ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ಆರೋಪಿಸಿ, ಭಾಷಣ ಮಾಡದೆ ಸದನದಿಂದ ಹೊರನಡೆದಿದ್ದಾರೆ.. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜ್ಯಪಾಲರು ಸದನದ ಸಂಪ್ರದಾಯಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ಚೆನ್ನೈ: ತಮಿಳುನಾಡು ಸರ್ಕಾರ ಹಾಗೂ ಅಲ್ಲಿನ ರಾಜ್ಯಪಾಲರ ಮುಸುಕಿನ ಗುದ್ದಾಟ ಮತ್ತೆ ಮುಂದುವರೆದಿದೆ. ಇಂದು ತಮಿಳುನಾಡಿನಲ್ಲಿ ರಾಜ್ಯ ವಿಧಾನಸಭಾ ಕಲಾಪ ಆರಂಭವಾದ ನಂತರ ವಾಡಿಕೆಯಂತೆ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಆದರೆ ಅವರು ರಾಷ್ಟ್ರಗೀತೆಗೆ ಸದನದಲ್ಲಿ ಅವಮಾನ ಮಾಡಲಾಗಿದೆ ಎಂದು ಹೇಳಿ ಭಾಷಣ ಮಾಡದೇ ಕಲಾಪದಿಂದ ಹೊರ ನಡೆದಿದ್ದಾರೆ. ತಮಿಳುನಾಡು ವಿಧಾನಸಭೆ ಅಧಿವೇಶನದ ಆರಂಭದಲ್ಲಿ ರಾಜ್ಯಗೀತೆ ನುಡಿಸಿದ ನಂತರ, ರಾಷ್ಟ್ರಗೀತೆಗೆ ಅವಮಾನಿಸಲಾಗಿದೆ ಎಂದು ರಾಜ್ಯಪಾಲರು ಅರೋಪಿಸಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಈ ರೀತಿ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯೆ ಗುದ್ದಾಟ ನಡೆಯುತ್ತಿರುವುದು ಇದೇ ಮೊದಲಲ್ಲ ಈ ಹಿಂದಿನ ಎರಡು ಆರಂಭದ ಅಧಿವೇಶನಗಳಲ್ಲೂ ಇದೇ ರೀತಿಯ ಘಟನೆಗಳು ನಡೆದಿದ್ದವು.
ಇತ್ತ ಕಲಾಪದಿಂದ ರಾಜ್ಯಪಾಲರು ಭಾಷಣ ಮಾಡದೇ ಹೊರ ಹೋದ ನಂತರ ರಾಜ್ಯಪಾಲರ ಕಚೇರಿಯು ಘಟನೆಗೆ ಸಂಬಂಧಿಸಿಂದತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ರಾಜ್ಯಪಾಲರ ಮೈಕ್ರೊಫೋನ್ ಅನ್ನು ಸದನದಲ್ಲಿ ತಮಿಳುನಾಡು ಸರ್ಕಾರ ಪದೇ ಪದೇ ಆಫ್ ಮಾಡಿದೆ. ರಾಜ್ಯ ಸರ್ಕಾರವು ವಾಡಿಕೆಯಂತೆ ತಾನು ಸಿದ್ಧಪಡಿಸಿದ ರಾಜ್ಯಪಾಲರ ಭಾಷಣವನ್ನು ಪ್ರಸ್ತುತಪಡಿಸುತ್ತಿದೆ. ಅದರಲ್ಲಿ ಮಹಿಳಾ ಸುರಕ್ಷತೆಯಲ್ಲಿ 12 ಲಕ್ಷ ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದೆ ಎಂಬುದು ಸೇರಿದಂತೆ ಹಲವಾರು ಆಧಾರರಹಿತ ಹಕ್ಕುಗಳು ಮತ್ತು ದಾರಿತಪ್ಪಿಸುವ ಹೇಳಿಕೆಗಳು ಇವೆ. ಜನರಿಗೆ ಹಾನಿಯಾಗುವಂತಹ ನಿರ್ಣಾಯಕ ಸಮಸ್ಯೆಗಳನ್ನು ಭಾಷಣದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ರಾಜ್ಯಪಾಲ ರವಿ ಅವರ ಕಚೇರಿ ಹೇಳಿಕೆಯಲ್ಲಿ ಘೋಷಿಸಿದೆ.
