ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜಲ್ಮುರಿ ಅಂಗಡಿಯೊಂದಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಅಲ್ಲಿನ ಯುವಕ ವಿಕ್ರಮ್ ಜೊತೆ ಮಾತನಾಡಿ, ಜಲ್ಮುರಿ ಸವಿದ ಈ ಘಟನೆಯು ಆ ಯುವಕನನ್ನು ರಾತ್ರೋರಾತ್ರಿ ಪ್ರಸಿದ್ಧನನ್ನಾಗಿಸಿದೆ.

ಪಶ್ಚಿಮ ಬಂಗಾಳದಲ್ಲಿ ಇದೇ 23 ಮತ್ತು 29ರಂದು ಎರಡು ಹಂತಗಳ ಚುನಾವಣೆ ನಡೆಯುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಹಲವು ದಶಕಗಳಿಂದ ಪಶ್ಚಿಮ ಬಂಗಾಳ ಆಳುತ್ತಲೇ ದೀದೀ ನಾಡು ಎಂದೇ ಫೇಮಸ್​ ಆಗಿರೋ ಬಂಗಾಳದಲ್ಲಿ ಈ ಬಾರಿ ಮೋದಿ ಹವಾ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಚುನಾವಣೆ ಹೇಳಬೇಕಿದೆ. ನುಸುಳುಕೋರರಿಂದ ರಕ್ಷಣೆ ಪಡೆದು ಮತ ಪಡೆಯುತ್ತಿದ್ದ ಮಮತಾ ಬ್ಯಾನರ್ಜಿ ಅವರಿಗೆ ಈ ಬಾರಿ ನುಸುಳುಕೋರನನ್ನು ಹೊರಕ್ಕೆ ದಬ್ಬಿರುವುದು ತಕ್ಕಮಟ್ಟಿಗೆ ಹಿನ್ನಡೆಯಾಗಿದ್ದರೂ ಅವರ ಅಭಿಮಾನಿಗಳಿಗೇನೂ ಕೊರತೆಯಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಶ್ಚಿಮ ಬಂಗಾಳಕ್ಕೆ ಭೇಟಿ

ಇದರ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು, ಪಶ್ಚಿಮ ಬಂಗಾಳದ ಅಂಗಡಿಯೊಂದಕ್ಕೆ ಭೇಟಿ ಕೊಟ್ಟಿದ್ದು, ಇದೀಗ ಅಲ್ಲಿನ ಪರಿಸರವನ್ನೇ ಬದಲು ಮಾಡಿದೆ. ಜಲ್ಮುರಿಯನ್ನು ತಾವೂ ಸವಿದು ಅಲ್ಲಿದ್ದವರಿಗೆ ಪ್ರಧಾನಿ ಹಂಚಿದ್ದರು. ಪ್ರಧಾನಿ ಅವರ ಭೇಟಿಯಿಂದ ರಾತ್ರೋರಾತ್ರಿ ಸ್ಟಾರ್​ ಆದ ಯುವಕ ವಿಕ್ರಮ್​. ಈಗ ಈತನಿಗೆ ಡಿಮಾಂಡೋ ಡಿಮಾಂಡು. ಕೆಲ ದಿನಗಳ ಮಟ್ಟಿಗಾದರೂ ಈತ ಸ್ಟಾರ್​. ಮೀಡಿಯಾಗಳ ಕೇಂದ್ರಬಿಂದು. ಅದು ಈಗಿನಿಂದಲೇ ಶುರುವಾಗಿಬಿಟ್ಟಿದೆ.

ಮೋದಿ ಭೇಟಿ ಬಗ್ಗೆ ಯುವಕ

abpnewstv ಈ ಯುವಕನ ಸಂದರ್ಶನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿಯ ಸಂಪೂರ್ಣ ವಿವರವನ್ನು ಈ ಯುವಕ ನೀಡಿದ್ದಾನೆ. ಇದು ದಿಢೀರ್​ ಭೇಟಿ. ನನಗೆ ಗೊತ್ತೇ ಇರಲಿಲ್ಲ. ನೋಡಿ ಏನು ಮಾಡಬೇಕು ಎಂದೇ ತಿಳಿಯಲಿಲ್ಲ ಎಂದಿದ್ದಾನೆ ಯುವಕ. ನನ್ನ ಹೆಸರು ಕೇಳಿದ್ರು, ನಾನು ವಿಕ್ರಮ್​ ಎಂದೆ. ಜಲ್ಮುರಿ ಚೆನ್ನಾಗಿ ಮಾಡಿಕೊಡು ಎಂದು ಎಷ್ಟು ಹಣ ಎಂದು ಕೇಳಿದ್ರು 10 ರೂಪಾಯಿ, ನಾನು ಬೇಡ ಎಂದರೂ ಕೊಟ್ಟರು. ತಿಂದು ತುಂಬಾ ಚೆನ್ನಾಗಿದೆ ಎಂದು ನನ್ನ ಅಪ್ಪ- ಅಮ್ಮನ ಬಗ್ಗೆ ವಿವರಿಸಿದರು. ಅಪ್ಪ-ಅಮ್ಮನ ಹೆಸರು ಸುನಿತಾ ಮತ್ತು ಉತ್ತಮ್​. ನಾನು ಬಿಹಾರದವನು ಎಂದೆ ಎಂದು ಪ್ರಧಾನಿ ಅವರ ಬಳಿ ಮಾತನಾಡಿದ್ದನ್ನೆಲ್ಲಾ ಯುವಕ ಹೇಳಿದ್ದಾನೆ.

ಸಹಿಯನ್ನೂ ಮರೆತುಬಿಟ್ಟೆ

ಎಲ್ಲಿಯವರೆಗೆ ಕಲಿತಿರುವೆ ಎಂದು ಪ್ರಶ್ನಿಸಿದರು. ಅದಕ್ಕೆ ನಾನು 9ನೇ ಕ್ಲಾಸ್ ಅಷ್ಟೇ. ತುಂಬಾ ಬಡವನಾದ್ದರಿಂದ ಮುಂದೆ ಓದಲು ಆಗಲಿಲ್ಲ. ಇಲ್ಲಿ ಬಂದು ಅಂಗಡಿ ಇಟ್ಟುಕೊಂಡೆ. ಇದೊಂದೇ ಅಂಗಡಿ ಇರುವುದು ದಿನಕ್ಕೆ ಒಂದು ಸಾವಿರ ದುಡಿಯುತ್ತೇನೆ ಎಂದೆ ಎಂದರು. ಕೊನೆಗೆ ರಾಜಕೀಯದ ಬಗ್ಗೆ ಏನಾದ್ರೂ ಮಾತನಾಡಿದ್ರಾ ಎಂದು ಕೇಳಿದಾಗ, ಆಗ ಇಲ್ಲ ಏನೂ ಕೇಳಲಿಲ್ಲ. ರಾಜಕೀಯದ ಬಗ್ಗೆ ಏನೂ ಪ್ರಶ್ನೆ ಮಾಡಲಿಲ್ಲ. ನಾನು ಆ ಖುಷಿಯಲ್ಲಿ ಅವರ ಸಹಿ ತೆಗೆದುಕೊಳ್ಳೋದೂ ಮರೆತು ಬಿಟ್ಟೆ ಎಂದಿದ್ದಾನೆ.