*  ಸಂವಿಧಾನವನ್ನು ಗಾಳಿಗೆ ತೂರಿ ಎಂಎಲ್‌ಎಗಳನ್ನು ಖರೀದಿ*  ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಕೈವಾಡ ಇಲ್ಲ *  ತಮ್ಮ ಅಧಿಕಾರದ ಹಸಿವು ನೀಗಿಸಿಕೊಳ್ಳಲು ಅಸಂವಿಧಾನಿಕ ಕ್ರಮಕ್ಕೆ ಮುಂದಾದ ಬಿಜೆಪಿಗರು 

ಕಲಬುರಗಿ(ಜೂ.26): ಮಹಾರಾಷ್ಟ್ರದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕಲಬುರಗಿಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಗಾಳಿಗೆ ತೂರಿ ಎಂಎಲ್‌ಎಗಳನ್ನು ಖರೀದಿಸುವ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ತಮ್ಮ ಪಕ್ಷ ಎಲ್ಲಿ ಅಧಿಕಾರದಲ್ಲಿ ಇಲ್ಲವೋ ಅಲ್ಲೆಲ್ಲ ಅಸಂವಿಧಾನಿಕ ದಾರಿಗಳ ಮೂಲಕ ಅಧಿಕಾರಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಬಹುಶಃ ಯುಪಿ ಹೊರತುಪಡಿಸಿ ಗೋವಾ, ಮಧ್ಯಪ್ರದೇಶ, ಕರ್ನಾಟಕ, ಅಸ್ಸಾಂ ಹಾಗೂ ಮೇಘಾಲಯ ಸೇರಿದಂತೆ ಬಹುತೇಕ ಕಡೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ತಮ್ಮ ಅಧಿಕಾರದ ಹಸಿವು ನೀಗಿಸಿಕೊಳ್ಳಲು ಬಿಜೆಪಿಯವರು ಅಸಂವಿಧಾನಿಕ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.

Dalit Row: ದಲಿತರು ಕಾನ್ವೆಂಟ್‌ನಲ್ಲಿ ಓದಬಾರದೆ?: ಪ್ರಿಯಾಂಕ್‌ ಖರ್ಗೆ ಕಿಡಿ

ಶಿವಸೇನೆಯ ಭಿನ್ನಮತಿಯರು ಗುಂಪಿನ ಹೇಳಿಕೆಗೆ ಉತ್ತರಿಸಿದ ಪ್ರಿಯಾಂಕ್‌, ಶಿವಸೇನೆಯ ಸಿದ್ಧಾಂತ ಏನೇ ಇರಲಿ ನಾವು ಹಾಗೂ ಅವರು ಜೊತೆಯಾಗಿ ಒಂದು ಒಳ್ಳೆಯ ಸರ್ಕಾರ ಕೊಡುವ ಉದ್ದೇಶ ಹೊಂದಿದ್ದೆವು. ಅದರಂತೆ ಎರಡು ವರ್ಷದಿಂದ ನಡೆಯುತ್ತಾ ಬಂದಿದೆ. ಅಭಿವೃದ್ಧಿ ವಿಚಾರದಲ್ಲಿ ತಕರಾರಿಲ್ಲ. ಆದರೆ ಆ ಪಕ್ಷದ ನಾಯಕರು ತಮ್ಮ ನಡುವಿನ ಜಗಳವನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ ಎಂದು ದೂರಿದರು.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಕೈವಾಡ ಇಲ್ಲ ಎನ್ನುವ ಬಿಜೆಪಿ ಪ್ರತಿಪಾದನೆಗೆ ಉತ್ತರಿಸಿದ ಖರ್ಗೆ, ಸೂರತ್‌ ಹಾಗೂ ಅಸ್ಸಾಂನಲ್ಲಿ ಇವರ ಕುಮ್ಮಕ್ಕು ಇಲ್ಲದೇ ಅವರಿಗೆಲ್ಲ ಪೊಲೀಸ್‌ ಭದ್ರತೆ ಒದಗಿಸಲಾಗಿದೆಯಾ? ಇಲ್ಲಿಯೂ ಕೂಡಾ 17 ಶಾಸಕರು ಹೋದರಲ್ಲ ಆವಾಗಲೂ ಇವರ ಕುಮ್ಮಕ್ಕು ಇರಲಿಲ್ಲವೇ? ಜಾತ್ಯತೀತ ನಿಲುವಿನ ಶಾಸಕರು ಬಿಜೆಪಿಯ ಕುಮ್ಮಕ್ಕು ಇಲ್ಲದೇ ಏಕಾಏಕಿ ಬಿಜೆಪಿ ಸೇರುತ್ತಾರೆಯೇ? ಅದೇಗೆ ತಾವು ನಂಬಿದ ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಸಿದ್ಧಾಂತಗಳನ್ನು ಬಲಿಕೊಟ್ಟು ಆರ್‌ಎಸ್‌ಎಸ್‌ ಹಾಗೂ ಕೋಮುವಾದಿ ವಿಚಾರಗಳಿಗೆ ಬೆಂಬಲ ಕೊಡುತ್ತಾರೆ? ಇದಕ್ಕೆ ಅಧಿಕಾರದ ಆಸೆ ಹಾಗೂ ಹಣ ಆಮಿಷ ಕಾರಣವಾಗಿದೆ ಎಂದರು.

ಕಲ್ಯಾಣ ಕರ್ನಾಟಕದ ಕೆಲ ಕಾಂಗ್ರೆಸ್‌ ನಾಯಕರು ಕೂಡ ಬಿಜೆಪಿ ಸೇರುವ ಸುದ್ದಿಗಳ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಖರ್ಗೆ, ಯಾರಾದರೂ ಹೋಗಲಿ. ಆದರೆ ಮೊದಲೇ ತಿರ್ಮಾನ ಮಾಡಲಿ. ಚುನಾವಣೆಯ ನಂತರ ಜನರ ಆಶೀರ್ವಾದ ಮಾರಿಕೊಂಡು ಪಕ್ಷ ಸೇರುವುದಕ್ಕಿಂತ ಮೊದಲೇ ಹೋಗಲಿ. ಕಾಂಗ್ರೆಸ್‌ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದು, ಮುಂದೆಯೂ ಹೋರಾಟ ನಡೆಸುತ್ತದೆ ಎಂದು ತಿಳಿಸಿದರು.