Asianet Suvarna News Asianet Suvarna News

ಫೋಟೋ ವಿವಾದ: ಕಾಂಗ್ರೆಸ್‌ ಧರಣಿ, ಸಭೆಗೆ ಬಹಿಷ್ಕಾರ

ತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದೆ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಏಕಾಏಕಿ ವೀರ ಸಾವರ್ಕರ್‌ ಸೇರಿದಂತೆ ಗಣ್ಯರ ಭಾವಚಿತ್ರಗಳನ್ನು ಅನಾವರಣಗೊಳಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಧೋರಣೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಸುವರ್ಣಸೌಧದ ಮೆಟ್ಟಿಲುಗಳ ಬಳಿ ಧರಣಿ ಹಾಗೂ ಕಲಾಪ ಸಲಹಾ ಸಮಿತಿ ಬಹಿಷ್ಕಾರದ ಮೂಲಕ ಪ್ರತಿಭಟಿಸಿತು.

Photo Controversy Congress protest and boycott meeting belagavi rav
Author
First Published Dec 20, 2022, 12:20 PM IST

 ಸುವರ್ಣಸೌಧ (ಡಿ.20) : ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದೆ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಏಕಾಏಕಿ ವೀರ ಸಾವರ್ಕರ್‌ ಸೇರಿದಂತೆ ಗಣ್ಯರ ಭಾವಚಿತ್ರಗಳನ್ನು ಅನಾವರಣಗೊಳಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಧೋರಣೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಸುವರ್ಣಸೌಧದ ಮೆಟ್ಟಿಲುಗಳ ಬಳಿ ಧರಣಿ ಹಾಗೂ ಕಲಾಪ ಸಲಹಾ ಸಮಿತಿ ಬಹಿಷ್ಕಾರದ ಮೂಲಕ ಪ್ರತಿಭಟಿಸಿತು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಧರಣಿ ನಡೆಸಿದ ಕಾಂಗ್ರೆಸ್‌ ಶಾಸಕರು, ‘ಸಾವರ್ಕರ್‌ ಸೇರಿದಂತೆ ಯಾರೊಬ್ಬರ ಫೋಟೊ ಅಳವಡಿಕೆಗೂ ನಮ್ಮ ವಿರೋಧವಿಲ್ಲ. ಆದರೆ, ಶಿಷ್ಟಾಚಾರ ಉಲ್ಲಂಘನೆ ಮಾಡಿ ಯಾವುದೇ ಚರ್ಚೆಯಿಲ್ಲದೆ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಗಮನ ಬೇರೆಡೆ ಸೆಳೆಯಲು ಇದನ್ನು ಬಳಸಿಕೊಳ್ಳುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ’ ಎಂದು ಪ್ರತಿಪಾದಿಸಿದರು.

ಹಸುಗೂಸಿನೊಂದಿಗೆ ಅಸೆಂಬ್ಲಿಗೆ ಆಗಮಿಸಿದ NCP ಕಾಂಗ್ರೆಸ್‌ ಶಾಸಕಿ!

ಜತೆಗೆ, ದೇಶಕ್ಕೆ ಕೊಡುಗೆ ನೀಡಿದ ನಾಯಕರು ಹಾಗೂ ದಾರ್ಶನಿಕರಾದ ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನಾರಾಯಣ ಗುರು, ಬಾಬಾಸಾಹೇಬ್‌ ಅಂಬೇಡ್ಕರ್‌, ಜವಾಹರಲಾಲ್‌ ನೆಹರೂ, ಬಾಬು ಜಗಜೀವನ್‌ ರಾಮ್‌, ಕುವೆಂಪು, ವಲ್ಲಭಭಾಯಿ ಪಟೇಲ್‌ ಮುಂತಾದವರ ಭಾವಚಿತ್ರ ಅಳವಡಿಸಬೇಕು ಎಂಬುದು ನಮ್ಮ ಒತ್ತಾಯ. ಇದಕ್ಕಾಗಿ ಈ ಹೋರಾಟ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಇದನ್ನು ಮುಂದುವರೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲಾಪ ಸಲಹಾ ಸಮಿತಿ ಸಭೆಗೆ ಬಹಿಷ್ಕಾರ:

