ನಟಿ ವಿಜಯಲಕ್ಷ್ಮಿಗೆ ಏಳು ಬಾರಿ ಗರ್ಭಪಾತ ಮಾಡಿರುವ ಆರೋಪ ಹೊತ್ತ  ನಟ, ರಾಜಕಾರಣಿ ಸೀಮನ್ ಅವರಿ​ಗೆ ಪೊಲೀಸರು ಕರೆ ನೀಡಿದ್ದು, ಹಾಜರಾಗುವಂತೆ ತಿಳಿಸಿದ್ದಾರೆ.   

ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವಿಜಯಲಕ್ಷ್ಮಿ ಅವರು ರಾಜಕಾರಣಿ, ನಟ, ನಿರ್ದೇಶಕ ಸೀಮನ್​ ವಿರುದ್ಧ ಏಳು ಬಾರಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪವನ್ನು ಹೊರಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಇದಾಗಲೇ ನಟಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೀಮನ್​ ಅವರಿಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ನೀಡಿದ್ದಾರೆ. ಬರುವ ಮಂಗಳವಾರ ಹಾಜರಾಗುವಂತೆ ನಿರ್ದೇಶಿಸಲಾಗಿದೆ. ನಾಗಮಂಗಲ, ಸ್ವಸ್ತಿಕ್, ಕನಕಾಂಬರಿ ಹಾಗೂ ಸೂರ್ಯವಂಶ ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ನೀಡಿರುವ ಬಹುಭಾಷಾ ತಾರೆ ವಿಜಯಲಕ್ಷ್ಮಿ ಅವರ ಆರೋಪವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಂದಹಾಗೆ ಸೀಮನ್​ ಅವರು, ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ) ಪಕ್ಷದ ನಾಯಕ ಕೂಡ. ಇವರ ವಿರುದ್ಧ ಇದಾಗಲೇ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಎದುರೂ ನೋವು ತೋಡಿಕೊಂಡಿದ್ದರು. ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದರು. ಅವರ ಜೊತೆ ತಮಗೆ ಮದುವೆಯಾಗಿದ್ದು, ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ ನಟಿ.

Add Asianetnews Kannada as a Preferred SourcegooglePreferred


 2008ರಲ್ಲಿ ಸೀಮನ್ ಹಾಗೂ ತಮಗೆ ಮದುವೆಯಾಗಿದೆ ಎಂದಿದ್ದಾರೆ ವಿಜಯಲಕ್ಷ್ಮಿ. ಸೀಮನ್ ತಮಗೆ ಮೋಸ ಮಾಡಿದಲ್ಲದೆ ಅವರ ಕಡೆಯವರಿಂದ ಬೆದರಿಕೆ ಹಾಕಲಾಗುತ್ತಿದೆ ಎಂದಿರುವ ನಟಿ ಕೆಲ ದಿನಗಳ ಹಿಂದೆ ಈ ಮೋಸದ ಕುರಿತು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದರು. ವಂಚನೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ನಿಷೇಧ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೀಮನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಶಾರುಖ್​ ಹಾಗೂ ಭೂಗತ ಲೋಕದ ಲಿಂಕ್​: ಇಂಟರೆಸ್ಟಿಂಗ್​ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ ಗುಪ್ತಾ

ವಿಜಯಲಕ್ಷ್ಮಿ ಕೂಡ ಇತ್ತೀಚೆಗೆ ತಿರುವಳ್ಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದರು. ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ವಿಜಯಲಕ್ಷ್ಮೀ, ಸೀಮನ್ ವಿರುದ್ಧ​ ಗಂಭೀರ ಆರೋಪ ಮಾಡಿದ್ದಾರೆ. ತಮಿಳರ್ ಮುನ್ನೇಟ್ರ ಪಡೈ ವ್ಯವಸ್ಥಾಪಕ ಅಧ್ಯಕ್ಷೆ ವೀರಲಕ್ಷ್ಮಿ ಅವರು ನಟಿಗೆ ಸಹಕಾರ ನೀಡಿದ್ದಾರೆ. ಕೆಲವು ವರ್ಷಗಳಿಂದ ನಾನು ವಿಜಯಲಕ್ಷ್ಮಿ ಪರ ನಿಂತು ಸೀಮನ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈಗ ತಮಿಳು ನಾಡು ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇರಿಸಿದ್ದೇನೆ. ಆತನನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ವೀರಲಕ್ಷ್ಮಿ ಹೇಳಿದ್ದಾರೆ. ಈ ವಿಚಾರವಾಗಿ ಸೀಮನ್‌ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮಂಗಳವಾರ ವಿಚಾರಣೆಗೆ ಹಾಜರಾಗಲು ಹೇಳಲಾಗಿದೆ. 

'ನಾನು ಸೀಮನ್ ವಿಷಯಗಳನ್ನು ಹೊರಗೆ ತೆಗೆಯುತ್ತಿರುವೆ ಎಂದು ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಬ್ಲಿಸಿಟಿಗಾಗಿ ಇದನ್ನು ಮಾಡುತ್ತಿಲ್ಲ ಆದರೆ ಅವರ ಕಡೆಯವರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ನಾವು ಒಟ್ಟಿಗೆ ಕುಳಿತುಕೊಂಡು ಮಾತನಾಡಿಕೊಂಡು ಸೆಟಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆದರಿಕೆ ಬಂದರೂ ಹಿಂದೆ ಸರಿಯುವುದಿಲ್ಲ' ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದರು. 

ಪಾಕಿಸ್ತಾನದಲ್ಲಿ ನಟಿ ಐಶ್ವರ್ಯ ರೈ! ಹಲ್​ಚಲ್​ ಸೃಷ್ಟಿಸಿದ ವೈರಲ್ ಫೋಟೋ