ರಾಮನಗರ ಕ್ಷೇತ್ರದಲ್ಲಿಯೇ ರಾಜಕೀಯ ಮರು ಜನ್ಮ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಂತೆ ರಾಮನಗರದಲ್ಲಿಯೂ ನನ್ನ ವಿರುದ್ಧ ಕುತಂತ್ರ ನಡೆಯಿತು. ನಾನು ಸೋತಿದ್ದಕ್ಕೆ ನೀವ್ಯಾರು ಎದೆಗುಂದಬೇಡಿ. ರಾಮನಗರ ಕ್ಷೇತ್ರದಲ್ಲಿಯೇ ನಾನು ರಾಜಕೀಯ ಮರು ಜನ್ಮ ಪಡೆಯುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರ (ಮೇ.19): ಮಂಡ್ಯದಂತೆ ರಾಮನಗರದಲ್ಲಿಯೂ ನನ್ನ ವಿರುದ್ಧ ಕುತಂತ್ರ ನಡೆಯಿತು. ನಾನು ಸೋತಿದ್ದಕ್ಕೆ ನೀವ್ಯಾರು ಎದೆಗುಂದಬೇಡಿ. ರಾಮನಗರ ಕ್ಷೇತ್ರದಲ್ಲಿಯೇ ನಾನು ರಾಜಕೀಯ ಮರು ಜನ್ಮ ಪಡೆಯುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ರಾಮನಗರ ಕ್ಷೇತ್ರದ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಮಂಡ್ಯ ಅಥವಾ ಮೈಸೂರು ಜಿಲ್ಲೆಗೆ ಹೋಗುವುದಿಲ್ಲ. ರಾಮನಗರ ಕ್ಷೇತ್ರದಲ್ಲಿ ಸೋತಿದ್ದೇನೆ. ಈ ಕ್ಷೇತ್ರದಿಂದಲೇ ಗೆದ್ದು ರಾಜಕೀಯ ಜೀವನ ಆರಂಭಿಸುತ್ತೇನೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.
ಚುನಾವಣೆಗಳಲ್ಲಿ ದೇವೇಗೌಡ, ವಾಜಪೇಯಿ, ಕುಮಾರಸ್ವಾಮಿ ಅವರಂತಹ ಘಟಾನುಘಟಿಗಳೇ ಸೋಲು ಕಂಡವರು. ಇನ್ನು ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ. ಆದರೆ, ನನ್ನ ಸೋಲಿಗೆ ಕುತಂತ್ರ ರಾಜಕಾರಣ ಒಂದು ಭಾಗವಾಯಿತು. ನಮ್ಮಲ್ಲಿನ ಕೆಲ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ. ನಾನು ಶಾಸಕ ಆಗಲೇಬೇಕೆಂದು ಆಸೆ ಪಟ್ಟವನಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಆಶೀರ್ವಾದದಿಂದ 10 ವರ್ಷಗಳ ಹಿಂದೆಯೇ ಶಾಸಕನಾಗುತ್ತಿದ್ದೆ. ನನಗೆ ಶಾಸಕ ಅಧಿಕಾರ ಇಲ್ಲದಿರಬಹುದು. ಚುನಾವಣೆಯಲ್ಲಿ ಸೋತಿರಬಹುದು ಜನರ ಪ್ರೀತಿ ವಿಶ್ವಾಸಕ್ಕೆ ಕೊರತೆ ಆಗಲಿಲ್ಲ. ದೇವೇಗೌಡರ ಬಳಿ ಬಿ ಫಾರಂ ಪಡೆಯುವಾಗ ಕಣ್ಣೀರು ಹಾಕಿದ್ದೆ.
ಕಮಲ ಹಿಡಿದಾಗಲೇ ಸಿ.ಪಿ.ಯೋಗೇಶ್ವರ್ಗೆ ಹೆಚ್ಚು ಸೋಲು!
