ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಮೂರನೇ ಅವಧಿಯ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಬಿಜೆಪಿ 'ಮಹಾ ಜನಸಂಪರ್ಕ ಅಭಿಯಾನ' ಆರಂಭಿಸಿದೆ. ಈ ಅಭಿಯಾನದಲ್ಲಿ ಸಂಸದರು ಪಾದಯಾತ್ರೆ ಕೈಗೊಳ್ಳಲಿದ್ದು, ಪ್ರಧಾನಿ ಮೋದಿ ದೇಶಾದ್ಯಂತ ರ್‍ಯಾಲಿಗಳನ್ನು ನಡೆಸಲಿದ್ದಾರೆ.

ನವದೆಹಲಿ (ಜೂ.9) : ಎನ್‌ಡಿಎ, ಇಂಡಿಯಾ ಕೂಟದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದು ಪ್ರಧಾನಿ ಮೋದಿ ಸತತ ಮೂರನೇ ಬಾರಿ ಕೇಂದ್ರದ ಗದ್ದುಗೆ ಹಿಡಿದು ಭರ್ತಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಎ ಸರ್ಕಾರ ಹಾಗೂ ಕಮಲ ಪಾಳಯ 3.0 ಸರ್ಕಾರದ ಸಾಧನೆಗಳನ್ನು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನತೆಗೆ ತಲುಪಿಸಲು ಮುಂದಾಗಿದೆ. ಜೊತೆಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದು 11 ವರ್ಷ ಪೂರ್ಣಗೊಳ್ಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿನ್ನೆಲೆಯಲ್ಲಿ ಮಹಾ ಜನಸಂಪರ್ಕ ಅಭಿಯಾನ ಆರಂಭಕ್ಕೆ ಬಿಜೆಪಿ ಮುಂದಾಗಿದೆ. ಈ ಪ್ರಕಾರ ಬಿಜೆಪಿ ಸಂಸದರು ವಾರದಲ್ಲಿ ಎರಡು ದಿನ ತಮ್ಮ ಕ್ಷೇತ್ರದಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ಲೋಕಸಭಾ ಕ್ಷೇತ್ರಗಳಲ್ಲಿ 20-25 ಕಿ.ಮೀ ಪಾದಯಾತ್ರೆ ನಡೆಸಲಿದ್ದಾರೆ. ಅಮಿತ್ ಶಾ ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ. ಮಾತ್ರವಲ್ಲದೇ ಪ್ರಧಾನಿಯಾಗಿ 11 ವರ್ಷ ಹಿನ್ನೆಲೆಯಲ್ಲಿ ಮೋದಿ ದೇಶಾದ್ಯಂತ ರ್‍ಯಾಲಿ ಹಮ್ಮಿಕೊಳ್ಳಲಿದ್ದಾರೆ.

2024ರ ಲೋಕಸಭೆ ಚುನಾವಣೆ ಜಿದ್ದಾಜಿದ್ದಿನ ಕಣವಾಗಿತ್ತು. ಒಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವಾದರೆ , ಮತ್ತೊಂದೆಡೆ ಕಾಂಗ್ರೆಸ್‌ ನೇತೃತ್ವದಲ್ಲಿ ಹಲವು ವಿಪಕ್ಷಗಳನ್ನೊಳಗೊಂಡು ಇಂಡಿಯಾ ಮಹಾ ಮೈತ್ರಿ ರಚನೆಯಾಗಿತ್ತು. ಈ ಬಿಗು ಪೈಪೋಟಿಯಲ್ಲಿ ಇಂಡಿಯಾ 234 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಎನ್‌ಡಿಎ ಕೂಟ 292ರಲ್ಲಿ ಗೆದ್ದು ಅಧಿಕಾರಕ್ಕೇರಿತ್ತು.

2014, 2019ರಲ್ಲಿ ಐತಿಹಾಸಿ ಗೆಲುವು ಸಾಧಿಸಿದ್ದ ಬಿಜೆಪಿ 2024ರಲ್ಲಿ ಗೆದ್ದು ಬೀಗಿತ್ತು. ಸತತವಾಗಿ ಮೂರನೇಯ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ನೆಹರೂ ಬಳಿಕ ಸುದೀರ್ಘವಾಗಿ ಅಧಿಕಾರ ನಡೆಸಿದ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.