ಜಾಗತಿಕ ಉದ್ಯೋಗ ಕಡಿತದ ಹಿನ್ನೆಲೆಯಲ್ಲಿ ಟೆಕ್ ಮಹೀಂದ್ರಾ ಮಾಜಿ ಸಿಇಒ ಸಿಪಿ ಗುರ್ನಾನಿ ಅವರು ಭಾರತೀಯ ಐಟಿ ಕ್ಷೇತ್ರಕ್ಕೆ ಕೆಲಸದ ಶೈಲಿಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಕೌಶಲ್ಯ ನವೀಕರಣ ಮತ್ತು ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ನವದೆಹಲಿ: ವಿಶ್ವಾದ್ಯಂತ ಉದ್ಯೋಗ ಕಡಿತ ಪರ್ವ ಶುರುವಾಗಿದ್ದು, ಜಾಗತಿಕ ದೈತ್ಯ ಕಂಪನಿಗಳು ಭಾರಿ ಸಂಖ್ಯೆಯಲ್ಲಿ ಹುದ್ದೆ ಕಡಿತಗೊಳಿಸುತ್ತಿವೆ. ಕೃತಕ ಬುದ್ಧಿಮತ್ತೆ ಅಳವಡಿಕೆ, ಜಾಗತಿಕ ಆರ್ಥಿಕ ಸ್ಥಿತ್ಯಂತರ- ಇತರ ಕಾರಣಗಳಿಗಾಗಿ ಈ ಕ್ರಮಕ್ಕೆ ಕಂಪನಿಗಳು ಮುಂದಾಗಿವೆ. ಇದರ ಪರಿಣಾಮ ಸಾವಿರಾರು ಸಿಬ್ಬಂದಿ ಮನೆ ಕಡೆಗೆ ಮುಖ ಮಾಡುವಂತಾಗಿದೆ. ಭಾರತದ ಟೆಕ್ ದೈತ್ಯ ಟಿಸಿಎಸ್ ಭಾನುವಾರ ಇದೇ ವರ್ಷ 12,000 ನೌಕರರನ್ನು ಮನೆಗೆ ಕಳಿಸುವುದಾಗಿ ಭಾನುವಾರ ಹೇಳಿದೆ.
ಇದರ ಬೆನ್ನಲ್ಲೇ ಇದೀಗ ಟೆಕ್ ಮಹೀಂದ್ರಾ ಮಾಜಿ ಸಿಇಒ ಸಿಪಿ ಗುರ್ನಾನಿ ಅವರು ಭಾರತೀಯ ತಂತ್ರಜ್ಞಾನ ಕ್ಷೇತ್ರಕ್ಕೆ ಒಂದು ಬಹುಮುಖ್ಯ ಸಂದೇಶವನ್ನು ನೀಡಿದ್ದು, ಅದು ಸದ್ಯದ ಪರಿಸ್ಥಿತಿಗೆ ಸ್ಪಷ್ಟ ಸಂದೇಶ ನೀಡಿದಂತಿದೆ. "ಕಿತ್ನೆ ಆದ್ಮಿ ಥೇ?" ಎಂಬ ಶೋಲೆ ಚಿತ್ರದ ಈ ಐಕಾನಿಕ್ ಡೈಲಾಗ್ ಮೂಲಕ ಗುರ್ನಾನಿ ಅವರು ಇಂದಿನ ತಂತ್ರಜ್ಞಾನ ಉದ್ಯಮದ ಸತ್ಯವನ್ನು ಅನಾವರಣ ಮಾಡಿದ್ದಾರೆ. ಅವರು ಸಂದರ್ಶನವೊಂದರಲ್ಲಿ "ಇದು ಸಂಖ್ಯೆಗಳ ಗೀಳಿನ ಯುಗವಲ್ಲ, ಫಲಿತಾಂಶ ಆಧಾರಿತ ಕೆಲಸದ ಶೈಲಿಗೆ ತಿರುಗುವ ಸಮಯ" ಎಂದು ತಿಳಿಸಿದರು.
ಗುರ್ನಾನಿಯವರು ಭಾರತೀಯ ಐಟಿ ಉದ್ಯಮದ ಪಿರಮಿಡ್ ಮಾದರಿಯ ವಿತರಣಾ ಶೈಲಿಯ ಬಗ್ಗೆ ಬದಲಾವಣೆ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ಇಂದು ಕಂಪನಿಗಳು ಹೆಚ್ಚಿನ ಉತ್ಪಾದಕತೆ, ನಿಖರ ಕೌಶಲ್ಯಗಳು ಮತ್ತು ಸುಧಾರಿತ ತಂತ್ರಜ್ಞಾನ ಸಾಮರ್ಥ್ಯಗಳ ಅಗತ್ಯವಿರುವ ಪ್ರಪಂಚದಲ್ಲಿ ಸ್ಪರ್ಧಿಸುತ್ತಿವೆ.
