ಡ್ರಾಮಾ ಫಿಲ್ಮ್‌ನಲ್ಲಿ ಯಶ್‌ ತನ್ನೂರಿನಲ್ಲಿ ಇಬ್ಬರು ಹಳೆಯ ಜೋಡಿಯನ್ನು ಒಂದು ಮಾಡಿದ ಸೀನ್‌ ಈ ಸ್ಟೋರಿ ಓದಿದಾಗ ನೆನಪಾಗಬಹುದು. ಒಡಿಶಾದಲ್ಲಿ 76 ವರ್ಷದ ವೃದ್ಧ 47 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. 

ಭುವನೇಶ್ವರ (ಜು.28): ಜೀವನ ಅನ್ನೋದು ಸಿನಿಮಾ ಅಲ್ಲ. ಆದರೆ ಸಿನಿಮಾದಲ್ಲಿ ಇದ್ದ ಹಾಗೆ ಜೀವನದಲ್ಲಿ ಆಗಬಾರದೂ ಅಂತೇನಿಲ್ಲವಲ್ಲ. ಯಶ್‌ ಹಾಗೂ ರಾಧಿಕಾ ಪಂಡಿತ್‌ ನಟನೆಯ ಡ್ರಾಮಾ ಚಿತ್ರದಲ್ಲಿ ಇದ್ದಂಥ ಸೀನ್‌ನ ಹಾಗೆಯೇ ಒಡಿಶಾದಲ್ಲಿ ನೈಜ ಘಟನೆ ನಡೆದಿದೆ. ಆ ಚಿತ್ರದಲ್ಲಿ ತನ್ನೂರಿನಲ್ಲಿ ಇಬ್ಬರು ಹಳೆ ಜೋಡಿಗೆ ಮದುವೆ ಮಾಡಿಸಿ, 'ಬೀಸೋ ಗಾಳಿಗೂ.. ಬೀಳೋ ಮರಕ್ಕೂ ಲವ್ವಾಗಿದೆ..' ಅಂತಾ ಹೇಳೋ ಡೈಲಾಗ್‌ ಫೇಮಸ್‌. ಅದೇ ರೀತಿಯಲ್ಲಿ ಒಡಿಶಾದ ಗಂಜಾಂ ಜಿಲ್ಲೆಯ ಸನಖೆಮುಂಡಿ ಬ್ಲಾಕ್‌ನ ಅಡಪಾಡಾ ಗ್ರಾಮದಲ್ಲಿ76 ವರ್ಷದ ವೃದ್ಧ 47 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಜುಲೈ 19 ರಂದು ಈ ದಂಪತಿಗಳು ಭಂಜಾನಗರ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ. 
ಅಡಪದ ಗ್ರಾಮದ 76 ವರ್ಷದ ರಾಮ ಚಂದ್ರ ಸಾಹು ಮತ್ತು ಕುಲಾಡ್ ಗ್ರಾಮದ 47 ವರ್ಷದ ಸುರೇಖಾ ಸಾಹು ಅವರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಇಬ್ಬರೂ ಮದುವೆಯಾಗುವ ತೀರ್ಮಾನ ಮಾಡಿದ್ದರು. ವರದಿಗಳ ಪ್ರಕಾರ ರಾಮಚಂದ್ರ ಸಾಹು ಅವರ ಮೊದಲ ಪತ್ನಿ ಕೆಲವರು ವರ್ಷಗಳ ಹಿಂದೆ ತೀರಿ ಹೋಗಿದ್ದಾರೆ.

Add Asianetnews Kannada as a Preferred SourcegooglePreferred

ಏಳು ವರ್ಷಗಳ ಹಿಂದೆ ಕುಲಾಡ್ ಗ್ರಾಮದಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ ರಾಮಚಂದ್ರ ಅವರು ಸುರೇಖಾ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಇಬ್ಬರೂ ಫೋನ್‌ನಲ್ಲಿ ಮಾತನಾಡಲು ಆರಂಭ ಮಾಡಿದ್ದರು. ಈ ಸ್ನೇಹ ಕಾಲಾನಂತರದಲ್ಲಿ ಪ್ರೀತಿಗೆ ತಿರುಗಿತ್ತು. ಕೊನೆಗೆ ಒಂದು ದಿನ ರಾಮಚಂದ್ರ ಸಾಹು, ಸುರೇಖಾ ಸಾಹು ಅವರ ಬಳಿ ಮದುವೆಯಾಗುವ ಪ್ರಸ್ತಾಪವಿಟ್ಟಿದ್ದಾರೆ. ಸುರೇಖಾ ಕೂಡ ಈ ಪ್ರಸ್ತಾಪವನ್ನು ಒಪ್ಪಿದ ಬಳಿಕ 10 ದಿನಗಳ ಹಿಂದೆ ಮದುವೆಯಾಗಿದ್ದಾರೆ ಎನ್ನಲಾಗಿದೆ.

