ಸಿದ್ದರಾಮಯ್ಯ ವೀರಸಾವರ್ಕರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ| ಈ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ| ದೇಶಕಂಡ ಅಪ್ರತಿಮ ವೀರಸಾವರ್ಕರ್‌ ಅವರ ಬಗ್ಗೆ ಅಪಮಾನ ಮಾಡೋದು ಸರಿಯಲ್ಲ| ಸಿದ್ದರಾಮಯ್ಯಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಂಡು ಮಾತನಾಡಲಿ|  

ಹುಬ್ಬಳ್ಳಿ(ಅ.19): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಸಾವರ್ಕರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕಂಡ ಅಪ್ರತಿಮ ವೀರಸಾವರ್ಕರ್‌ ಅವರ ಬಗ್ಗೆ ಅಪಮಾನ ಮಾಡೋದು ಸರಿಯಲ್ಲ, ಸಿದ್ದರಾಮಯ್ಯ ಅವರ ಈ ನಡೆಯನ್ನು ನಾನು ಖಂಡಿಸುತ್ತೇನೆ.ಅವರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಂಡು ಮಾತನಾಡಲಿ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಅವರಿಗೆ ಗಟ್ಸ್ ಇದ್ದರೆ ಡಾ. ಬಿ. ಆರ್‌. ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಅಂತಾ ಕೇಳಬೇಕಿತ್ತು, ಅಂಬೇಡ್ಕರ್ ಅವರಿಗೆ ಮೊದಲು ಭಾರತರತ್ನ ನೀಡದೇ ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಕೊಡಲಾಯಿತು. ಅವರ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಬಳುವಳಿಯಾಗಿ ಕೊಡಲಾಯಿತು. ಸಂವಿಧಾನ ಬರೆದಿರುವ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಿಲ್ಲ ಎಂದು ತಿಳಿಸಿದ್ದಾರೆ. 

ಮುಂದೆ ಉಗ್ರ ದಾವುದ್ ಇಬ್ರಾಹಿಂಗೂ ಕಾಂಗ್ರೆಸ್‌ನವರು ಭಾರತರತ್ನ ಕೊಡಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಅವರು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರಕ್ಕೆ ಸಂಬಂಧಿದಂತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಯಾವುದೇ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟಗಾರರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೋರಾಟಗಾರರು ಪ್ರತಿಭಟನೆಗೆ ಕುಳಿತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಮಹದಾಯಿ ಇತ್ಯರ್ಥಕ್ಕೆ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಈ ವಿಚಾರ ಇತ್ಯರ್ಥಗೊಳ್ಳಲಿದೆ ಎಂದು ತಿಳಿಸಿದ್ದಾರೆ.