ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಗೆಲ್ಲುವ ಅಭ್ಯರ್ಥಿಗೆ ಮಾತ್ರ ಆದ್ಯತೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಮುಸ್ಲಿಂ ಅಭ್ಯರ್ಥಿಗಳ ನಡುವಿನ ಹೊಂದಾಣಿಕೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ (ಮಾ.16): ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ಈಗಿನಿಂದಲೇ ರಂಗೇರಿದೆ. ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರ ಭಾರೀ ಕಗ್ಗಂಟಾಗಿ ಪರಿಣಮಿಸಿದ್ದು, ಈ ಬಗ್ಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಟಿಕೆಟ್ ಆಕಾಂಕ್ಷಿಗಳು ಮತ್ತು ಸಮುದಾಯದ ನಾಯಕರ ನಡುವಿನ ಜಟಾಪಟಿಗೆ ಸಚಿವರು ಹೈರಾಣಾದ ಸಚಿವರು, ಮೊದಲಿನಂತೆ ಕಡ್ಡಿ ಮುರಿದಂತೆ ಮಾತನಾಡದೇ ಸ್ವಲ್ಪ ಮೆತ್ತಗಾದಂತೆ ಮಾತನಾಡಿದ್ದಾರೆ.

ಗೆಲ್ಲುವ ಅಭ್ಯರ್ಥಿಗಷ್ಟೇ ಆದ್ಯತೆ:

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಲ್ಲಿಕಾರ್ಜುನ, 'ಯಾರಿಗೆ ಟಿಕೆಟ್ ಸಿಗುತ್ತದೆ, ಯಾರು ಗೆಲ್ಲುತ್ತಾರೆ ಎಂಬುದು ದೇವರಿಗೇ ಗೊತ್ತು. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಕಾದು ನೋಡೋಣ. ನಾಳೆ ಉಸ್ತುವಾರಿ ಸಮಿತಿ ಸದಸ್ಯರು ಬಂದು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಮ್ಮ ನಿಲುವು ಸ್ಪಷ್ಟ; ಮೈನಾರಿಟಿ, ಅಹಿಂದ ಅಥವಾ ಬೇರೆ ಸಮುದಾಯ ಎಂಬುವುದಕ್ಕಿಂತ ಮುಖ್ಯವಾಗಿ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು' ಎಂದು ಸ್ಪಷ್ಟಪಡಿಸಿದರು.

ಅಬ್ದುಲ್ ಜಬ್ಬಾರ್ ವಿರುದ್ಧ ಗರಂ:

'ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದಿದ್ದರೆ ಜನರೇ ತೀರ್ಮಾನ ಮಾಡುತ್ತಾರೆ' ಎಂಬ ಅಬ್ದುಲ್ ಜಬ್ಬಾರ್ ಅವರ ಹೇಳಿಕೆಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ಅವರವರ ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ. ಅವರು ಹಿಂದೆ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್ ಬಾವುಟ ಹಿಡಿದು ಕಷ್ಟಕಾಲದಲ್ಲಿ ಕೆಲಸ ಮಾಡಿದವರಿಗೆ ಮಾನ್ಯತೆ ಸಿಗಬೇಕು. ಎಲೆಕ್ಷನ್ ಬಂದಾಗ ಬಂದು ಭಾಷಣ ಮಾಡುವವರಲ್ಲ, ವರ್ಷವಿಡೀ ಕೆಲಸ ಮಾಡಿದ ಕಾರ್ಯಕರ್ತರ ವಿಶ್ವಾಸ ನಮಗೆ ಮುಖ್ಯ' ಎಂದು ಪರೋಕ್ಷವಾಗಿ ಅಬ್ದುಲ್ ಜಬ್ಬಾರ್ ಅವರಿಗೆ ಟಾಂಗ್ ನೀಡಿದರು.

ಬಿಜೆಪಿ ಮತ್ತು ಮುಸ್ಲಿಂ ಅಭ್ಯರ್ಥಿ ಅಡ್ಜಸ್ಟ್‌ಮೆಂಟ್?

ಇದೇ ವೇಳೆ ಒಂದು ಹೆಜ್ಜೆ ಮುಂದೆ ಹೋದ ಸಚಿವರು ವಿರೋಧ ಪಕ್ಷ ಬಿಜೆಪಿಯ ನಡೆಯನ್ನು ಲೇವಡಿ ಮಾಡಿದರು. 'ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಬಿಜೆಪಿಯವರೇ ಕೇಳುತ್ತಿದ್ದಾರೆ. ಇವರಿಬ್ಬರ ನಡುವೆ ಏನು ಅಡ್ಜಸ್ಟ್‌ಮೆಂಟ್ ನಡೆದಿದೆಯೋ ಗೊತ್ತಿಲ್ಲ. ಯಾರೋ ಕಿವಿ ಚುಚ್ಚಿದ್ದಕ್ಕೆ ಬಂಡಾಯದ ಮಾತನಾಡಬಾರದು' ಎಂದು ಸಚಿವರು ಮಾರ್ಮಿಕವಾಗಿ ನುಡಿದರು.

ಪುತ್ರ ಸಮರ್ಥಗೆ ಟಿಕೆಟ್ ಸಿಗುತ್ತಾ?

ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಅವರಿಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗರು ಸಿಎಂ ಮತ್ತು ಡಿಸಿಎಂ ಅವರಿಗೆ ಮನವಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಜನರಿಗೆ ಅವರ ಮೇಲೆ ಅಭಿಮಾನವಿರಬಹುದು. ಆದರೆ ನಾನೇ ಬೇಡ ಅಂದಿದ್ದೇನೆ. ಪಾರ್ಟಿ ಯಾರಿಗೆ ಡಿಸೈಡ್ ಮಾಡುತ್ತದೆಯೋ ಅವರಿಗೆ ಟಿಕೆಟ್ ಕೊಡಲಿ. ಬಾಗಲಕೋಟೆಯಲ್ಲಿ ಹೆಚ್.ವೈ. ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವ ವಿಚಾರದ ಬಗ್ಗೆಯೂ ಚರ್ಚೆ ಇದೆ. ಪಕ್ಷವು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಮಾಡಬಾರದು' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಒಟ್ಟಾರೆಯಾಗಿ ದಾವಣಗೆರೆ ದಕ್ಷಿಣದ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕಾಂಗ್ರೆಸ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ನಾಳೆ ನಡೆಯಲಿರುವ ಉಸ್ತುವಾರಿ ಸಮಿತಿ ಸಭೆಯ ಬಳಿಕ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.