“ನನಗೆ 76 ವರ್ಷ. ನನ್ನ ಹೆಂಡತಿ ಬಹಳ ವರ್ಷಗಳ ಹಿಂದೆ ತೀರಿಕೊಂಡಳು. ನಾವಿಬ್ಬರೂ ಕುಲಾಡ್ ಹಳ್ಳಿಯಲ್ಲಿ ಹಬ್ಬದಂದು ಮೊದಲು ಭೇಟಿಯಾಗಿದ್ದೆವು. ನಮ್ಮ ಮೊದಲ ಭೇಟಿಯಲ್ಲೇ ಅವಳಿಗೆ ಪ್ರಪೋಸ್ ಮಾಡಲು ನಿರ್ಧರಿಸಿದ್ದೆ. ಅಂತಿಮವಾಗಿ, ನಾನು ಮದುವೆಯ ಪ್ರಸ್ತಾಪವನ್ನು ಇಟ್ಟ ಬಳಿಕ ನನ್ನ ಪ್ರಸ್ತಾಪವನ್ನು ಆಕೆ ಒಪ್ಪಿಕೊಂಡಿದ್ದಳು. ನಾವು ಒಟ್ಟಿಗೆ ಸಂತೋಷವಾಗಿದ್ದೇವೆ, ”ಎಂದು ರಾಮಚಂದ್ರ ಸಾಹು ಹೇಳಿದ್ದಾರೆ.

ಗ್ರಾಮದ ಹಬ್ಬದ ಸಂದರ್ಭದಲ್ಲಿ ಮೊದಲ ಬಾರಿಗೆ ಎದುರಿಗೆ ಭೇಟಿಯಾಗಿದ್ದವು. ನನ್ನ ಕುಟುಂಬ ಸದಸ್ಯರು ಆರಂಭದಲ್ಲಿ ಒಪ್ಪಿಗೆ ನೀಡಿದರೂ, ಆ ಬಳಿಕ ಬೇರೆ ಬೇರೆ ರೀತಿ ಮಾತನಾಡಲು ಆರಂಭಿಸಿದರು. ಆದರೆ, ನಾನು ಮಾತುಕೊಟ್ಟಿದ್ದೆ. ಅಂತಿಮವಾಗಿ ನಾವು ಭಂಜನಗರ್ ನ್ಯಾಯಾಲಯದಲ್ಲಿ ವಿವಾಹವಾಗಿದ್ದೇವೆ' ಎಂದು ಸುರೇಖಾ ಸಾಹು ಹೇಳಿದ್ದಾರೆ. 76ರ ಹರೆಯದ ವ್ಯಕ್ತಿಯೊಬ್ಬರು ತಮ್ಮ ಜೀವನದಲ್ಲಿ ಮತ್ತೆ ಸಂತಸ ಕಂಡುಕೊಂಡಿದ್ದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಸಂಗಾತಿಯೇ ಬೇಕಾಗಿಲ್ಲ ಮಾರುಕಟ್ಟೆಗೆ ಬರಲಿದೆ AI ಸೆಕ್ಸ್‌ ರೋಬೋಟ್‌!

ಸಾಮಾಜಿಕ ಕಾರ್ಯಕರ್ತ ಹರೇಕೃಷ್ಣ ಮಲ್ಲಿಕ್ ಮಾತನಾಡಿ, ಕೌಟುಂಬಿಕ ಹಿಂಸಾಚಾರ ಮತ್ತು ಪತಿ-ಪತ್ನಿಯರ ನಡುವಿನ ವಿಚ್ಛೇದನ ಸುದ್ದಿಯ ನಡುವೆ ರಾಮಚಂದ್ರ ಮತ್ತು ಸುರೇಖಾ ಅವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದಿದ್ದಾರೆ.

ಬಾಗೇಶ್ವರ ಧಾಮದಲ್ಲಿ ಸಪ್ತಪದಿ ತುಳಿಯುವ ಇಚ್ಛೆ ವ್ಯಕ್ತಪಡಿಸಿದ ಪಬ್‌ಜಿ ಲವರ್ಸ್!