ರಾಜವೀರ ಮದಕರಿನಾಯಕ ಸಿನಿಮಾ ಸದ್ಯಕ್ಕಿಲ್ಲ: ದರ್ಶನ್
ನಟ ದರ್ಶನ್ ಅವರ ‘ರಾಬರ್ಟ್’ ಬಿಡುಗಡೆ ನಂತರ ಈಗಾಗಲೇ ಮುಹೂರ್ತ ಮುಗಿಸಿಕೊಂಡಿರುವ ‘ರಾಜವೀರ ಮದಕರಿನಾಯಕ’ ಚಿತ್ರ ಶೂಟಿಂಗ್ ಅಂಗಳಕ್ಕೆ ಹೋಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ, ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾ ಸದ್ಯಕ್ಕಿಲ್ಲ ಎಂಬುದನ್ನು ಸ್ವತಃ ದರ್ಶನ್ ಹೇಳಿದ್ದಾರೆ.
ದರ್ಶನ್ ಅವರೇ ಹೇಳಿರುವಂತೆ ‘ರಾಜವೀರ ಮದಕರಿನಾಯಕ’ ಚಿತ್ರಕ್ಕಿಂತ ಮೊದಲು ಮತ್ತೊಂದು ಸಿನಿಮಾ ಸೆಟ್ಟೇರಲಿದೆ. ಅದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ.
"
‘ಬಹು ಕೋಟಿ ವೆಚ್ಚದ ಚಿತ್ರಗಳನ್ನು ಈಗ ಆರಂಭಿಸುವುದು ಅಷ್ಟುಸುಲಭವಲ್ಲ. ಕೊರೋನಾ ಕಾರಣಕ್ಕೆ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಪ್ರೇಕ್ಷಕರು ಕೂಡ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂಥ ಹೊತ್ತಿನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಹಣ ಹಾಕಿಸುವುದು ಬೇಡ ಅಂತ ನಾನೇ ಹಿಂದಕ್ಕೆ ಸರಿದಿದ್ದೇನೆ. ಎಲ್ಲವೂ ತಿಳಿಯಾದ ಮೇಲೆ ನಿಧಾನಕ್ಕೆ ರಾಜವೀರ ಮದಕರಿ ಚಿತ್ರಕ್ಕೆ ಚಾಲನೆ ಕೊಡುತ್ತೇವೆ.ಆ ಸಿನಿಮಾ ನೋಡಿದವರು ಎಂಥ ಸಿನಿಮಾ ಮಾಡಿದ್ದಾರೆ ಅಂದುಕೊಳ್ಳಬೇಕು. ಆ ರೀತಿ ಮಾಡೋಣ ಎಂದುಕೊಂಡಿದ್ದೇವೆ. ಹೀಗಾಗಿ ಆ ಚಿತ್ರಕ್ಕಿಂತ ಮೊದಲು ಮತ್ತೊಂದು ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ನಾನು ಸದ್ಯದಲ್ಲೇ ಹೇಳುತ್ತೇನೆ. ರಾಬರ್ಟ್ ಸೇರಿದರೆ ಈ ವರ್ಷ ನನ್ನ ನಟನೆಯ ಎರಡು ಚಿತ್ರಗಳು ತೆರೆಗೆ ಬರಲಿವೆ. ಜತೆಗೆ ಮತ್ತೊಂದು ಸಿನಿಮಾ ಮುಹೂರ್ತ ಮಾಡಿಕೊಳ್ಳಲಿದೆ’ ಎಂದಿದ್ದಾರೆ ದರ್ಶನ್.
ಜಗಳಕ್ಕೆ ಶುಭಮಂಗಳ; ಜಗ್ಗೇಶ್ ಮತ್ತು ದರ್ಶನ್ ಅಣ್ತಮ್ಮ
‘ರಾಜವೀರ ಮದಕರಿನಾಯಕ’ ಚಿತ್ರದ ನಂತರ ‘ಕ್ರಾಂತಿವೀರ ಸಿಂಧೂರ ಲಕ್ಷ್ಮಣ’ ಸಿನಿಮಾ ಸೆಟ್ಟೇರಲಿದೆ.