ಪ್ರಚಾರಕ್ಕೆ ಹೋಗದ ಸೋನಿಯಾ, ಪ್ರಿಯಾಂಕಾ: ಕಾಂಗ್ರೆಸ್ ಶಸ್ತ್ರತ್ಯಾಗ?
ಪ್ರಚಾರಕ್ಕೆ ಹೋಗದ ಸೋನಿಯಾ, ಪ್ರಿಯಾಂಕಾ: ಕಾಂಗ್ರೆಸ್ ಶಸ್ತ್ರತ್ಯಾಗ?| ಮಹಾರಾಷ್ಟ್ರ, ಹರಾರಯಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಪ್ರಚಾರ ಇಲ್ಲ| ಚುನಾವಣೆಗೆ ಮೊದಲೇ ಹಿಂದೆ ಸರಿಯಿತಾ ಕಾಂಗ್ರೆಸ್ ಪಕ್ಷ?
ನವದೆಹಲಿ[ಅ.20]: ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರುವ, ಲೋಕಸಭೆ ಚುನಾವಣೆ ಸೋಲಿನ ಕಹಿ ನೆನಪಿನಿಂದ ಪುಟಿದೇಳಲು ಸೂಕ್ತ ಅವಕಾಶವಾಗಿರುವ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಬ್ಬರದ ಪ್ರಚಾರ ಮಾಡಬೇಕಿದ್ದ ನೆಹರು-ಗಾಂಧಿ ಕುಟುಂಬ ಆರಂಭದಲ್ಲೇ ಸೋಲೊಪ್ಪಿಕೊಂಡಂತೆ ಕಾಣುತ್ತಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಒಂದೇ ಒಂದು ಪ್ರಚಾರ ಭಾಷಣವನ್ನೂ ಮಾಡದಿರುವುದು, ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ ಎರಡೂ ರಾಜ್ಯಗಳಲ್ಲಿ ಕೇವಲ 7 ರಾರಯಲಿಗಳಲ್ಲಿ ಮಾತ್ರವೇ ಪಾಲ್ಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಭರ್ಜರಿ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿ
ಅಕ್ಟೋಬರ್ 21ರಂದು ನಡೆಯಲಿರುವ ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಶನಿವಾರ ಸಂಜೆ ಅಂತ್ಯಗೊಂಡಿತು. ಪ್ರಚಾರ ವಿಷಯದಲ್ಲಿ ನೆಹರು-ಗಾಂಧಿ ಕುಟುಂಬ ಈ ರೀತಿ ನೀರಸ ಧೋರಣೆ ತೋರಿದರೆ, ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 25 ಪ್ರಚಾರ ರಾರಯಲಿಗಳಲ್ಲಿ ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಉಭಯ ರಾಜ್ಯಗಳಲ್ಲಿ ಸಾಕಷ್ಟುಸುತ್ತಿದರು.
ಸೋನಿಯಾ ಗಾಂಧಿ ಅವರು ಆಗಸ್ಟ್ನಲ್ಲಿ ಪುನಃ ಕಾಂಗ್ರೆಸ್ ಅಧ್ಯಕ್ಷೆಯಾದ ನಂತರ ಈವರೆಗೆ ಒಂದೇ ಒಂದು ಸಾರ್ವಜನಿಕ ಭಾಷಣ ಮಾಡಿಲ್ಲ. ಹೀಗಾಗಿ ಮಹಾರಾಷ್ಟ್ರ ಹಾಗೂ ಹರ್ಯಾಣ ಕಣದಲ್ಲಿ ಅವರು ಭಾಷಣ ಮಾಡಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪು ತುಂಬಲು ಯತ್ನಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅವರು ಒಂದು ರಾರಯಲಿಯಲ್ಲೂ ಪಾಲ್ಗೊಳ್ಳಲಿಲ್ಲ.
ಹರ್ಯಾಣದ ಮಹೇಂದ್ರಗಢದಲ್ಲಿ ಶುಕ್ರವಾರ ಅವರು ಪ್ರಚಾರ ಮಾಡಬೇಕಿತ್ತಾದರೂ ಕೊನೇ ಕ್ಷಣದಲ್ಲಿ ಗೈರು ಹಾಜರಾದರು. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂಬುದೇ ಸೋನಿಯಾ ಗೈರಿಗೆ ಕಾರಣ ಎನ್ನಲಾಗಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮಿಂಚಿನ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಗಾಂಧಿ ಕೂಡ ಎಲ್ಲೂ ಕಾಣಿಸಿಕೊಳ್ಳಲಿಲ್ಲ.
‘ವಿಧಾನಸಭೆ ಚುನಾವಣೆಗಳಲ್ಲಿ ರಾಜ್ಯ ನಾಯಕರಿಗೇ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂಬುದು ಕಾಂಗ್ರೆಸ್ಸಿನ ಒಂದು ವಲಯದ ವಾದವಾಗಿತ್ತು. ಅಲ್ಲದೆ, ಉಭಯ ರಾಜ್ಯಗಳ ಮುಖಂಡರಲ್ಲಿ ಭಿನ್ನಮತ ಸ್ಫೋಟಗೊಂಡಿತು. ಇದೇ ಕಾರಣಕ್ಕೆ ಗಾಂಧಿ ಕುಟುಂಬ ಅಷ್ಟುಪ್ರಚಾರ ಮಾಡಲಿಲ್ಲ’ ಎಂದು ಪಕ್ಷದ ಮೂಲಗಳು ಹೇಳಿವೆ.
ಭರ್ಜರಿ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿ
ಉಭಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿವೆ ಎಂಬುದು ಇಲ್ಲಿ ಗಮನಾರ್ಹ.
288 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರ, ವಿಧಾನಸಭೆ ಸ್ಥಾನವಾರು ಪಟ್ಟಿಯಲ್ಲಿ ದೇಶದ ಮೂರನೇ ಅತಿದೊಡ್ಡ ರಾಜ್ಯ. ಇಲ್ಲಿ 48 ಲೋಕಸಭಾ ಕ್ಷೇತ್ರಗಳು ಇವೆ. ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಕಣಕ್ಕೆ ಇಳಿದಿದೆ. ಹರ್ಯಾಣದಲ್ಲಿ 10 ಲೋಕಸಭೆ ಸ್ಥಾನಗಳು ಹಾಗೂ 90 ವಿಧಾನಸಭೆ ಕ್ಷೇತ್ರಗಳು ಇವೆ. ಐಎನ್ಎಲ್ಡಿಯಲ್ಲಿ ಒಡಕು ಮೂಡಿದೆ. ಹೀಗಾಗಿ ಕಾಂಗ್ರೆಸ್ಗೆ ಪೈಪೋಟಿ ನೀಡುವ ಅವಕಾಶವಿತ್ತಾದರೂ, ಕಾಂಗ್ರೆಸ್ ಏಕೋ ಗಂಭೀರವಾಗಿ ಪರಿಗಣಿಸಿಲ್ಲ. ಹರ್ಯಾಣ ಕಾಂಗ್ರೆಸ್ ಒಡೆದ ಮನೆಯಂತಾಗಿದೆ.