ರಾಜ್ಯದಿಂದ ರಾಜ್ಯಸಭೆ ಸದಸ್ಯ ಸ್ಥಾನಗಳಿಗೆ ಜೂನ್‌ 10 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನಿಂದ ಜೈರಾಮ್‌ ರಮೇಶ್‌ ಅವರ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಜೈರಾಮ್‌ ರಮೇಶ್‌ ಅವರು ಗುರುವಾರ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಬೆಂಗಳೂರು (ಮೇ.27): ರಾಜ್ಯದಿಂದ ರಾಜ್ಯಸಭೆ ಸದಸ್ಯ ಸ್ಥಾನಗಳಿಗೆ ಜೂನ್‌ 10 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನಿಂದ ಜೈರಾಮ್‌ ರಮೇಶ್‌ ಅವರ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಜೈರಾಮ್‌ ರಮೇಶ್‌ ಅವರು ಗುರುವಾರ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ರಾಜ್ಯದಿಂದ ಕಾಂಗ್ರೆಸ್‌ ಸ್ವಂತ ಮತಗಳ ಆಧಾರದ ಮೇಲೆ ಆಯ್ಕೆಯಾಗಲು ಅವಕಾಶವಿರುವ ಒಂದು ಸ್ಥಾನಕ್ಕೆ ಜೈರಾಮ್‌ ರಮೇಶ್‌ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ. ಮೇ 30 ರಂದು ಸೋಮವಾರ ಜೈರಾಮ್‌ ರಮೇಶ್‌ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಇದರ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಯಿಂದ ಎಲ್ಲಾ ಶಾಸಕರು, ಪರಿಷತ್‌ ಸದಸ್ಯರಿಗೆ ಮೇ 30 ರಂದು ಜೈರಾಮ್‌ ರಮೇಶ್‌ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಅಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿ ಬಳಿ ಬರಲು ಸೂಚನೆ ನೀಡಲಾಗಿದೆ. ಜೈರಾಮ್‌ ರಮೇಶ್‌ ಅವರು 2016ರಲ್ಲಿ ರಾಜ್ಯದಿಂದಲೇ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಜೂನ್‌ 10 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೇ 31 ಅಂತಿಮ ದಿನವಾಗಿದೆ. ಕಾಂಗ್ರೆಸ್‌ನಿಂದ ಜೈರಾಮ್‌ ರಮೇಶ್‌ ಅವರ ಹೆಸರು ಬಹುತೇಕ ಅಂತಿಮವಾಗಿದ್ದು, ಪಟ್ಟಿಪ್ರಕಟ ಒಂದೇ ಬಾಕಿ ಇದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಕೈ ಬಿಟ್ಟ ಸಿಬಲ್, ಹಿರಿಯ ನಾಯಕನ ಈ ನಡೆ ಹಿಂದಿದೆ ಆ ಒಂದು ಕಾರಣ!

ಕಾಂಗ್ರೆಸ್‌ನಿಂದ ಮತ್ತೆ ರಾಜ್ಯಸಭೆಗೆ ಜೈರಾಮ್‌ ರಮೇಶ್‌: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಲು ಹಲವು ನಾಯಕರು ಪ್ರಯತ್ನ ನಡೆಸಿರುವಾಗಲೇ ಹೈಕಮಾಂಡ್‌ ಜೈರಾಮ್‌ ರಮೇಶ್‌ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದ್ದು, ನಾಮಪತ್ರ ಸಲ್ಲಿಸಲು ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿರುವುದು ಒಂದೇ ಸ್ಥಾನ. 

ನಿರ್ಮಲಾಗೆ ಕರ್ನಾಟಕದಿಂದ ರಾಜ್ಯಸಭೆ ಟಿಕೆಟ್‌ ಡೌಟ್‌!

ಮತ್ತೊಂದು ಅವಧಿಗೆ ತಾವೇ ರಾಜ್ಯಸಭೆಗೆ ತೆರಳುವ ಆಕಾಂಕ್ಷೆಯನ್ನು ಜೈರಾಮ್‌ ರಮೇಶ್‌ ಹೊಂದಿದ್ದು, ಅದಕ್ಕೆ ಹೈಕಮಾಂಡ್‌ ಕೂಡ ಹಸಿರು ನಿಶಾನೆ ನೀಡಿದೆ ಎನ್ನಲಾಗಿದೆ. ರಾಜ್ಯದ ಬಹುತೇಕ ನಾಯಕರಿಗೆ ಜೈರಾಮ್‌ ರಮೇಶ್‌ ಅವರು ಮತ್ತೊಂದು ಅವಧಿಗೆ ರಾಜ್ಯದಿಂದ ರಾಜ್ಯಸಭೆಗೆ ತೆರಳುವುದು ಇಷ್ಟವಿಲ್ಲ. ಆದರೆ, ಹೈಕಮಾಂಡ್‌ ನಿರ್ಧಾರವಾಗಿರುವುದರಿಂದ ಚಕಾರವೆತ್ತುವ ಧೈರ್ಯವೂ ಇಲ್ಲ. ಈ ನಡುವೆ, ಹಲವು ನಾಯಕರು ರಾಜ್ಯಸಭೆಗೆ ಪ್ರಯತ್ನ ನಡೆಸಲು ಮುಂದಾಗಿದ್ದು, ಜೈರಾಮ್‌ ರಮೇಶ್‌ ಹೆಸರು ಅಂತಿಮಗೊಂಡಿದೆ ಎಂಬ ಮಾಹಿತಿ ಪಡೆದು ಭ್ರಮನಿರಸನಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.