ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿನಯದ 'ಕನ್ನಡಿಗ' ಸಿನಿಮಾ ಓಟಿಟಿ ಪ್ಲಾಟ್​ಫಾರ್ಮ್‌ನಲ್ಲಿ ಇದೇ ಡಿಸೆಂಬರ್ 17ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ರವಿಚಂದ್ರನ್​ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್​ ವಿ.ರವಿಚಂದ್ರನ್ (V.Ravichandran)​ ಅಭಿನಯದ ಬಹುನಿರೀಕ್ಷಿತ 'ದೃಶ್ಯ 2' (Drishya 2) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೆ ಇತ್ತ ರವಿಚಂದ್ರನ್ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಯಾಗಲು ಸಜ್ಜಾಗಿದೆ. ಹೌದು! ರವಿಚಂದ್ರನ್ 'ದೃಶ್ಯ 2' ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಅವರು 'ಕನ್ನಡಿಗ'ನಾಗಿ (Kannadiga) ಬರಲು ಸಜ್ಜಾಗಿದ್ದಾರೆ. 'ಜಟ್ಟ', 'ಮೈತ್ರಿ' ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಗಿರಿರಾಜ್ (Giriraj)​ ಆಕ್ಷನ್ ಕಟ್ ಹೇಳಿರುವ 'ಕನ್ನಡಿಗ' ಚಿತ್ರವು ಓಟಿಟಿ ಪ್ಲಾಟ್​ಫಾರ್ಮ್‌ನಲ್ಲಿ​ (OTT Platform) ಬಿಡುಗಡೆಯಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಕೋವಿಡ್ ಕಾರಣದಿಂದ ಅನೇಕ ಸಿನಿಮಾಗಳ ಬಿಡುಗಡೆಗೆ ತಡವಾಗಿದ್ದು, ಅಂತಹ ಎಲ್ಲ ಚಿತ್ರಗಳು ಒಂದೇ ಬಾರಿ ಚಿತ್ರಮಂದಿಗಳಿಗೆ ಲಗ್ಗೆ ಇಡುತ್ತಿವೆ. ಹಾಗಾಗಿ ಎಲ್ಲ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದು ಅಸಾಧ್ಯ. ಹಾಗಾಗಿ ಕೆಲವು ಚಿತ್ರತಂಡಗಳು ಓಟಿಟಿ ಪ್ಲಾಟ್​ಫಾರ್ಮ್​ ಕಡೆಗೆ ಗಮನ ಹರಿಸಿದ್ದು, ವಿ.ರವಿಚಂದ್ರನ್ ಅಭಿನಯದ 'ಕನ್ನಡಿಗ' ಸಿನಿಮಾ ಥಿಯೇಟರ್‌ಗಿಂತ ಮೊದಲು, ಟಿವಿಗಿಂತ ಮೊದಲು ಇದೇ ಡಿಸೆಂಬರ್ 17ರಂದು 'ಜೀ5' (Zee5) ಒಟಿಟಿ ಮೂಲಕ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ರವಿಚಂದ್ರನ್​ ಅವರು ವಿಶೇಷವಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು,ಐತಿಹಾಸಿಕ ಕಥಾಹಂದರ ಹೊಂದಿದೆ. ಈ ಸಿನಿಮಾದಲ್ಲಿ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ರವಿಚಂದ್ರನ್​ ಕಾಣಿಸಿಕೊಂಡಿದ್ದಾರೆ.

