ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟು, ಪರಸ್ಪರರನ್ನು ದ್ರೋಹಿ, ದೇಶದ್ರೋಹಿ ಎಂದು ಬೈದಾಡಿಕೊಂಡ ಘಟನೆಗೆ ಸಂಸತ್ತಿನ ಪ್ರವೇಶ ದ್ವಾರ ಬುಧವಾರ ಸಾಕ್ಷಿಯಾಯಿತು.

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟು, ಪರಸ್ಪರರನ್ನು ದ್ರೋಹಿ, ದೇಶದ್ರೋಹಿ ಎಂದು ಬೈದಾಡಿಕೊಂಡ ಘಟನೆಗೆ ಸಂಸತ್ತಿನ ಪ್ರವೇಶ ದ್ವಾರ ಬುಧವಾರ ಸಾಕ್ಷಿಯಾಯಿತು. ಈ ನಡುವೆ ರಾಹುಲ್‌ ಟೀಕೆ, ಇಡೀ ಸಿಖ್‌ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿರುವ ಬಿಜೆಪಿ ರಾಗಾ ಕ್ಷಮೆಗೆ ಆಗ್ರಹಿಸಿದೆ. ಅಲ್ಲದೆ ದೆಹಲಿಯಲ್ಲಿನ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ಅಲ್ಲದೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಹುಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲೋಕಸಭೆ ಸ್ಪೀಕರ್‌ ಅವರನ್ನು ಒತ್ತಾಯಿಸಿದೆ.

Add Asianetnews Kannada as a Preferred SourcegooglePreferred

ಏನಾಯ್ತು?:

ಬುಧವಾರ ಗದ್ದಲದ ಕಾರಣ ಲೋಕಸಭೆ ಕಲಾಪ ಮುಂದೂಡಿದ ವೇಳೆ, ಮಂಗಳವಾರ ಅಮಾನತಾದ 8 ವಿಪಕ್ಷಗಳ ಸದಸ್ಯರೊಂದಿಗೆ ರಾಹುಲ್‌ ಗಾಂಧಿ ಸಂಸತ್ತಿನ ಮಕರ ದ್ವಾರದ ಬಳಿ ಧರಣಿ ಕುಳಿತುಕೊಂಡಿದ್ದರು. ಈ ವೇಳೆ ಸಂಸತ್‌ ಪ್ರವೇಶಕ್ಕೆ ಆಗಮಿಸಿದ ಬಿಟ್ಟು, ‘ಇವರನ್ನೆಲ್ಲಾ ನೋಡಿದರೆ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿ ಬಂದು ಕುಳಿತಂತಿದೆ’ ಎಂದು ವ್ಯಂಗ್ಯವಾಡಿದ್ದರು.

ಈ ವೇಳೆ ಬಿಟ್ಟುಗೆ ತಿರುಗೇಟು ನೀಡಿದ ರಾಹುಲ್‌, ‘ಇಲ್ಲೊಬ್ಬ ದ್ರೋಹಿ ನಮ್ಮ ಪಕ್ಕದಲ್ಲೇ ಸಾಗುತ್ತಿದ್ದಾನೆ. ಅವನ ಮುಖವನ್ನು ನೋಡಿ. ಹೇಗೆ ನೋಡುತ್ತಿದ್ದಾನೆ ಎಂದು ಅಮಾನತಾದ ಸಿಖ್‌ ಸಂಸದರ ಪರ ಮತ್ತೊಬ್ಬ ಸಿಖ್‌ (ಬಿಟ್ಟು) ನಿಲ್ಲುತ್ತಿಲ್ಲ ಎಂದು ಟಾಂಗ್‌ ನೀಡಿದ್ದರು. ಬಳಿಕ ರವನೀತ್‌ಗೆ ಹಸ್ತಲಾಘವ ನೀಡಲು ಹೋದರು. ಆದರೆ ಅವರು ಕೈ ನೀಡಲು ನಿರಾಕರಿಸಿದ ವೇಳೆ, ಏನೂ ಚಿಂತೆ ಮಾಡಬೇಡಿ. ನೀವು ಮರಳಿ ನಮ್ಮ (ಕಾಂಗ್ರೆಸ್‌ಗೆ) ಬಳಿಗೆ ಬರುತ್ತೀರಿ ಎಂದು ಹೇಳಿ ಮತ್ತೆ ಬಿಟ್ಟು ಕಡೆಗೆ ಕೈಸನ್ನೆ ಮಾಡಿದರು. ಈ ವೇಳೆ ಬಿಟ್ಟು ಆಕ್ರೋಶಗೊಂಡ ರಾಹುಲ್‌ ಅವರನ್ನು ದೇಶ್‌ ಕ ದುಷ್ಮನ್‌ (ದೇಶದ್ರೋಹಿ) ಎಂದು ತಿರುಗೇಟು ನೀಡಿದರು.

ಇದಾದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಟ್ಟು, ಈ ಹಿಂದೆ 2024ರಲ್ಲಿ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಲು ಮುಂದಾದ ವೇಳೆಯೂ ರಾಹುಲ್‌ ನನ್ನ ಮೇಲ ಕೈ ಮಾಡಲು ಯತ್ನಿಸಿದರು. ಇಂದು ಸಂಸತ್ತಿನ ಆವರಣದಲ್ಲಿ ಅದೇ ರೀತಿ ನಡೆದುಕೊಂಡರು. ಅವರ ವಿರುದ್ಧ ಏನು ಕಾನೂನು ಕ್ರಮ ಕೈಗೊಳ್ಳಬೇಕೆಂದು ಪರಿಶೀಲಿಸುತ್ತೇನೆ. ಇವರೆಲ್ಲಾ ಬೀದಿ ಗೂಂಡಾಗಳಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಟ್ಟು ಯಾರು?:

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬೇಅಂತ್‌ ಸಿಂಗ್‌ ಅವರ ಮೊಮ್ಮಗನೇ ರವನೀತ್‌ ಸಿಂಗ್‌ ಬಿಟ್ಟು. ರವನೀತ್‌ ಈ ಹಿಂದೆ ಲೂಧಿಯಾನ ಮತ್ತು ಆನಂದ್‌ಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2024ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದರು.