ನಟ ದರ್ಶನ್ ಜೈಲಿನಲ್ಲಿದ್ದರೆ, ಹೊರಗಡೆ ಅವರ ಆಪ್ತ ಬಳಗದ ಯುವ ನಟರಾದ ಧನ್ವೀರ್ ಮತ್ತು ಝೈದ್ ಖಾನ್ ನಡುವೆ ಮನಸ್ತಾಪ ಶುರುವಾಗಿದೆ. ದರ್ಶನ್‌ಗೆ ಕಷ್ಟಕಾಲದಲ್ಲಿ ಝೈದ್ ಖಾನ್ ಸಹಾಯ ಮಾಡಿಲ್ಲ ಮತ್ತು ಸಿನಿಮಾ ಪ್ರಚಾರಕ್ಕೆ ಮಾತ್ರ ಅವರ ಹೆಸರು ಬಳಸಿಕೊಂಡಿದ್ದಾರೆ ಎಂದು ಧನ್ವೀರ್ ಮಾತಿನಲ್ಲೇ ತಿವಿದಿದ್ದಾರೆ.

ನಟ ದರ್ಶನ್ ಮತ್ತೆ ಜೈಲು ಸೇರಿ ವರ್ಷಗಳಾಗ್ತಾ ಬಂತು. ಇನ್ನೇನು ನಮ್ಮ ಬಾಸ್​ ಹೊರಗೆ ಬಂದು ಬಿಡುತ್ತಾರೆ ಆ ಮೇಲೆ ನಮ್ಮದೇ ರಾಜ್ಯಭಾರ ಅಂತ ಫ್ಯಾನ್ಸ್​ ಕಾಯ್ತಾ ಇದ್ದಾರೆ. ಈ ಜೈಲು ಸಹವಾಸ ಸಾಕಪ್ಪೋ ಸಾಕು ಅಂತ ಪ್ರತಿ ದಿನ ದರ್ಶನ್ ಅಣ್ಣ ಕೊರಗುತ್ತಿದ್ದಾರೆ. ಆದ್ರೆ ಹೊರಗಡೆ ದರ್ಶನ್ ಬೆಳಸಿದ ತಮ್ಮಂದಿರು ಕಾಲ್​​ ಕೆರೆದು ಕಿತ್ತಾಟಕ್ಕೆ ನಿಂತು ಬಿಟ್ಟಿದ್ದಾರೆ. ಹಾಗಾದ್ರೆ ದರ್ಶನ್ ಬಂಟರಾದ ಧನ್ವೀರ್​ ಹಾಗು ಝೈದ್ ಖಾನ್ ಮಧ್ಯೆ ಏನಿದು ಜಗಳ? ಈ ಎಕ್ಸ್‌ಕ್ಲೂಸೀವ್ ಸ್ಟೋರಿಯಲ್ಲಿ ನೋಡೋಣ ಬನ್ನಿ.

ಸ್ನೇಹ ಮರೆತರಾ ಝೈದ್ ಖಾನ್-ಧನ್ವೀರ್?

ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಗಾದೆ ಮಾತು ಒಡ ಹುಟ್ಟಿದವರಿಗೆ ಸೂಟ್​ ಆಗುತ್ತೆ. ಆದ್ರೆ ಸ್ನೇಹಿತರಾದ್ರೆ ಅವರು ದೂರಾಗೋ ಮಾತೇ ಇಲ್ಲ ಅಂತಾರೆ. ಆದ್ರೆ ಈಗ ಸ್ಯಾಂಡಲ್​ವುಡ್​ ಈ ಇಬ್ಬರು ಯುವ ನಟರ ಮಧ್ಯೆ ಅದು ಸುಳ್ಳಾಗಿದೆಯಾ? ಹೌದು ಎನ್ನುತ್ತಿದೆ ಗಾಂಧಿನಗರ. ಆ ಗೆಳೆಯರೇ ದರ್ಶನ್ ಬಂಟ ಧನ್ವೀರ್​ ಹಾಗು ಝೈದ್ ಖಾನ್.

ಯೆಸ್, ಝೈದ್​ ಖಾನ್ ಹಾಗು ಧನ್ವೀರ್​ ದರ್ಶನ್ ಆಪ್ತ ಬಳಗದ ಹುಡುಗರು. ಒಂದ್​ ರೀತಿ ದರ್ಶನ್ ಎಡ ಬಲದಂತೆ ಇಬ್ಬರು ಇದ್ದವರು. ಝೈದ್​ ಖಾನ್ ಇವತ್ತು ಚಿತ್ರರಂಗದಲ್ಲಿ ಹೆಸರು ಮಾಡೋಕೆ ಕಾರಣ ದರ್ಶನ್​ ಕೂಡ ಹೌದು. ಹಾಗೆ ಧನ್ವೀರ್​ ಬೆಳೆಯಲು ಬೆನ್ನ ಹಿಂದೆ ಇರೋದೂ ಇದೇ ದರ್ಶನ್. ಆದ್ರೆ ಈಗ ದಚ್ಚು ಬಂಟರ ಮಧ್ಯೆಯೇ ಸಂಬಂದ ಹಳಸಿದೆ. ಧನ್ವೀರ್​ - ಝದ್​ ಖಾನ್​​​ ಮೇಲೆ ಮಾತಿನ ಸಮರ ಸಾರಿದ್ದಾರೆ.

ದರ್ಶನ್‌ ಲೈಫ್‌ನಲ್ಲಿ ಎಲ್ಲವೂ ಸರಿಯಿದ್ದಾಗ ನೂರಾರು ಮಂದಿ ಓಡಾಡಿಕೊಂಡಿದ್ರು. ಆದ್ರೆ ಈಗ ದಾಸನ ಸುತ್ತ ಮುತ್ತ ಇದ್ದವರು ಉಲ್ಟಾ ಹೊಡೆದಿದ್ದಾರೆ. ದರ್ಶನ್​​ರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅಂತವರಲ್ಲಿ ನಟ ಝೈದ್ ಖಾನ್ ಕೂಡ ಒಬ್ರಂತೆ. ಇದನ್ನ ನಾವ್ ಹೇಳುತ್ತಿದ್ದ ನಟ ಧನ್ವೀರ್ ಆಡಿರೋ ಮಾತಿನ ಅರ್ಥ ಇದಂತೆ.

ಮಾತಿನಲ್ಲೇ ಝೈದ್ ಖಾನ್‌ಗೆ ತಿವಿದರಾ ಧನ್ವೀರ್..?

ನಟ ದರ್ಶನ್​ ಜೈಲು ಸೇರಿದ ಮೇಲೆ ಅವರನ್ನ ನೋಡೋಕೆ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಅವರ ಪುತ್ರ ಝೈದ್ ಖಾನ್ ಹೋಗಿಲ್ಲ ಅನ್ನೋ ಬೇಸರ ದಚ್ಚು ಫ್ಯಾನ್ಸ್‌ಗೆ ಇದೆ. ಆದ್ರೆ ಇದೇ ಟೈಮ್​ನಲ್ಲಿ ಝೈದ್​ ಖಾನ್​ ತನ್ನ ಕಲ್ಟ್​ ಸಿನಿಮಾ ಟೈಮ್​​ನಲ್ಲಿ ಆಡಿದ್ದ ಮಾತುಗಳು ಎಲ್ಲೋ ಒಂದು ಕಡೆ ದರ್ಶನ್‌ಗೆ ಹೇಳಿದಂತಿತ್ತು. ಈಗ ಧನ್ವೀರ್ ಆಡಿದ ಮಾತುಗಳು ಝೈದ್​ ಖಾನ್‌ಗೆ ಟಾಂಗ್ ಕೊಟ್ಟಿದ್ದು ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿದೆ.

ಆಸ್ತಿ ಅಧಿಕಾರ ಇದ್ರು ದರ್ಶನ್‌ಗೆ ಸಹಾಯ ಮಾಡಿಲ್ಲ!

