ಈ ವರ್ಷಾಂತ್ಯಕ್ಕೆ ಚುಣಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಇದಲ್ಲದೆ, ‘ಬನಾಯೇಂಗೆ ನಯಾ ಬಿಹಾರ, ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ ಎಂಬ ಹೊಸ ಉದ್ಘೋಷ ಸಾರಿದ್ದಾರೆ.

ಮೋತಿಹಾರಿ (ಬಿಹಾರ) : ಈ ವರ್ಷಾಂತ್ಯಕ್ಕೆ ಚುಣಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಇದಲ್ಲದೆ, ‘ಬನಾಯೇಂಗೆ ನಯಾ ಬಿಹಾರ, ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ (ಹೊಸ ಬಿಹಾರವನ್ನು ನಿರ್ಮಿಸುತ್ತೇವೆ. ಮತ್ತೊಮ್ಮೆ ಎನ್‌ಡಿಎ ಸರ್ಕಾರ) ಎಂಬ ಹೊಸ ಉದ್ಘೋಷ ಸಾರಿದ್ದಾರೆ.

ಮೋತಿಹಾರಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಅವರು, ‘ಬಡವರಿಗೆ ಉದ್ಯೋಗ ನೀಡುವ ಮೊದಲು ಅವರ ಭೂಮಿ ಕಸಿದುಕೊಂಡ ಆರ್‌ಜೆಡಿಗೆ ಯುವಕರಿಗೆ ಉದ್ಯೋಗ, ಅಭಿವೃದ್ಧಿ ಯೋಚಿಸಲೂ ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ ಮತ್ತು ಆರ್‌ಜೆಡಿ ಬಡವರು, ಸಾಮಾಜಿಕವಾಗಿ ಹಿಂದುಳಿದವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ. ಇಬ್ಬರೂ ಕೂಡ ರಾಜ್ಯವನ್ನು ನಿರ್ಲಕ್ಷಿಸಿದ್ದರು. ಆರ್‌ಜೆಡಿ- ಕಾಂಗ್ರೆಸ್‌ ಅಭಿವೃದ್ಧಿ ಮಾಡಲಿಲ್ಲ. ಎಂದಿಗೂ ಬಡವರ ಸುಧಾರಣೆಗೆ ಚಿಂತಿಸಲಿಲ್ಲ. ಆರ್‌ಜೆಡಿ ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ಯೋಜಿಸಲು ಸಾಧ್ಯವಿಲ್ಲ. 

ಏಕೆಂದರೆ ಅವರು ಬಡವರಿಗೆ ಉದ್ಯೋಗ ನೀಡುವ ಮೊದಲು ಅವರ ಭೂಮಿ ಕಸಿದುಕೊಂಡರು’ ಎಂದು ಲಾಲು ಮೇಲಿನ ಭೂಲಂಚ ಪ್ರಕರಣ ಉಲ್ಲೇಖಿಸಿ ಪರೋಕ್ಷವಾಗಿ ಆರೋಪಿಸಿದರು. ಇದೇ ವೇಳೆ ಬಿಹಾರ ಚುನಾವಣೆ ಗೆಲ್ಲಲು ಕಾರ್ಯಕರ್ತರಿಗೆ ಕರೆ ನೀಡಿದ ಅವರು ‘ಬನಾಯೇಂಗೆ ನಯಾ ಬಿಹಾರ, ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.