ಬೆಂಗಳೂರಿನಲ್ಲಿ ನಟಿ ಜಯಮಾಲಾ ಪುತ್ರಿ ಸೌಂದರ್ಯಾ ಅವರ ವಿವಾಹ ಧಿಗ್ಬಂಧನ ರುಷಭ್ ಜೊತೆ ಅದ್ದೂರಿಯಾಗಿ ನೆರವೇರಿತು. ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು ಹಾಜರಿದ್ದರು. ಜಯಮಾಲಾ ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ. ಲಂಡನ್ನಲ್ಲಿ ವಿದ್ಯಾಭ್ಯಾಸ ಮಾಡಿರುವ ಸೌಂದರ್ಯಾ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ರುಷಭ್, ಡಿಜಿಪಿ ಕೆ. ರಾಮಚಂದ್ರ ರಾವ್ ಪುತ್ರ.
ಮಾಜಿ ಸಚಿವೆ, ಹಿರಿಯ ನಟಿ ಜಯಮಾಲಾ ಅವರ ಪುತ್ರಿ, ನಟಿ ಸೌಂದರ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆಯುತ್ತಿದೆ. ರುಷಭ್ ಎಂಬುವವರ ಸಂಗಾತಿಯಾಗಿದ್ದಾರೆ ಸೌಂದರ್ಯ. ಈ ವಿವಾಹ ಕಾರ್ಯಕ್ರಮದಲ್ಲಿ ಚಿತ್ರನಟರ ದಂಡೇ ನೆರೆದಿತ್ತು. ಸುದೀಪ್, ರಮೇಶ್ ಅರವಿಂದ್, ಯಶ್-ರಾಧಿಕಾ ದಂಪತಿ, ಗಣೇಶ್ ಸೇರಿದಂತೆ ಹಲವು ಗಣ್ಯರು, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಆಗಮಿಸಿದ್ದರು. ಇದರ ನಡುವೆಯೇ ಇದೀಗ ಜಯಮಾಲಾ ಅವರು ಕೆಲವು ನಟಿಯರ ಜೊತೆಗೂಡಿ ಥೈ ಥೈ ಥೈ ಬಂಗಾರಿ ಸೇರಿದಂತೆ ಕೆಲವು ಹಾಡುಗಳಿಗೆ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ರುಷಬ್ ಪೊಲೀಸ್ ಮಹಾ ನಿರ್ದೇಶಕ ಕೆ.ರಾಮಚಂದ್ರ ರಾವ್ ಮತ್ತು ರೋಹಿಣಿ ಅವರ ಮಗನಾಗಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಇನ್ನು ಜಯಮಾಲಾ ಪುತ್ರಿ ಐಶ್ವರ್ಯಾ ಕುರಿತು ಹೇಳುವುದಾದರೆ, 31 ವಯಸ್ಸಿನ ಐಶ್ವರ್ಯ ಅವರು ಕೆಲವು ಚಿತ್ರಗಳಲ್ಲಿ ನಟಿಸಿ, ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕನ್ನಡದ ಕೆಲವು ಮತ್ತು ತೆಲಗು ಚಿತ್ರದಲ್ಲಿಯೂ ನಟಿಸಿದ್ದಾರೆ. ಲಂಡನ್ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಓದಿರುವ ಸೌಂದರ್ಯ ʼಮಿಸ್ಟರ್ ಪ್ರೇಮಿಕುಡುʼ, ದುನಿಯಾ ವಿಜಯ್ ನಟನೆಯ ʼಸಿಂಹಾದ್ರಿʼ, ನಟ ಉಪೇಂದ್ರ ಅಭಿನಯದ ʼಗಾಡ್ ಫಾದರ್ʼ, ಶ್ರೀನಗರ ಕಿಟ್ಟಿ ಅಭಿನಯದ ʼಪಾರು ವೈಫ್ ಆಫ್ ದೇವದಾಸ್ʼ ಸಿನಿಮಾಗಳಲ್ಲಿ ನಟಿಸಿದ್ದಾರೆ.
Soundarya Jayamala Marriage: ಸೌಂದರ್ಯ ಜಯಮಾಲಾ ಮದುವೆಯಲ್ಲಿ ನಟ ಯಶ್-ರಾಧಿಕಾ ಪಂಡಿತ್ ಮುಂತಾದ ಗಣ್ಯರು!
ಇನ್ನು ಜಯಮಾಲಾ ಕುರಿತು ಹೇಳುವುದಾದರೆ, ಹೈಸ್ಕೂಲ್ನಲ್ಲಿದ್ದಾಗಲೇ ನಟ, ನಿರ್ದೇಶಕ ಕೆ.ಎನ್.ಟೈಲರ್ ಅವರ ಮೂಲಕ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 10ನೇ ಕ್ಲಾಸ್ ಮುಗಿಸುವಷ್ಟರಲ್ಲಿ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿದ್ದರು. 16ನೇ ವಯಸ್ಸಿನಲ್ಲಿಯೇ ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಬಳಿಕ 'ತ್ರಿಮೂರ್ತಿ, ಗಿರಿಕನ್ಯೆ, ಶಂಕರ್ಗುರು'ನಂಥ ಬ್ಲಾಕ್ಬಸ್ಟರ್ ಚಿತ್ರ ಕೊಟ್ಟರು. ಕನ್ನಡದ ಜೊತೆ ತಮಿಳು ಹಾಗೂ ತೆಲುಗು ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.
ಪಂಚಭಾಷಾ ನಟಿಯಾಗಿ ಮಿಂಚಿರುವ ಜಯಮಾಲಾ ಅವರು, ನಿರ್ಮಾಪಕಿಯಾಗಿಯೂ ಖ್ಯಾತಿ ಗಳಿಸಿದ್ದಾರೆ. ಅವರು ನಿರ್ಮಾಪಕಿಯಾಗಿ ನಾಲ್ಕನೇ ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ತಾಯಿಸಾಹೇಬ’ ರಾಷ್ಟ್ರಮಟ್ಟದಲ್ಲಿ ಸ್ವರ್ಣಕಮಲ ಪ್ರಶಸ್ತಿ ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು. ಬಳಿಕ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಇಷ್ಟೇ ಅಲ್ಲದೇ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು. ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದರು. ರಾಜಕಾರಣಕ್ಕೂ ಧುಮುಕಿದರು. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ಜಯಮಾಲ ಅವರು 2018 ರ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಕಾರ್ಯನಿರ್ವಹಿಸಿದರು.

