Rajya Sabha Election: ಬಿಜೆಪಿಗೆ ಒಕ್ಕಲಿಗರ ಸೆಳೆಯಲು ಜಗ್ಗೇಶ್ ರಾಜ್ಯಸಭೆಗೆ ಆಯ್ಕೆ?
ರಾಜ್ಯಸಭೆಯ ಎರಡನೇ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಚಿತ್ರನಟ ಹಾಗೂ ಪಕ್ಷದ ವಕ್ತಾರ ಜಗ್ಗೇಶ್ ಅವರನ್ನು ಆಯ್ಕೆ ಮಾಡುವ ಮೂಲಕ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಸೆಳೆಯುವ ತಂತ್ರದ ಭಾಗವಾಗಿ ಆ ಸಮುದಾಯದ ಮತ್ತೊಬ್ಬ ಮುಖಂಡನನ್ನು ಸಿದ್ಧ ಮಾಡಿಕೊಂಡಂತಾಗಿದೆ.
ಬೆಂಗಳೂರು (ಮೇ.30): ರಾಜ್ಯಸಭೆಯ ಎರಡನೇ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಚಿತ್ರನಟ ಹಾಗೂ ಪಕ್ಷದ ವಕ್ತಾರ ಜಗ್ಗೇಶ್ ಅವರನ್ನು ಆಯ್ಕೆ ಮಾಡುವ ಮೂಲಕ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಸೆಳೆಯುವ ತಂತ್ರದ ಭಾಗವಾಗಿ ಆ ಸಮುದಾಯದ ಮತ್ತೊಬ್ಬ ಮುಖಂಡನನ್ನು ಸಿದ್ಧ ಮಾಡಿಕೊಂಡಂತಾಗಿದೆ. ಬಿಜೆಪಿ ರಾಜ್ಯದ ಇತರ ಭಾಗಗಳಲ್ಲಿ ಪ್ರಬಲವಾಗಿದ್ದರೂ ಹಳೆ ಮೈಸೂರು ಭಾಗದಲ್ಲಿ ದುರ್ಬಲವಾಗಿದೆ ಎಂಬುದನ್ನು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ. ಹೀಗಾಗಿ, ಈ ಬಾರಿ ಇಲ್ಲಿ ಸಂಘಟನೆ ಬಲಪಡಿಸಿ ಚುನಾವಣೆಗೆ ಇಳಿಯಬೇಕು ಎಂಬ ಸೂಚನೆಯನ್ನು ಪಕ್ಷದ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕರೂ ಆಗಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದರು.
ಈ ಭಾಗದಲ್ಲಿ ಪ್ರಮುಖವಾಗಿರುವ ಒಕ್ಕಲಿಗ ಮುಖಂಡರು ಹಾಗೂ ಮತದಾರರನ್ನು ಸೆಳೆಯಬೇಕು ಎಂಬ ಸೂಚನೆಯನ್ನೂ ನೀಡಿದ್ದರು. ಈ ನಿಟ್ಟಿನಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಜಗ್ಗೇಶ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಕ್ಕಲಿಗರಲ್ಲಿ ಪ್ರಮುಖವಾಗಿರುವ ಗಂಗಟಗಾರ ಉಪಜಾತಿಗೆ ಸೇರಿರುವ ತುಮಕೂರು ಜಿಲ್ಲೆಯ ಜಗ್ಗೇಶ್ ಅವರು ಈ ಹಿಂದೆ 2008ರಲ್ಲಿ ಕಾಂಗ್ರೆಸ್ ಶಾಸಕ ಸ್ಥಾನ ತೊರೆದು ಬಿಜೆಪಿಗೆ ಆಗಮಿಸಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಸೋತರೂ ಪಕ್ಷದಲ್ಲಿ ಸಕ್ರಿಯರಾಗಿ ಮುಂದುವರೆದರು.
