ಪೆನ್ಡ್ರೈವ್ ಸಿನಿಮಾ ಇನ್ನೇನು ತೆರೆಯ ಮೇಲೆ ಬರಲಿದೆ. ಅದಕ್ಕೂ ಮುನ್ನ ಬಿಗ್ಬಾಸ್ ತನಿಷಾ ಕುಪ್ಪಂಡ ಮೈಚಳಿ ಬಿಟ್ಟು ಕಿಶನ್ ಬಿಳಗಲಿ ಜೊತೆ ರೊಮಾಂಟಿಕ್ ಸಾಂಗ್ ಮಾಡಿರುವುದು ವೈರಲ್ ಆಗಿದ್ದು, ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ...
'ಪೆನ್ ಡ್ರೈವ್' ಎನ್ನೋ ಶಬ್ದ ಕಳೆದ ವರ್ಷ ಅದೆಷ್ಟು ಸದ್ದು ಮಾಡಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದೇ ಉಮೇದಿನಲ್ಲಿ, ಅದೇ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣ ಮಾಡಲಾಗಿದ್ದು, ಆ ಚಿತ್ರ ಇದೇ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ'. ಬಿಗ್ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ತನಿಷಾ ಕುಪ್ಪಂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಈ ಚಿತ್ರವನ್ನು ಎನ್. ಹನುಮಂತರಾಜು ಮತ್ತು ಲಯನ್ ಎಸ್. ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಕೆಲವು ಹಾಡುಗಳು ಇದಾಗಲೇ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಒಂದು ಸಾಂಗ್ನಲ್ಲಿ ಈ ಜೋಡಿ ಮೈಚಳಿ ಬಿಟ್ಟು ಡಾನ್ಸ್ ಮಾಡಿದೆ. ಅದರಲ್ಲಿಯೂ ತನಿಷಾ ಅವರು ಸಕತ್ ಹಾಟ್ ಆಗಿ ಕಾಣಿಸಿಕೊಂಡು ಕಿಶನ್ ಜೊತೆ ರೊಮಾನ್ಸ್ ಮಾಡಿದ್ದಾರೆ.
ಈ ಹಾಡಿನ ಬಗ್ಗೆ ಮಾತನಾಡಿರುವ ತನಿಷಾ, ಈ ಹಾಡಿನಲ್ಲಿ ತಮಗೆ ಡಾನ್ಸ್ ಮಾಡಲು ಸಿಗದ ಕಾರಣ ತುಂಬಾ ನೊಂದುಕೊಂಡಿದ್ದೆ ಎಂದು ಹೇಳಿದ್ದಾರೆ. 'ಆರಂಭದಲ್ಲಿ ಈ ಸಾಂಗ್ ನಂದು ಆಗಿರಲಿಲ್ಲ. ಸಾಂಗ್ ಕ್ರಿಯೇಟ್ ಮಾಡಿದ್ರು ಆದರೆ ನನಗೆ ಎಂದು ಇದನ್ನು ಬರೆದಿರಲಿಲ್ಲ. ಈ ಸಾಂಗ್ ಕೇಳಿದ ಮೇಲೆ ಅಬ್ಬಾ ಎಷ್ಟೊಂದು ಬ್ಯೂಟಿಫುಲ್ ಸಾಂಗ್. ನನಗೆ ಚಾನ್ಸ್ ಸಿಗಬಾರದಿತ್ತಾ ಎಂದು ತುಂಬಾ ನೊಂದುಕೊಂಡೆ. ಇದು ನನ್ನ ಸಾಂಗಾ ಎಂದು ಕೇಳಿದಾಗ, ಇಲ್ಲಮ್ಮಾ ಇದು ಬೇರೆ ಟ್ರ್ಯಾಕ್ ಎಂದುಬಿಟ್ಟರು. ಆಗ ತುಂಬಾ ಬೇಸರವಾಗಿತ್ತು ಎಂದಿದ್ದಾರೆ ತನಿಷಾ. ಮ್ಯಾನುಫೆಸ್ಟೇಷನ್ ಅಂತಾರಲ್ಲ, ಹಾಗೆ ಮಿರಾಕಲ್ ಆಗಿ ಕೊನೆಗೆ ನನಗೆ ಈ ಸಾಂಗ್ನಲ್ಲಿ ಕಿಶನ್ ಜೊತೆ ಡಾನ್ಸ್ ಮಾಡುವ ಅವಕಾಶ ಸಿಕ್ಕಿತು ಎಂದಿದ್ದಾರೆ ತನಿಷಾ.
ಇನ್ನು ಈ ಸಿನಿಮಾ ಕುರಿತು ಹೇಳುವುದಾದರೆ, ಚಿತ್ರ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. 30 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದ ಭಾಗವಾಗಿರುವ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅನೇಕ ಚಿತ್ರಗಳನ್ನು ನಿರ್ದೇಶಿಸಿರುವ ಸೆಬಾಸ್ಟಿಯನ್, 'ಪೆನ್ ಡ್ರೈವ್'ಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ನಟಿ ಮಾಲಾಶ್ರೀ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಿಗ್ ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ ಮತ್ತು ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮತ್ತು ಎನ್ ಹನುಮಂತರಾಜು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ ಮತ್ತು ನಾಗೇಶ್ ಅವರ ಸಂಕಲನವಿದೆ. ನಾಗೇಶ್ ಅವರು ಚಿತ್ರಕಥೆಗೂ ಕೊಡುಗೆ ನೀಡಿದ್ದಾರೆ.
