ನಮ್ಮ ಪ್ರೀತಿಯ ಪುನೀತ್ ರಾಜ್‍ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ ಬಂದಿದ್ದೇವೆ. ಅವರ ಕುಟುಂಬದವರ ಜೊತೆಗೆ ನಾವು ಇರುತ್ತೇವೆ. ಅಪ್ಪು ಕನ್ನಡದ ಆಸ್ತಿ. ಇನ್ನು ಮುಂದೆ ಸಾಕಷ್ಟು ಕಾರ್ಯಕ್ರಮಗಳು ನಡೆಯಬೇಕಿದೆ. 

ಬೆಂಗಳೂರು (ನ.05): ಸ್ಯಾಂಡಲ್‌ವುಡ್‌ನ ಮೇರು ನಟ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನರಾಗಿದ್ದು, ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸುಮಾರು 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪು ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. 

ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಸಿನಿಮಾ ರಂಗದ ಗಣ್ಯರು, ರಾಜಕಾರಣಿಗಳು ಆಗಮಿಸುತ್ತಿದ್ದಾರೆ. ಈ ನಡುವೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪುನೀತ್ ಮನೆಗೆ ಇಂದು ಭೇಟಿ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಪುನೀತ್ ಮನೆಗೆ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ. ಅಪ್ಪು ಪತ್ನಿ ಅಶ್ವಿನಿ (Ashwini) ಅವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. 

ಪುನೀತ್ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ನಮ್ಮ ಪ್ರೀತಿಯ ಪುನೀತ್ ರಾಜ್‍ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ ಬಂದಿದ್ದೇವೆ. ಅವರ ಕುಟುಂಬದವರ ಜೊತೆಗೆ ನಾವು ಇರುತ್ತೇವೆ. ಅಪ್ಪು ಕನ್ನಡದ ಆಸ್ತಿ. ಇನ್ನು ಮುಂದೆ ಸಾಕಷ್ಟು ಕಾರ್ಯಕ್ರಮಗಳು ನಡೆಯಬೇಕಿದೆ. ಹಾಗಾಗಿ ಆ ಬಗ್ಗೆ ಮಾತಾಡಿದ್ದೇವೆ. ಮತ್ತು ಫಿಲ್ಮ್ ಚೇಂಬರ್ ಅವರು ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ಏನು ಸಹಾಯ ಮಾಡಬೇಕೋ ಎಲ್ಲವನ್ನೂ ಮಾಡುವುದಾಗಿ ಸಿಎಂ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಿಎಂಗೆ ಸಚಿವರಾದ ಆರ್.ಅಶೋಕ್, ಡಾ. ಸಿ.ಎನ್.ಅಶ್ವಥ್ ನಾರಾಯಣ್, ರಾಘವೇಂದ್ರ ರಾಜಕುಮಾರ್, ಚಿನ್ನೇಗೌಡ, ಎಸ್.ಎ ಗೋವಿಂದರಾಜ್, ಯುವರಾಜ್ ಕುಮಾರ್ ಇದ್ದರು.

ಪುನೀತ್ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ದರ್ಶನ ಮಾಡಲು ಸೇರಿದಂತೆ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲು ಪೊಲೀಸ್ ಇಲಾಖೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳು ಶ್ರಮ ವಹಿಸಿ ಕಾರ್ಯನಿರ್ವಹಿಸಿದ್ದಾರೆ ಇವರಿಗೆಲ್ಲಾ ಧನ್ಯವಾದಗಳು ಹಾಗೂ ಪುನೀತ್ ಕುಟುಂಬಸ್ಥರು ಸಹಕಾರ ನೀಡಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ ಕುಮಾರ್ ಅವರಿಗೂ ಹೃದಯಪೂರ್ವಕ ಕೃತಜ್ಞತೆ ಎಂದು ಇತ್ತಿಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.

ವೈಕುಂಠದಲ್ಲಿ ಅಪ್ಪಾಜಿಗೆ ಪುನೀತ್ ರಾಜ್‌ಕುಮಾರ್ ಸರ್‌ಪ್ರೈಸ್‌!

ಇನ್ನು ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ದೊಡ್ಡದಿದೆ. ಪ್ರತಿ ದಿನ 20 ಸಾವಿರಕ್ಕೂ ಅಧಿಕ ಜನರು ಕಂಠೀರವ ಸ್ಟುಡಿಯೋ ಆವರಣಕ್ಕೆ ಬಂದು ಪುನೀತ್​ ರಾಜ್​ಕುಮಾರ್​ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಬಂದು ನಮನ ಸಲ್ಲಿಸುತ್ತಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಸಮಾಧಿ ದರ್ಶನ ಪಡೆಯಲು ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಪರಭಾಷೆಯ ಅನೇಕ ಸೆಲೆಬ್ರಿಟಿಗಳು ಸಹ ಭೇಟಿ ನೀಡುತ್ತಿದ್ದಾರೆ. ನಟ ಸೂರ್ಯ, ರಾಮ್​ ಚರಣ್, ರಾಜೇಂದ್ರ ಪ್ರಸಾದ್​ ಸೇರಿದಂತೆ ಅನೇಕ ಸ್ಟಾರ್​ ನಟರು ಬೆಂಗಳೂರಿಗೆ ಆಗಮಿಸಿ ಪುನೀತ್​ ಕುಟುಂಬವನ್ನು ಭೇಟಿ ಮಾಡಿ ತೆರಳಿದ್ದಾರೆ.

Scroll to load tweet…