TCS ಸಿಇಒ ಕೆ. ಕೃತಿವಾಸನ್ ಸ್ಪಷ್ಟಪಡಿಸಿದ್ದು, ಈ ಉದ್ಯೋಗ ಕಡಿತಗಳು AI ಅಥವಾ ಯಾಂತ್ರೀಕರಣದಿಂದ ಅಲ್ಲ, ಬದಲಾಗಿ ಸರಿಯಾದ ಕೌಶಲ್ಯ ಹೊಂದಾಣಿಕೆಯ ಕೊರತೆಯಿಂದ ಎಂದು. ಅವರ ಪ್ರಕಾರ, ಸಂಸ್ಥೆಯು ಮರುಜೋಡಣೆಯ ಆವಶ್ಯಕತೆಯಿಂದ ಈ ನಿರ್ಧಾರ ತೆಗೆದುಕೊಂಡಿದೆ.
ಇದೇ ರೀತಿ, ಇನ್ಫೋಸಿಸ್ ಮತ್ತು ವಿಪ್ರೋ ಕೂಡ ಕಳೆದ ಎರಡು ವರ್ಷಗಳಲ್ಲಿ ಕ್ರಮವಾಗಿ 12,000 ಮತ್ತು 25,000 ಉದ್ಯೋಗಿಗಳನ್ನು ಕಡಿತಗೊಳಿಸಿವೆ. HCL ಟೆಕ್ ಕೂಡ ಸ್ಥಳ-ಕೌಶಲ್ಯ ಹೊಂದಾಣಿಕೆಯ ಸಮಸ್ಯೆಯಿಂದ ಪುನರ್ರಚನೆಗೆ ಹೋಗಿದೆ. ತಜ್ಞರು ಹೇಳುವ ಪ್ರಕಾರ, ಕಡಿಮೆ ಮಟ್ಟದ ಕೋಡಿಂಗ್, ಟೆಸ್ಟಿಂಗ್, ಡಾಕ್ಯುಮೆಂಟೇಶನ್ ಹುದ್ದೆಗಳು ಮಾರುಕಟ್ಟೆಯಲ್ಲಿ ಅವಶ್ಯಕವಿಲ್ಲದಂತಾಗಿವೆ.
‘ಜುರಾಸಿಕ್ ಪಾರ್ಕ್’ ಮಾದರಿಯಿಂದ ಹೊರಬನ್ನಿ: ಗಣೇಶ್ ನಟರಾಜನ್
ಮಾಜಿ ನಾಸ್ಕಾಮ್ ಅಧ್ಯಕ್ಷ ಗಣೇಶ್ ನಟರಾಜನ್ ಅವರು ಸಹ ಗುರ್ನಾನಿಯ ಅಭಿಪ್ರಾಯವನ್ನು ಬೆಂಬಲಿಸುತ್ತಾ, ಪಿರಮಿಡ್ ಮಾದರಿಯ ಕೆಲಸದ ಶೈಲಿಯನ್ನು "ಜುರಾಸಿಕ್ ಪಾರ್ಕ್ ವಸ್ತು" ಎಂದು ವ್ಯಂಗ್ಯವಾಡಿದ್ದಾರೆ. ಅವರು ಸಂಯೋಜಿತ AI ಮತ್ತು ಸ್ವಾಯತ್ತ ಸಾಫ್ಟ್ವೇರ್ಗಳ ಬಳಕೆ ಉದ್ಯೋಗ ರಚನೆ, ತಂಡದ ವಿನ್ಯಾಸ ಮತ್ತು ವಿತರಣಾ ಮಾದರಿಗಳ ಪುನರ್ವಿಮರ್ಶೆಗೆ ದಾರಿ ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಐಟಿ ವಲಯಕ್ಕೆ ಗುರ್ನಾನಿಯವರ ಸಂದೇಶ
ಅವರು ಒತ್ತಿಹೇಳಿದ್ದು, ಕೌಶಲ್ಯ ನವೀಕರಣ ಮತ್ತು ಪುನಃಕೌಶಲ್ಯಾಭಿವೃದ್ಧಿ ಈಗ ಕಾಲದ ಅಗತ್ಯವಾಗಿದೆ. ಉದ್ಯೋಗಿಗಳು ಮಾತ್ರವಲ್ಲದೆ ಸಂಸ್ಥೆಗಳೂ ತಾವು ಕೆಲಸ ಮಾಡುವ ಮಾದರಿಗಳನ್ನು ಮರುಪರಿಶೀಲಿಸಿ, ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು.
ಇನ್ನು ಟಿಸಿಎಸ್ ಮಾತ್ರವಲ್ಲ ಇದರ ಆಸುಪಾಸಿನಲ್ಲೇ ಇಂಟೆಲ್ ಕಂಪನಿಯು 25,000, ಪ್ಯಾನಸಾನಿಕ್ 10,000, ಮೈಕ್ರೋಸಾಫ್ಟ್ 6500, ಮೆಟಾ 3600, ಅಮೆಜಾನ್ 14000, ಐಬಿಎಂ 8000, ಗೂಗಲ್ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್ಪಿ 6000, ನಿಸ್ಸಾನ್ 20000, ಸ್ಟಾರ್ಬಕ್ಸ್ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ. ಇದರ ಜತೆಗೆ ವಾಲ್ಮಾರ್ಟ್, ಬಾಷ್ನಂತಹ ಕಂಪನಿಗಳು ಸಹ ವೆಚ್ಚ ಕಡಿತ ಕಾರಣಗಳಿಂದಾಗಿ ಸಿಬ್ಬಂದಿ ಸಂಖ್ಯೆಯನ್ನು ಇಳಿಸಲು ನಿರ್ಧರಿಸಿವೆ ಎನ್ನಲಾಗಿದೆ.


