Asianet Suvarna News Asianet Suvarna News

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಿರಿಯರ ಅತೃಪ್ತಿ: ಜಯಚಂದ್ರ, ಲಮಾಣಿ, ಸಲೀಂ ಅಹ್ಮದ್‌ರಿಂದ ಬಹಿರಂಗ ಬೇಸರ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಕೆಲ ಹಿರಿಯ ಶಾಸಕರೇ ವರಿಷ್ಠರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. 

The elders are unhappy that the ministerial position has been lost gvd
Author
First Published May 28, 2023, 10:02 AM IST

ಬೆಂಗಳೂರು (ಮೇ.28): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಕೆಲ ಹಿರಿಯ ಶಾಸಕರೇ ವರಿಷ್ಠರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಟಿ.ಬಿ.ಜಯಚಂದ್ರ, ರುದ್ರಪ್ಪ ಲಮಾಣಿ, ಸಲೀಂ ಅಹಮದ್‌ ಸೇರಿ ಹಲವರು ಪಕ್ಷದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಸಚಿವ ಸ್ಥಾನ ಏತಕ್ಕಾಗಿ ನೀಡಬೇಕಿತ್ತು ಎಂಬುದನ್ನು ಪ್ರತಿಪಾದಿಸಿರುವ ಅವರು, ಪಕ್ಷಕ್ಕಾಗಿ ದುಡಿದವರು, ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ನಿಂತ ಸಮುದಾಯವನ್ನು ಕಡೆಗಣಿಸಲಾಗಿದೆ. ಲೋಕಸಭೆ ಚುನಾವಣೆ ಸೇರಿ ಇನ್ನಿತರ ಚುನಾವಣೆಗಳಲ್ಲಿ ಹೈಕಮಾಂಡ್‌ನ ಈ ನಿರ್ಧಾರವು ಪಕ್ಷದ ಗೆಲುವಿನ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ನಾಯಕತ್ವದ ವೈಫಲ್ಯ: ಸಚಿವ ಸಂಪುಟದಲ್ಲಿ ಸ್ಥಾನ ದೊರಕದ ಕಾರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಟಿ.ಬಿ.ಜಯಚಂದ್ರ, 1970ರಲ್ಲಿ ಶಾಸಕರಾದವರಲ್ಲಿ ಈಗ ನಾನೊಬ್ಬನೇ ಇದ್ದೇನೆ. ಕಾಂಗ್ರೆಸ್‌ನ ಅತ್ಯಂತ ಹಿರಿಯ ಶಾಸಕರಲ್ಲಿ ನಾನೂ ಒಬ್ಬ. ಕಾಂಗ್ರೆಸ್‌ ಪಕ್ಷದಲ್ಲಿ ಒಡಕು ಮೂಡಿದಾಗಲೂ ಪಕ್ಷಕ್ಕೆ ನಿಷ್ಠನಾಗಿದ್ದೆ. ಆದರೂ, ನನಗೆ ಸಚಿವ ಸ್ಥಾನ ದೊರೆತಿಲ್ಲ. ಇದು ನಾಯಕತ್ವದ ವೈಫಲ್ಯ. ನನ್ನ ಮೇಲೆ ಇಡಿ-ಐಟಿ ಪ್ರಕರಣಗಳಿಲ್ಲ. ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ, ಶಾಸಕರಾಗದವರನ್ನೂ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿ, ನನ್ನನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು

ಒಕ್ಕಲಿಗ ಸಮುದಾಯದ ಕುಂಚಿಟಿಗರನ್ನು ಕಡೆಗಣಿಸಲಾಗಿದೆ. ಸಚಿವ ಸ್ಥಾನ ನೀಡದಿರುವುದು ನನಗಾದ ಅನ್ಯಾಯವಲ್ಲ. ಬದಲಿಗೆ ನಮ್ಮ ಸಮುದಾಯಕ್ಕಾದ ಅನ್ಯಾಯ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ. ನನ್ನನ್ನು ಕಡೆಗಣಿಸಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಗೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ಅದೇ ರೀತಿ ವಿಧಾನಪರಿಷತ್‌ ಸದಸ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಕೂಡ ವರಿಷ್ಠರ ನಿರ್ಧಾರದ ವಿರುದ್ಧ ನಿರಾಸೆ ವ್ಯಕ್ತಪಡಿಸಿದ್ದು, ವಿಧಾನಪರಿಷತ್‌ ಸದಸ್ಯರಲ್ಲಿ ಕನಿಷ್ಠ ಮೂವರಿಗೆ ಸಚಿವ ಸ್ಥಾನ ದೊರಕುತ್ತದೆ ಎಂಬ ವಿಶ್ವಾಸವಿತ್ತು. ಆದರೆ, ಯಾರೊಬ್ಬರನ್ನೂ ಪರಿಗಣಿಸಿಲ್ಲ. ಯಾಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದರು.

ಲಂಬಾಣಿ ಜನಾಂಗಕ್ಕಾದ ಅನ್ಯಾಯ: ಬಂಜಾರ ಸಮುದಾಯದ ಏಕೈಕ ಶಾಸಕ ರುದ್ರಪ್ಪ ಲಮಾಣಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಲಂಬಾಣಿ ಸಮುದಾಯದ ಶೇ.80ರಷ್ಟುಜನರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಅದರಿಂದಲೇ 40ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಬಂಜಾರ ಸಮುದಾಯಕ್ಕೆ ಸೇರಿದ ಶಾಸಕ ನಾನೊಬ್ಬನೇ ಆದ ಕಾರಣ, ನನ್ನನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆಯಿತ್ತು. ಆದರೂ ನನ್ನನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಇದು ಬೇಸರ ತಂದಿದೆ ಎಂದು ತಿಳಿಸಿದರು.

ಎಷ್ಟೇ ಹಿರಿಯರಾದರೂ ಹೈಕಮಾಂಡ್‌ ನಿರ್ಧಾರ ಫೈನಲ್‌: ವೀರಪ್ಪ ಮೊಯ್ಲಿ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಬಳಿ ಮಾತನಾಡಿದ್ದೇನೆ. ಸ್ವಲ್ಪ ಸಮಯ ಕಾಯುವಂತೆ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಜತೆ ಮತ್ತೊಮ್ಮೆ ಮಾತನಾಡುತ್ತೇನೆ. ಅಸಮಾಧಾನಕ್ಕಿಂತ ಪಕ್ಷ ಮುಖ್ಯ. ಸರ್ಕಾರ ಬಂಜಾರ ಸಮುದಾಯವನ್ನು ಗುರುತಿಸದಿರುವುದು ಬೇಸರ ತಂದಿದೆ. ಮುಂದಿನ ಚುನಾವಣೆಗಳಲ್ಲಿ ಈ ವಿಚಾರ ಪರಿಣಾಮ ಬೀರಬಾರದು ಎಂಬುದೇ ನನ್ನ ಆಶಯ ಎಂದರು.

Follow Us:
Download App:
  • android
  • ios