ನಟ ದರ್ಶನ್ ಜೈಲಿಂದ ಬರ್ತಿದ್ದಂತೆ ಬಿರಿಯಾನಿ ಕಳ್ಸಿದ್ರಂತೆ. ಇಷ್ಟು ದಿನ ಆಯ್ತಲ್ಲ. ಅವರಿಗೆ ಜೈಲಿಗೆ ಹೋಗಿ ಭೇಟಿ ಮಾಡುವುದಕ್ಕೆ ಅವಕಾಶ ಇರಲಿಲ್ವ? 23ನೇ ತಾರೀಕು ಸಿನಿಮಾ ರಿಲೀಸ್ ಆಗುತ್ತೆ. ಅವರನ್ನು ನೋಡುವುದಕ್ಕೆ 21ನೇ ತಾರೀಕು ಜೈಲಿಗೆ ಯಾಕೆ ಹೋಗ್ಬೇಕು? ಇಷ್ಟು ವರ್ಷ ಗ್ಯಾಪ್ ಇರಲಿಲ್ವ ನೋಡುವುದಕ್ಕೆ. ಆರ್‌ಆರ್‌ ನಗರ ಮನೆ ಅಡ್ರೆಸ್ ಗೊತ್ತಿರಲಿಲ್ವ? ಅಧಿಕಾರ ಎಲ್ಲಾ ಇತ್ತು ಹೋಗಿ ಭೇಟಿ ಮಾಡುವುದಕ್ಕೆ ಆಗಲಿಲ್ವ? ಸಿನಿಮಾ ಪ್ರಮೋಷನ್‌ಗೆ ಅಣ್ಣ ಬಾಸ್ ಅಂದ್ಕೊಂಡು ಬಂದ್ಬಿಟ್ರು. ಈಗ ಬಂದು ಮೀಡಿಯಾ ಮುಂದೆ ಡೈಲಾಗ್ ಹೊಡೀತಾರೆ. ದರ್ಶನ್ ಸರ್​ ಜೈಲಿನಿಂದ ಬಂದ ಮಾರನೇ ದಿನ ಪಾತ್ರಗಟ್ಲೆ ಬಿರಿಯಾನಿ ಕಳಿಸೋರು ಇವರು ಅಂತ ಮಾತಿನಲ್ಲೇ ಬಾಣ ಬಿಟ್ಟಿದ್ದಾರೆ ಧನ್ವೀರ್.

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹೆಸರು ಬರುವುದಕ್ಕೂ ಮುನ್ನ ಇವರ ಸಂಬಂಧ ಚೆನ್ನಾಗಿತ್ತು. ಜಮೀರ್ ಅಹಮದ್ ಖಾನ್ ಮನೆಗೆ ದರ್ಶನ್ ಬಿರಿಯಾನಿ ಸವಿದು ಬಂದಿದ್ದೂ ಇದೆ. ಝೈದ್ ಖಾನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಅವರ ಬೆಂಬಲಕ್ಕೆ ನಿಂತಿದ್ರು ದರ್ಶನ್. ಆದ್ರೆ ದರ್ಶನ್ ಜೈಲು ಸೇರಿದಾಗ ಅವರ ನೆರವಿಗೆ ಜಮೀರ್ ಅಹಮದ್‌ ಖಾನ್ ಆಗಲಿ, ಝೈದ್ ಖಾನ್ ಆಗಲಿ ಬರಲಿಲ್ಲ. ಕಲ್ಟ್​ ಸಿನಿಮಾ ಬಿಡುಗಡೆ ಟೈಮ್​ನಲ್ಲಿ ಝೈದ್ ಖಾನ್ ಹೋದಲ್ಲಿ ಬಂದಲ್ಲೆಲ್ಲಾ ದರ್ಶನ್ ಹೆಸರು ಹೇಳಿದ್ರು. ಇದನ್ನೆಲ್ಲಾ ಗಮನಿಸಿರೋ ಧನ್ವೀರ್ ಈಗ ಮಾತಿನ ಬಾಣ ಬಿಟ್ಟಿದ್ದಾರೆ.