲಾಲಿ ಮಲಗು ರಾಜಕುಮಾರ’ ಗೀತ ನಮನ ಕಾರ್ಯಕ್ರಮಕ್ಕೆ ಸಸಿ ನೆಟ್ಟು ಚಾಲನೆ ನೀಡಿ ಮಾತನಾಡಿದ ಅವರು, ಮಾ.17ರಂದು ಪುನೀತ್‌ ಹುಟ್ಟುಹಬ್ಬ. ಅಷ್ಟರೊಳಗಾಗಿ ರಾಜ್ಯಾದ್ಯಂತ ಒಂದು ಲಕ್ಷ ಗಿಡ ನೆಡಲಾಗುವುದು. ಪ್ರತಿ ಅಭಿಮಾನಿಯು ಗಿಡ ನೆಟ್ಟು ವಿಶೇಷವಾಗಿ ಜನ್ಮದಿನ (Birthday) ಆಚರಿಸುವ ಮೂಲಕ ಅಪ್ಪು ಹೆಸರು ಹಸಿರಾಗಿಸಬೇಕು ಎಂದರು.

ಅಭಿಮಾನಿಗಳು ಅಪ್ಪು ಸಿನಿಮಾಗಳಿಗಿಂತಲೂ ಅವರ ಸಾಮಾಜಿಕ ಕಾರ್ಯ, ಸೇವೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅಪ್ಪು ಸಾಮಾಜಿಕ ಸೇವೆ ನಿರ್ವಹಿಸುವುದರಲ್ಲಿ ಸಮಾಜಕ್ಕೆ ಆದರ್ಶವಾಗಿದ್ದಾರೆ. ಪರಿಸರ ಜಾಗೃತಿವುಳ್ಳ ‘ಗಂಧದಗುಡಿ’ (Gandhada Gudi) ಸಾಕ್ಷ್ಯಚಿತ್ರ ಲಕ್ಷಾಂತರ ಮಂದಿಗೆ ಪ್ರೇರಣೆ ಆಗಿದೆ. ಅದರ ಚಿತ್ರೀಕರಣಕ್ಕಾಗಿ ಅಪ್ಪು ಮೂರು ತಿಂಗಳು ಮನೆಬಿಟ್ಟು ರಾಜ್ಯದ ಕಾಡು ಮೇಡು ಸಂಚರಿಸಿ ಚಿತ್ರೀಕರಣ ಮಾಡಿದ್ದಾರೆ. ಅವರು ಮಾಡಿದ ಕೆಲಸಗಳು ನಮ್ಮೆಲ್ಲರ ಮುಂದೆ ಆದರ್ಶವಾಗಿ ನಿಂತಿವೆ. ಅವರ ಚಿಂತನೆ, ಆದರ್ಶ ಮುಂದುವರೆಸಲು ಪಣತೊಟ್ಟಿದ್ದೇನೆ ಎಂದು ವಿವರಿಸಿದರು.

James Poster Release: ಆರ್ಮಿ ಆಫೀಸರ್ ಲುಕ್‌ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್

ಇದೇ ವೇಳೆ ‘ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ, ನೀನಿಷ್ಟು ಬೇಗ ಹೋಗೊ ಸುದ್ದಿ ...’ ಎಂಬ ವಿಶೇಷ ಹಾಡನ್ನು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಲಾಯಿತು. ಬೆಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ, ಗಾಯಕ ರಾಜೇಶ್‌ ಕೃಷ್ಣನ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಹಾಗೂ ಗೀತ ರಚನಾಕಾರ ನಾಗೇಂದ್ರ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

ಇನ್ನು ಪುನೀತ್ ಅಗಲಿ ಮೂರು ತಿಂಗಳುಗಳೇ ಕಳೆದು ಹೋಗಿದೆ. ಈ ಹಿನ್ನೆಲೆಯಲ್ಲಿ ಅಪ್ಪು ನೆನಪಿಗಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಗಿಡ ಸೇರಿದಂತೆ 500 ಗಿಡಗಳನ್ನು ಅಭಿಮಾನಿಗಳಿಗೆ ದಾನವಾಗಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳು ಭಕ್ತರಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಪುಣ್ಯಭೂಮಿಗೆ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಅಭಿಮಾನಿಗಳಿಗೆ ಗಿಡ ಕೊಟ್ಟು ಅವರಿಂದಲೇ ಆ ಸಸಿಗಳನ್ನು ನೆಡಲು ಯೋಚಿಸಿದ್ದೇವೆ. ಅಪ್ಪು ನಿಧನರಾಗುವ ಮುನ್ನ ಕಾಡಿನಲ್ಲಿ ಕೆಲಸ ಮಾಡಿದ್ದರು. ಕಾಡು, ಹಸಿರು ಅಂದರೆ ಅಪ್ಪುಗೆ ಬಹಳ ಇಷ್ಟ. ಹಾಗಾಗಿ ಗಿಡ ನೀಡುವ ಕೆಲಸ ಶುರು ಮಾಡಿದ್ದಿವಿ ಎಂದು ಹೇಳಿದರು. 

ಇತ್ತೀಚೆಗಷ್ಟೆ ಪುನೀತ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಚಿತ್ರದ ಪೋಸ್ಟರ್ (Poster) ಬಿಡುಗಡೆಯಾಗಿತ್ತು. ಪುನೀತ್ ಗನ್ ಹಿಡಿದು ಖಡಕ್ ಆರ್ಮಿ ಆಫೀಸರ್ (Army Officer) ಆಗಿ ಮಿಂಚಿದ್ದರು. ಅದರಲ್ಲಿಯೂ ಪೋಸ್ಟರ್‌ನಲ್ಲಿರುವ 'ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್' ಎಂಬ ಸಾಲುಗಳು ಎಲ್ಲರ ಗಮನ ಸೆಳೆದಿತ್ತು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿ ಐದು ಭಾಷೆಯಲ್ಲಿ 'ಜೇಮ್ಸ್' ಸಿನಿಮಾ ತೆರೆಕಾಣಲಿದೆ. 

Rajamouli RRR: ಜೇಮ್ಸ್‌ಗೆ ದಾರಿ ಮಾಡಿಕೊಟ್ಟ ರಾಜಮೌಳಿ, RRR ರಿಲೀಸ್ ಡೇಟ್ ಫಿಕ್ಸ್!

ನಿರ್ದೇಶಕ ಚೇತನ್ ಕುಮಾರ್ (Chetan Kumar)  'ಜೇಮ್ಸ್' ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 

'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದು, ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಹಾಗೂ ಮುಖೇಶ್ ರಿಷಿ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಕಿಶೋರ್ ಪತ್ತಿಕೊಂಡ (Kishore Pattikonda) 'ಜೇಮ್ಸ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Latest Videos
Follow Us:
Download App:
  • android
  • ios