ಮುಂದಿನ ಜೂನ್ ತಿಂಗಳ ಒಳಗಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕೋಲಾದಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಲಕ್ಕಿ ಒಕ್ಕಲಿಗರ ಎಸ್ಟಿ ಸೇರ್ಪಡೆ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದ್ದು, ಮತ್ತೊಮ್ಮೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಅಂಕೋಲಾ: ಮುಂದಿನ ಜೂನ್ ತಿಂಗಳ ಒಳಗಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾವಣೆಯನ್ನು ನಡೆಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಚುನಾವಣೆಗಳನ್ನು ನಡೆಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಚುನಾವಣೆಗಳು ಮುಗಿದ ನಂತರ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ, ಚುನಾವಣೆಗಳು ಸಮೀಪಿಸಿವೆ. ಜನಗಣತಿಯೂ ನಡೆಯಲಿದೆ. ಹೀಗಾಗಿ, ಸದ್ಯ ಹೊಸದಾಗಿ ಪಟ್ಟಣ ಪಂಚಾಯಿತಿ ರಚನೆ ಸಾಧ್ಯವಾಗದು ಎಂದರು.
ಹಾಲಕ್ಕಿ ಒಕ್ಕಲಿಗರ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದೆ
ಹಾಲಕ್ಕಿ ಒಕ್ಕಲಿಗರು ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ತಮ್ಮನ್ನು ಸೇರಿಸಿ ಎಂದು ನನ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಅದನ್ನು ಕೇಂದ್ರ ಸರ್ಕಾರ ಮಾಡಬೇಕು. ಕೇಂದ್ರ ಸರ್ಕಾರವೇ ಹಾಲಕ್ಕಿ ಒಕ್ಕಲಿಗರನ್ನು ಎಸ್ಟಿಗೆ ಸೇರಿಸೋಕೆ ಸಾಧ್ಯವಿಲ್ಲ ಎಂದು ವರದಿ ತಿರಸ್ಕರಿಸಿದೆ. ಮತ್ತೊಮ್ಮೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಮಂಜಗುಣಿ-ಗಂಗಾವಳಿ ಸೇತುವೆ ಲೋಕಾರ್ಪಣೆ
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನಲ್ಲಿ ಭಾನುವಾರ ಮಂಜಗುಣಿ-ಗಂಗಾವಳಿ ಸೇತುವೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು ಭಾನುವಾರ ಮಂಜಗುಣಿ-ಗಂಗಾವಳಿ ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಬಹುಜನರ ಒತ್ತಾಸೆಯ ಬೇಡಿಕೆಯಾಗಿದ್ದ ಮಂಜಗುಣಿ-ಗಂಗಾವಳಿ ಸೇತುವೆ ಕಾಮಗಾರಿಗೆ ನಾನೇ 2017ರಲ್ಲಿ ಶಂಕುಸ್ಥಾಪನೆ ಮಾಡಿದ್ದೆ. ನಾನೇ ಶಂಕುಸ್ಥಾಪನೆ ಮಾಡಿದ್ದ ಸೇತುವೆ ನನ್ನ ಕೈಯಿಂದಲೇ ಉದ್ಘಾಟನೆಗೊಂಡಿರುವುದು ಅತೀವ ಸಂತಸ ತಂದಿದೆ. ಈ ಸೇತುವೆ ಹಿಂದೆಯೆ ಉದ್ಘಾಟನೆ ಆಗಬೇಕಿತ್ತು. ಆದರೆ ಹಿಂದಿನ ಆಡಳಿತದ ಸರ್ಕಾರ ಈ ಸೇತುವೆಯ ಬಗ್ಗೆ ಆಸಕ್ತಿ ತೋರಲು ಹಿಂದೇಟು ಹಾಕಿದ ಪರಿಣಾಮವಾಗಿ ಸೇತುವೆ ಕಾಮಗಾರಿ ಮುಗಿಯಲು ವಿಳಂಬವಾಗಿದೆ ಎಂದು ಹೇಳಿದರು.
ಈ ಸೇತುವೆ ಆಗದೇ ಇದ್ದರೆ ಸುಮಾರು 18 ಕಿಮೀ ಸುತ್ತಿ ಬಳಸಿ ಗೋಕರ್ಣಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಈ 18 ಕಿಮೀ ದಾರಿ ಸುಗಮವಾಗಿದೆ. ಶಂಕುಸ್ಥಾಪನೆಯ ವೇಳೆ ಈ ಸೇತುವೆಗೆ ₹28 ಕೋಟಿ ಅನುದಾನ ಬೇಕಾಗಿತ್ತು. ಆದರೆ ಇದರ ವೆಚ್ಚ ₹35 ಕೋಟಿಗೆ ವಿಸ್ತರಣೆಯಾಗಿದೆ. ನಾನು ಇದನ್ನು ಬಹಳ ದೊಡ್ಡ ಅಭಿವೃದ್ಧಿ ಕೆಲಸ ಅಂತ ಹೇಳಲ್ಲ. ಆದರೆ ಅಗತ್ಯವಾಗಿ ಬೇಕಾದಂಥ ಸೇತುವೆಯನ್ನು ನಮ್ಮ ಸರ್ಕಾರ ಮಾಡಿಕೊಟ್ಟಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.


