ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷಿ ಎಂದು ತೀರ್ಪು ಬಂದ ಹಿನ್ನೆಲೆಯಲ್ಲಿ, ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಜನಪ್ರತಿನಿಧಿ ಕಾಯ್ದೆಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಶಿಕ್ಷೆಯಿಂದ ಬಿಡುಗಡೆಯಾದ ನಂತರವೂ ಆರು ವರ್ಷಗಳ ಕಾಲ ಈ ಅನರ್ಹತೆ ಮುಂದುವರಿಯಲಿದೆ.

ಧಾರವಾಡ: ಯೋಗೇಶ್ ಗೌಡ ಹತ್ಯೆ ಪ್ರಕರಣ ಅಪರಾಧಿ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅವರನ್ನು ಅನರ್ಹಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕುರಿತು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಆದೇಶ ಜಾರಿಗೊಳಿಸಿದ್ದಾರೆ.

ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರು ದೋಷಿಯಾಗಿ ಏಪ್ರಿಲ್ 15ರಂದು ನ್ಯಾಯಾಲಯದಿಂದ ದಂಡಿತರಾಗಿರುವ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಳ್ಳಲಾಗಿದೆ. ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ ದಿನಾಂಕದಿಂದಲೇ ಅವರ ವಿಧಾನಸಭೆ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ನಿಯಮಗಳ ಪ್ರಕಾರ

ಈ ನಿರ್ಧಾರವು ಭಾರತ ಸಂವಿಧಾನದ ವಿಧಿ 191(1)(e) ಹಾಗೂ ಜನಪ್ರತಿನಿಧಿ ಕಾಯ್ದೆ, 1951ರ ಸೆಕ್ಷನ್ 8ರ ನಿಯಮಗಳ ಅನ್ವಯ ಜಾರಿಯಾಗಿದೆ. ಈ ಕಾನೂನು ಪ್ರಕಾರ, ಅಪರಾಧದಲ್ಲಿ ದೋಷಿ ತೀರ್ಪು ಬಂದ ಪ್ರತಿನಿಧಿಗಳು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ನಿಯಮದ ಅನ್ವಯದ ಮೇಲೆ ಈ ಆದೇಶ ಜಾರಿಗೊಳಿಸಲಾಗಿದೆ.

ಆರು ವರ್ಷಗಳ ಅವಧಿಗೂ ಈ ಅನರ್ಹತೆ ಜಾರಿ

ಇದಲ್ಲದೆ, ಸಂಬಂಧಪಟ್ಟ ನ್ಯಾಯಾಲಯವು ದೋಷಾರೋಪಣೆಯನ್ನು ಸ್ಥಗಿತಗೊಳಿಸದ ಹೊರತು, ವಿನಯ್ ಕುಲಕರ್ಣಿ ಅವರ ಅನರ್ಹತೆ ಮುಂದುವರಿಯಲಿದೆ. ಅವರು ಶಿಕ್ಷೆಯಿಂದ ಬಿಡುಗಡೆಯಾದ ದಿನಾಂಕದಿಂದ ಮುಂದಿನ ಆರು ವರ್ಷಗಳ ಅವಧಿಗೂ ಈ ಅನರ್ಹತೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದ್ದು, ಧಾರವಾಡ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.