ಇದಕ್ಕೆ ಆಡಳಿತಾರೂಢ ಡಿಎಂಕೆ ಕೂಡಲೇ ಪ್ರತಿಕ್ರಿಯೆ ನೀಡಿದೆ. ರಾಜ್ಯಪಾಲರ ಕ್ರಮಗಳು ಸದನದ 100 ವರ್ಷಗಳಷ್ಟು ಹಳೆಯ ಸಂಪ್ರದಾಯಳಿಗೆ ಅಗೌರವ ನೀಡಿದೆ ಹಾಗೂ ಅವಮಾನಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದು, ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರು ಒಮ್ಮೆ ಆಡಿಗೆ ಗಡ್ಡ ಏಕೆ ಬೇಕು... ಮತ್ತು ರಾಜ್ಯಕ್ಕೆ ರಾಜ್ಯಪಾಲರು ಏಕೆ ಬೇಕು ಎಂದು ಹಿಂದೆ ಹೇಳಿದ್ದ ಕ್ಷುಲ್ಲಕ ಹೇಳಿಕೆಯನ್ನು ಅವರು ಮತ್ತೆ ನೆನಪಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಆಡಳಿತವು ರಾಜ್ಯಪಾಲರು ಅಥವಾ ಅವರ ಕಚೇರಿಗೆ ಯಾವುದೇ ರೀತಿಯಲ್ಲಿ ಅಗೌರವ ತೋರಿಸಿಲ್ಲ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ. ತಮಿಳು ಜನರನ್ನು ಗೌರವಿಸಲು ರಾಜ್ಯಪಾಲರು ವಿಫಲರಾಗಿದ್ದಾರೆ ಎಂದು ಸ್ಟಾಲಿನ್ ಹೇಳಿದರು.
ಇದನ್ನೂ ಓದಿ:
ಮಗಳ ಮದುವೆಗೆ 25 ಲಕ್ಷ ಮೌಲ್ಯದ ಬೆಳ್ಳಿಯ ಆಮಂತ್ರಣ ಸಿದ್ಧಪಡಿಸಿದ ಉದ್ಯಮಿ: ಏನಿದರ ವಿಶೇಷತೆ
ಇಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ತಮಿಳುನಾಡು ವಿಧಾನಸಭಾ ಕಲಾಪ ಆರಂಭವಾಯ್ತು. ಶಿಷ್ಟಾಚಾರದ ಪ್ರಕಾರ, ರಾಜ್ಯಪಾಲರು ಆರಂಭಿಕ ಭಾಷಣ ಮಾಡಬೇಕಾಗಿತ್ತು. ಆದರೆ, ತಮಿಳುನಾಡು ಗೀತೆ ನುಡಿಸಿದ ನಂತರ ಅಧಿವೇಶನದಲ್ಲಿ ಗೊಂದಲ ಶುರು ಆಯ್ತು. ನಂತರ ರವಿ ಸತತ ಎರಡನೇ ವರ್ಷವೂ ತಮಿಳಿನಲ್ಲಿ ಸಂಕ್ಷಿಪ್ತ ಶುಭಾಶಯ ಕೋರಿ ಸದನದಿಂದ ಹೊರನಡೆದರು. ಆದರೆ ರಾಜ್ಯ ಸರ್ಕಾರ ಮಾತ್ರ ಗವರ್ನರ್ ನಿರ್ಧಾರಕ್ಕೆ ಕ್ಯಾರೇ ಅಂದಿಲ್ಲ, ತಮಿಳುನಾಡು ಸ್ಪೀಕರ್ ಎಂ ಅಪ್ಪಾವು ಮಾತನಾಡಿ ರಾಜ್ಯಪಾಲರಿಗೆ ಶಿಷ್ಟಾಚಾರದ ಬಗ್ಗೆ ಔಪಚಾರಿಕವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಇತ್ತ ರಾಜ್ಯಪಾಲರು ಭಾಷಣ ಮಾಡದೇ ಹೊರನಡೆದರೂ ನಂತರ ಮುಖ್ಯಮಂತ್ರಿಗಳು ರಾಜ್ಯಪಾಲರ ಭಾಷಣವನ್ನು ದಾಖಲೆಯಲ್ಲಿ ಇರಿಸಲು ನಿರ್ಣಯವನ್ನು ಮಂಡಿಸಿದರು.
ಇದನ್ನೂ ಓದಿ: ವಿಶ್ವದ ಅತೀ ಅಪರೂಪದ ಕೋತಿಯ ಸೌಂದರ್ಯಕ್ಕೆ ಫಿದಾ ಆದ ಯುವತಿ : ವೈರಲ್ ಆಗ್ತಿದೆ ಸಿಂಗಾಪುರದ ಕಪಿ
ಭಾಷಣವನ್ನು ದಾಖಲೆಯಲ್ಲಿ ಸೇರಿಸಿಕೊಂಡರೂ ರಾಜ್ಯಪಾಲರು ಅರ್ಧದಲ್ಲೇ ಭಾಷಣ ಮಾಡದೇ ಸದನದಿಂದ ಹೊರನಡೆದಿರುವುದು, ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನಡುವಿನ ನಿರಂತರ ಘರ್ಷಣೆಯನ್ನು ತೋರಿಸುತ್ತಿದೆ. ಮಸೂದೆಗಳಿಗೆ ಒಪ್ಪಿಗೆ ನೀಡುವ ವಿವಾದದ ಕುರಿತು ಇಬ್ಬರ ಮಧ್ಯೆ ಈಗಾಗಲೇ ಹಲವಾರು ಬಾರಿ ಘರ್ಷಣೆ ಆಗಿದ್ದು, ಸುಪ್ರೀಂಕೋರ್ಟ್ನಲ್ಲಿಯೂ ಮುಖಾಮುಖಿಯಾಗಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇಮಿಸಿದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ನಡುವಿನ ಹಣಾಹಣಿ, ತಮಿಳುನಾಡಿನಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮೊದಲು ಆರಂಭವಾಗಿದೆ.


