Mandya: ಕಾಂಗ್ರೆಸ್-ಜೆಡಿಎಸ್ಗಿಂತ ಹೆಚ್ಚು ಮತ ಪಡೆಯದಿದ್ದರೆ ರಾಜಕೀಯ ನಿವೃತ್ತಿ: ಶಿವರಾಮೇಗೌಡ
ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್, ಜೆಡಿಎಸ್ಗಿಂತ ಹೆಚ್ಚು ಮತ ಪಡೆಯದೆ ಹೋದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸವಾಲು ಹಾಕಿದ್ದಾರೆ.
ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ (ಡಿ.14): ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್, ಜೆಡಿಎಸ್ಗಿಂತ ಹೆಚ್ಚು ಮತ ಪಡೆಯದೆ ಹೋದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸವಾಲು ಹಾಕಿದ್ದಾರೆ. ಜೆಡಿಎಸ್ನಿಂದ ಉಚ್ಚಾಟನೆಯಾದ ಬಳಿಕ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಸ್ಪರ್ಧೆಗೆ ಶಿವರಾಮೇಗೌಡ ತಯಾರಿ ಆರಂಭಿಸಿದ್ದಾರೆ. ಈ ಮೂಲಕ ತನ್ನ ಉಚ್ಚಾಟನೆಗೆ ಕಾರಣರಾದರ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವ ಶಿವರಾಮೇಗೌಡ ಪ್ರತಿ ದಿನ ಹತ್ತಾರು ಹಳ್ಳಿ ಸುತ್ತಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಗೆಲುವು ಕಂಡ ಸುಮಲತಾರಂತೆ ಪಕ್ಷೇತರ ಸ್ಪರ್ಧೆಗೆ ನಿರ್ಧಾರ ಮಾಡಿರುವ ಅವರು ನಾಗಮಂಗಲದ ಸ್ವಾಭಿಮಾನ ಹೆಸರಲ್ಲಿ ಚುನಾವಣಾ ಕಹಳೆ ಊದಿದ್ದಾರೆ. 1989 ಹಾಗೂ 1994ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಶಿವರಾಮೇಗೌಡ ಗೆಲುವು ಕಂಡಿದ್ದರು. ಆದರೆ 2004 ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದರು.
ನಾಗಮಂಗಲ ಜೆಡಿಎಸ್ನಲ್ಲಿ ಭುಗಿಲೆದ್ದ ಭಿನ್ನಮತ: ಸ್ವಪಕ್ಷೀಯ ಎಂಎಲ್ಎ ವಿರುದ್ಧವೇ ಮಾಜಿ ಎಂಎಲ್ಸಿ ಅಸಮಾಧಾನ
15 ವರ್ಷಗಳ ಬಳಿಕ ಮತ್ತೆ ಚಿಗುರಿದ ಎಂಎಲ್ಎ ಕನಸು: 18 ವರ್ಷಗಳ ಬಳಿಕ ವಿಧಾನಸಭಾ ಅಖಾಡಕ್ಕೆ ಧುಮುಕಿರುವ ಶಿವರಾಮೇಗೌಡ ಕೊನೆಯದಾಗಿ ಅಧಿಕಾರ ಅನುಭವಿಸಿದ್ದು ಲೋಕಸಭಾ ಸದಸ್ಯನಾಗಿ. 2018ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಕೇವಲ 5 ತಿಂಗಳು ಮಾತ್ರ ಎಂಪಿ ಆಗಿದ್ದರು. ಆದರೆ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಪಕ್ಷೇತರ ಸ್ಪರ್ಧೆಗೆ ನಿರ್ಧರಿಸಿರುವ ಅವರು ನಾಗಮಂಗಲ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಮೇಗೌಡ ನಾನು 15 ವರ್ಷದಿಂದ ಎಂಎಲ್ಎ ಆಗುವ ಆಸೆ ಬಿಟ್ಟಿದ್ದೆ. ಈ ಬಾರಿ ಎಂಎಲ್ಎ ಆಗಬೇಕು ಎಂದು ಬಂದಿದ್ದೇನೆ.
ಮಸೀದಿ ಸಂಘರ್ಷ: ಹಿಂದೂಗಳಿಂದ ಶ್ರೀರಂಗಪಟ್ಟಣದಲ್ಲಿ ಭಾರಿ ಪ್ರತಿಭಟನೆ
ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ. ನಾಗಮಂಗಲದಲ್ಲಿ 17 ಚುನಾವಣೆ ನಡೆದಿವೆ. 17 ಚುನಾವಣೆಯಲ್ಲಿ 6 ರಲ್ಲಿ ಪಕ್ಷೇತರರು ಗೆದ್ದಿದ್ದಾರೆ, ಅದರಲ್ಲಿ 2 ನಾನು ಗೆದ್ದಿದ್ದೇನೆ. ಜನಗಳ ಅಭಿಲಾಷೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ. ಸುಮಲತಾ ಅಂಬರೀಶ್ ಸ್ವಾಭಿಮಾನದ ಕಹಳೆ ಊದಿದ್ದು ಬೇರೆ ಕಾರಣಕ್ಕೆ. ನಾನು ಸ್ವಾಭಿಮಾನದ ಕಹಳೆ ಊದಿ ಎರಡು ಬಾರಿ ಪಕ್ಷೇತರವಾಗಿ ಗೆದ್ದಿದ್ದೇನೆ. ನನ್ನ ದಾರಿ ಸುಲಭ ಹಾಗೂ ಸುಗಮವಾಗಿದೆ. ಕಾಂಗ್ರೆಸ್, ಜೆಡಿಎಸ್ಗಿಂತ ಹೆಚ್ಚು ಮತ ತೆಗೆದುಕೊಳ್ಳದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.