Drishya 2 Trailer: ಕ್ರೇಜಿಸ್ಟಾರ್​ ವಿ.ರವಿಚಂದ್ರನ್‌ಗೆ ಕಿಚ್ಚ ಸುದೀಪ್ ಸಾಥ್

ಕನ್ನಡ ಭಾಷೆ, ಲಿಪಿಯ ಬಗ್ಗೆ ಹಾಗೂ ಇದನ್ನು ಹೇಗೆ ಉಳಿಸಿಕೊಂಡು ಬಂದಿದ್ದೇವೆ, ಬೆಳೆಸುವುದು ಹೇಗೆ ಎನ್ನುವ ವಿಷಯವನ್ನು ಆಧಾರವಾಗಿಟ್ಟುಕೊಂಡು ಗಿರಿರಾಜ್‌ ಅವರು ಕಥೆ ಹೆಣೆದಿದ್ದು, ಸಂಕಮ್ಮಬ್ಬೆ ಪಾತ್ರದಲ್ಲಿ ಪಾವನಾ ಗೌಡ (Pavana Gowda) ನಟಿಸಿದ್ದಾರೆ. ಕಿಟ್ಟಲ್ ಪಾತ್ರದಲ್ಲಿ ಜೆಮಿ ವಾಲ್ಟರ್ ಕಾಣಿಸಿಕೊಳ್ಳಲಿದ್ದಾರೆ. ಕಮರೀಲ ಭಟ್ಟನಾಗಿ ಚಿ. ಗುರುದತ್, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ, ಮಲ್ಲಿನಾಥನಾಗಿ ಬಾಲಾಜಿ ಮನೋಹರ್ ಮತ್ತು ಅಚ್ಯುತ್ ಕುಮಾರ್ ಹರಿಗೋಪಾಲನ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಣಿ ಚಿನ್ನ ಬೈರಾದೇವಿ ಪಾತ್ರದಲ್ಲಿ ನಟಿ ಸುಮಲತಾ ಅಂಬರೀಷ್ (Sumalatha Ambareesh) ಅಭಿನಯಿಸಿದ್ದಾರೆ. ಚಿಕ್ಕಮಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೆದಿದೆ.

ನಟ ರಮೇಶ್​ ಅರವಿಂದ್ (Ramesh Aravind)​ ಅವರು ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿ 'ನಮ್ಮ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರು ಬಹಳ ವಿಭಿನ್ನವಾದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಮೊದಲು ಶಬ್ದಕೋಶವನ್ನು ಬರೆಯಲು ಸಹಾಯ ಮಾಡಿದವನ ಕಥೆ ಅಂತ ನನಗೆ ಅನಿಸುತ್ತಾ ಇದೆ. ಇದೇ ಡಿಸೆಂಬರ್ 17ರಂದು ಜೀ5ನಲ್ಲಿ ಈ ಚಿತ್ರ ನೀವು ನೋಡಬಹುದು ಎಂದು ಚಿತ್ರಕ್ಕೆ ರಮೇಶ್​ ಶುಭ ಹಾರೈಸಿದ್ದಾರೆ. ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್. ರಾಜ್​ಕುಮಾರ್ (N.S.Rajkumar) ಈ ಚಿತ್ರವನ್ನು ನಿರ್ಮಿಸಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು (Ravi Basrur) ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Drishya 2: ರಾಜೇಂದ್ರ ಪೊನ್ನಪ್ಪ ಕೌಶಲ್ಯತೆ ಮೈನವಿರೇಳಿಸುತ್ತದೆ ಎಂದ ಸಿಂಪಲ್ ಸುನಿ

ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ‌ ನಿರ್ದೇಶನ, ಜಿ.ಎಸ್.ವಿ. ಸೀತಾರಾಂ ಕ್ಯಾಮರಾ ಕೈಚಳಕ ಹಾಗೂ ಡಿಫರೆಂಟ್ ಡ್ಯಾನಿ ‌ಸಾಹಸ ನಿರ್ದೇಶನ‌ 'ಕನ್ನಡಿಗ' ಚಿತ್ರಕ್ಕಿದೆ. ಇನ್ನು ವಿಶೇಷವಾಗಿ 'ಕನ್ನಡಿಗ' ಸಿನಿಮಾದ ಟೈಟಲ್ ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shiva Rajkumar) ಹಾಡಿದ್ದಾರೆ. 'ಸರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ, ಕನ್ನಡ ನಮ್ ಪಾಲ್ಗೆ' ಎಂಬ ಹಾಡನ್ನು ಶಿವಣ್ಣ ಹಾಡಿದ್ದು, ಈ ಹಾಡಿಗೆ ಖ್ಯಾತ ನಿರ್ದೇಶಕ ಸಂತೋಷ್​ ಆನಂದ್​ರಾಮ್​ (Santhosh Ananddram) ಅವರು ಸಾಹಿತ್ಯ ಬರೆದಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ.