ರಾಜ್ಯಸಭಾ ಚುನಾವಣೆಯ ನಾಲ್ಕನೇ ಸ್ಥಾನಕ್ಕೆ ಬಿಜೆಪಿಯೂ ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಪಕ್ಷದ ಮುಖಂಡ ಲೆಹರ್ಸಿಂಗ್ ಸಿರೋಯ ಅವರನ್ನು ಘೋಷಿಸಿದ್ದು, ಕಣ ರಂಗೇರಿದಂತಾಗಿದೆ.
ಬೆಂಗಳೂರು (ಮೇ.31): ರಾಜ್ಯಸಭಾ ಚುನಾವಣೆಯ ನಾಲ್ಕನೇ ಸ್ಥಾನಕ್ಕೆ ಬಿಜೆಪಿಯೂ ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಪಕ್ಷದ ಮುಖಂಡ ಲೆಹರ್ಸಿಂಗ್ ಸಿರೋಯ ಅವರನ್ನು ಘೋಷಿಸಿದ್ದು, ಕಣ ರಂಗೇರಿದಂತಾಗಿದೆ. ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಎರಡು ಸ್ಥಾನಗಳು ನಿರಾಯಾಸವಾಗಿ ಲಭಿಸುವುದರಿಂದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಚಿತ್ರನಟ ಜಗ್ಗೇಶ್ ಅವರನ್ನು ಅಭ್ಯರ್ಥಿಗಳನ್ನಾಗಿ ಭಾನುವಾರವೇ ಘೋಷಿಸಿತ್ತು. ಇದೀಗ ಮೂರನೇ ಸ್ಥಾನವನ್ನೂ ಗೆಲ್ಲುವ ಕಸರತ್ತು ನಡೆಸಲು ಮುಂದಾಗಿದೆ. ಬಿಜೆಪಿಯ ಮೂವರೂ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಒಟ್ಟು ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಜಯಿಸಲಿವೆ. ನಾಲ್ಕನೇ ಸ್ಥಾನ ಗೆಲ್ಲಲು ಇತರ ಪಕ್ಷದ ಮತಗಳ ಬೆಂಬಲ ಅಗತ್ಯವಾಗಲಿದೆ. ಅಗತ್ಯ ಮತಗಳ ಬಲ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷ ಸೋಮವಾರಷ್ಟೇ ತನ್ನ ಎರಡನೇ ಅಭ್ಯರ್ಥಿಯನ್ನಾಗಿ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿತ್ತು. ಮಂಗಳವಾರ ಜೆಡಿಎಸ್ ಕೂಡ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲಿದೆ. ಇದೀಗ ಬಿಜೆಪಿ ಅಭ್ಯರ್ಥಿ ಕೂಡ ಅಖಾಡ ಪ್ರವೇಶಿಸಲಿದ್ದಾರೆ. ಅಲ್ಲಿಗೆ ನಾಲ್ಕನೇ ಸ್ಥಾನಕ್ಕೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಂತಾಗಲಿದ್ದು, ಯಾರು ಯಾವ ಪಕ್ಷದ ಮತಗಳನ್ನು ಸೆಳೆಯಲಿದ್ದಾರೆ ಎಂಬುದು ಕುತೂಹಲಕರವಾಗಿದೆ.
Rajya Sabha Election: ಬಿಜೆಪಿಗೆ ಒಕ್ಕಲಿಗರ ಸೆಳೆಯಲು ಜಗ್ಗೇಶ್ ರಾಜ್ಯಸಭೆಗೆ ಆಯ್ಕೆ?
ವಿಧಾನಸಭೆಯಲ್ಲಿ ಬಿಜೆಪಿ 120 ಶಾಸಕರನ್ನು ಹೊಂದಿದ್ದು, ಸ್ಪೀಕರ್ ಮತ್ತು ಪಕ್ಷೇತರ ಸದಸ್ಯರನ್ನು ಸೇರಿ ಒಟ್ಟು 122 ಸಂಖ್ಯಾಬಲ ಹೊಂದಿದೆ. ಈ ಪೈಕಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ಮತಗಳು ಬೇಕಾಗುವುದರಿಂದ ಮೊದಲ ಇಬ್ಬರು ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಅವರ ಗೆಲುವಿಗೆ ಬೇಕಾದಷ್ಟು ಮತಗಳನ್ನು ನೀಡಿದ ಬಳಿಕ ಉಳಿಯುವ ಮತಗಳು ಲೆಹರ್ ಸಿಂಗ್ ಅವರಿಗೆ ಹಂಚಲಾಗುತ್ತದೆ. ಜತೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಮತಗಳನ್ನು ಸೆಳೆಯುವ ಪ್ರಯತ್ನ ನಡೆಯುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಲೆಹರ್ ಸಿಂಗ್ ಅವರು ಬಿಜೆಪಿಯಿಂದ ಈ ಹಿಂದೆ 2 ಬಾರಿ ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಅವರ ಹೆಸರು ಚರ್ಚೆಯಾಗಿತ್ತು.
Rajya Sabha Election: ಸಿದ್ದು, ಡಿಕೆಶಿ ಭೇಟಿಯಾದ ಜೈರಾಂ: 30ಕ್ಕೆ ನಾಮಪತ್ರ?
ಜಗ್ಗೇಶ್ ಅಚ್ಚರಿ ಆಯ್ಕೆ: ನಟ ಜಗ್ಗೇಶ್ ಆಯ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿ ಮುಡಿಸಿದೆ. ಯಾವುದೇ ಟಿಕೆಟ್ ರೇಸ್ನಲ್ಲಿ ಇರಲಿಲಲ್ಲ. ಬಿಜೆಪಿ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಸಹ ಮಾಡಿರಲಿಲ್ಲ.ರಾಜ್ಯದ ಪಟ್ಟಿಯನ್ನು ಕೇಂದ್ರದ ವರಿಷ್ಠರು ಸೈಡಿಗಿಟ್ಟು ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಇದೀಗ ಮತ್ತೊಮ್ಮೆ ಜಗ್ಗೇಶ್ ಅವರ ಆಯ್ಕೆ ಮೂಲಕ ಅಚ್ಚರಿಯನ್ನು ಸಾಬೀತು ಮಾಡಿದ್ದಾರೆ. ಎಲ್ಲಾ ವಿಚಾರದಲ್ಲೂ ರಹಸ್ಯ ಉಳಿಸಿಕೊಳ್ಳುವಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿಯ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲೂ ನಮ್ಮದೇ ಅಂತಿಮ ನಿರ್ಧಾರ ಎಂದು ಸಾರಿದ್ದಾಗಿದೆ. ಯಡಿಯೂರಪ್ಪನವರ ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು. ಆದರೆ, ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹೊರತಾಗಿ ಇತರ ಇಬ್ಬರು ಅಚ್ಚರಿಯ ಆಯ್ಕೆಯಾಗಿತ್ತು. ಇದೀಗ ಜಗ್ಗೇಶ್ ಆಯ್ಕೆ ಸಹ ಅಚ್ಚರಿಗೆ ಕಾರಣವಾಗಿದೆ.