ರಾಜ್ಯಸಭಾ ಟಿಕೆಟ್ ಸಿಕ್ಕಿದ್ದಕ್ಕೆ ಫುಲ್ ಖುಷ್, ರಾಯರ ಕೃಪೆ, ಪವಾಡಕ್ಕೆ ಧನ್ಯ ಎಂದ ಜಗ್ಗೇಶ್
ಅಲ್ಲಿಂದ ಮುಂದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಅಲ್ಲದೆ, ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಟಿ.ಸೋಮಶೇಖರ್ ವಿರುದ್ಧ ಸೋಲುಂಡಿದ್ದರು. ಬಳಿಕ ಸೋಮಶೇಖರ್ ಅವರು ಬಿಜೆಪಿಗೆ ವಲಸೆ ಬಂದು ಉಪಚುನಾವಣೆಯಲ್ಲಿ ಗೆದ್ದರು. ಇತ್ತೀಚೆಗೆ ಜಗ್ಗೇಶ್ ಅವರನ್ನು ಪಕ್ಷದ ರಾಜ್ಯ ವಕ್ತಾರನನ್ನಾಗಿ ನೇಮಿಸಲಾಗಿತ್ತು.
ಚುನಾವಣೆ ತಂತ್ರ
* ತುಮಕೂರು ಜಿಲ್ಲೆಯ ಜಗ್ಗೇಶ್ ಒಕ್ಕಲಿಗ ಸಮಾಜದ ಮುಖಂಡ.
* ಹಳೇ ಮೈಸೂರಲ್ಲಿ ಈ ಜನಾಂಗದ ಮತ ಸೆಳೆಯಲು ಯಂತ್ರ.
* ಪಕ್ಷ ದುರ್ಬಲವಾಗಿರುವ ಈ ಭಾಗದಲ್ಲಿ ಸಂಘಟನೆಗೆ ಬಿಜೆಪಿ ಯತ್ನ.
* ಅಮಿತ್ ಶಾ ಕೂಡ ಒಕ್ಕಲಿಗ ಮತದಾರರ ಸೆಳೆಯಲು ಸೂಚಿಸಿದ್ದರು.
* ಈ ನಿಟ್ಟಿನಲ್ಲಿ ರಾಜ್ಯಸಭೆಗೆ ಜಗ್ಗೇಶ್ಗೆ ಟಿಕೆಟ್: ಬಿಜೆಪಿ ಮೂಲಗಳು.
ಕರ್ನಾಟಕ ರಾಜ್ಯಸಭಾ ಎಲೆಕ್ಷನ್ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜಗ್ಗೇಶ್ ಅಚ್ಚರಿ ಆಯ್ಕೆ
ಜಗ್ಗೇಶ್ ಅಚ್ಚರಿ ಆಯ್ಕೆ: ನಟ ಜಗ್ಗೇಶ್ ಆಯ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿ ಮುಡಿಸಿದೆ. ಯಾವುದೇ ಟಿಕೆಟ್ ರೇಸ್ನಲ್ಲಿ ಇರಲಿಲಲ್ಲ. ಬಿಜೆಪಿ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಸಹ ಮಾಡಿರಲಿಲ್ಲ.ರಾಜ್ಯದ ಪಟ್ಟಿಯನ್ನು ಕೇಂದ್ರದ ವರಿಷ್ಠರು ಸೈಡಿಗಿಟ್ಟು ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಇದೀಗ ಮತ್ತೊಮ್ಮೆ ಜಗ್ಗೇಶ್ ಅವರ ಆಯ್ಕೆ ಮೂಲಕ ಅಚ್ಚರಿಯನ್ನು ಸಾಬೀತು ಮಾಡಿದ್ದಾರೆ. ಎಲ್ಲಾ ವಿಚಾರದಲ್ಲೂ ರಹಸ್ಯ ಉಳಿಸಿಕೊಳ್ಳುವಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿಯ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲೂ ನಮ್ಮದೇ ಅಂತಿಮ ನಿರ್ಧಾರ ಎಂದು ಸಾರಿದ್ದಾಗಿದೆ. ಯಡಿಯೂರಪ್ಪನವರ ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು. ಆದರೆ, ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹೊರತಾಗಿ ಇತರ ಇಬ್ಬರು ಅಚ್ಚರಿಯ ಆಯ್ಕೆಯಾಗಿತ್ತು. ಇದೀಗ ಜಗ್ಗೇಶ್ ಆಯ್ಕೆ ಸಹ ಅಚ್ಚರಿಗೆ ಕಾರಣವಾಗಿದೆ.