ಸೋತ ನಂತರ ಕಣ್ಣೀರು ಹಾಕಲಿಲ್ಲ. ಕಣ್ಣೀರು ಹಾಕುವುದರಿಂದ ಏನು ಪ್ರಯೋಜನ ಆಗಲ್ಲ. ರಾಮನಗರ ಜಿಲ್ಲೆ ಮಾತ್ರವಲ್ಲ. ಹಳೇ ಮೈಸೂರು ಭಾಗ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗಾಗಿ ಮತ್ತೆ ಪ್ರವಾಸ ಆರಂಭಿಸುತ್ತೇನೆ ಎಂದು ನಿಖಿಲ್ ಹೇಳಿದರು. 1994ರಲ್ಲಿ ದೇವೇಗೌಡರು, 2004, 2008, 2013ರವರೆಗೆ ಕುಮಾರಸ್ವಾಮಿ ಹಾಗೂ 2018ರಲ್ಲಿ ಅನಿತಾಕುಮಾರಸ್ವಾಮಿ ಕ್ಷೇತ್ರ ಪ್ರತಿನಿಧಿಸಿದರು. ರಾಮನಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಿದರು. ಆಡಳಿತ ಭವನ, ವಿವಿಧ ಕಾಲೇಜುಗಳು ತಲೆ ಎತ್ತಿದವು. ಹಾರೋಹಳ್ಳಿಯನ್ನು ತಾಲೂಕು ಘೋಷಣೆ ಮಾಡಿಸಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೊರತೆ ಇರಲಿಲ್ಲ. ಮತದಾರರು ಇದ್ಯಾವುದನ್ನು ಪರಿಗಣಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿರವರು ಅನೇಕ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯಲ್ಲಿ ತೊಡಗಿದ್ದರು. ರಾಮನಗರದಲ್ಲಿ ಕುತಂತ್ರ ರಾಜಕಾರಣ ನಡೆಯುತ್ತಿರುವುದನ್ನು ತಿಳಿದು ಅವರೊಂದಿಗೆ ಪ್ರವಾಸಕ್ಕೆ ಹೋಗದೆ ಕಾರ್ಯಕರ್ತರಿಗೆ ಹಿನ್ನಡೆ ಆಗಬಾರದೆಂಬ ಉದ್ದೇಶದಿಂದ ಕ್ಷೇತ್ರದಲ್ಲಿಯೇ ಉಳಿದುಕೊಂಡಿದ್ದೆ. ನನ್ನ ಸೋಲನ್ನು ನಾನು ಮಾತ್ರವಲ್ಲ ನಾಡಿನ ಜನರು ನಿರೀಕ್ಷೆ ಮಾಡಿರಲಿಲ್ಲ. ಜನರು ತೀರ್ಪಿಗೆ ತಲೆಬಾಗುತ್ತೇನೆ. ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ಆದರೆ, ಕಾಂಗ್ರೆಸ್ ಗಿಫ್್ಟ ಕಾರ್ಡ್ ನೀಡಿ ಆಮಿಷವೊಡ್ಡಿ ದಾರಿ ತಪ್ಪಿಸಿದರು. ಆ ಹಣವಾದರು ಜನರ ಕೈಗೆ ತಲುಪಿಸುವ ಕೆಲಸ ಮಾಡಲಿ ಎಂದರು.
ಗೆದ್ದರೂ, ಸೋತರು ಇದೇ ನನ್ನ ಕರ್ಮಭೂಮಿ: ಸಿ.ಪಿ.ಯೋಗೇಶ್ವರ್
ರಾಮನಗರ ಕ್ಷೇತ್ರ ಚುನಾವಣೆ ಫಲಿತಾಂಶ ಪ್ರತಿಯೊಬ್ಬರಿಗೂ ಆಘಾತ ನೀಡಿದೆ. ಇದರಿಂದ ಕಾರ್ಯಕರ್ತರು ಧೃತಿಗೆಡಬೇಡಿ. ನೀವೆಲ್ಲರು ಶಕ್ತಿ ಮೀರಿ ಪ್ರಾಮಾಣಿಕವಾಗಿ ಹೋರಾಡಿದ್ದೀರಿ. ಪಕ್ಷ ಹಾಗೂ ವೈಯಕ್ತಿಕವಾಗಿ ಸೋತಿರಬಹುದು. ತಾಯಂದಿರ ಆಶೀರ್ವಾದ, ಯುವಕರ ಸಹಕಾರ ಮತ್ತು ಪ್ರೀತಿಗೆ ಕೊರತೆ ಇಲ್ಲ. ಅದನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ನನ್ನ ಸೋಲಿಗೆ ಪಕ್ಷಾತೀತವಾಗಿ ಎಲ್ಲೆಡೆಯಿಂದ ಬೇಸರ ವ್ಯಕ್ತವಾಗಿದೆ.
- ನಿಖಿಲ್, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