ಭಾವಚಿತ್ರ ಅನಾವರಣ ವಿಚಾರದಲ್ಲಿ ಸ್ಪೀಕರ್‌ ಧೋರಣೆ ಖಂಡಿಸಿ ಕಾಂಗ್ರೆಸ್‌ ಸದಸ್ಯರು ಸೋಮವಾರ ಮಧ್ಯಾಹ್ನ ಸ್ಪೀಕರ್‌ ಅಧ್ಯಕ್ಷತೆಯಲ್ಲಿ ನಡೆದ ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯನ್ನೂ ಬಹಿಷ್ಕರಿಸಿದರು.

ವಿಧಾನಸಭೆ ಸಭಾಂಗಣದಲ್ಲಿ ಅನಾವರಣಗೊಳ್ಳುವ ಭಾವಚಿತ್ರ ಸದನದ ಆಸ್ತಿ. ಹೀಗಾಗಿ ಭಾವಚಿತ್ರ ಅನಾವರಣ ಸದನದಲ್ಲಿ ಸಂಭ್ರಮದ ಕಾರ್ಯಕ್ರಮ ಆಗಿರಬೇಕು. ಸದನದ ಕಾರ್ಯಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ಅಖೈರುಗೊಳಿಸಬೇಕು. ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಎಲ್ಲಾ ಹಿರಿಯ ಸದಸ್ಯರ ಸಹಮತದೊಂದಿಗೆ ಆಗಬೇಕು. ಈ ಪ್ರಕ್ರಿಯೆಗಳನ್ನು ಕೈಗೊಳ್ಳದೆ ಏಕಾಏಕಿ ಭಾವಚಿತ್ರ ಅನಾವರಣ ಮಾಡಿದ ಸ್ಪೀಕರ್‌ ಅವರು ನಾಮ್‌ಕೆವಾಸ್ತೆ ಕರೆಯುವ ಸಲಹಾ ಸಮಿತಿಗೆ ತೆರಳುವ ಅವಶ್ಯಕತೆ ಇಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್‌ ನಾಯಕರು ಸಭೆಯನ್ನು ಬಹಿಷ್ಕರಿಸಿದರು.

ಏನಿದು ಭಾವಚಿತ್ರ ಅಳವಡಿಕೆ ವಿವಾದ:

ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಸದಸ್ಯರೊಂದಿಗೆ ಚರ್ಚಿಸದೆ, ಕನಿಷ್ಠ ಕಲಾಪ ಸಲಹಾ ಸಮಿತಿಯಲ್ಲೂ ನಿರ್ಧಾರ ಮಾಡದೆ ಏಕಾಏಕಿ ಸ್ವಾಮಿ ವಿವೇಕಾನಂದ, ಸುಭಾಷ್‌ ಚಂದ್ರಬೋಸ್‌, ಬಿ.ಆರ್‌.ಅಂಬೇಡ್ಕರ್‌, ಬಸವಣ್ಣ, ಮಹಾತ್ಮ ಗಾಂಧೀಜಿ, ವಲ್ಲಭಭಾಯಿ ಪಟೇಲ್‌, ವೀರ ಸಾವರ್ಕರ್‌ ಭಾವಚಿತ್ರಗಳನ್ನು ಅಳವಡಿಸಿ ಅನಾವರಣಗೊಳಿಸಿದರು.

ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಸೇರಿದಂತೆ ಬಹುತೇಕರಿಗೆ ಆಹ್ವಾನ ನೀಡಿಲ್ಲ. ಜತೆಗೆ ಪ್ರತಿಪಕ್ಷಗಳು ಸೇರಿದಂತೆ ವಿಧಾನಸಭೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸದನ ಸ್ವತ್ತಾಗಲಿರುವ ಭಾವಚಿತ್ರಗಳನ್ನು ವಿಧಾನಸಭೆ ಸದಸ್ಯರನ್ನು ಕತ್ತಲಲ್ಲಿಟ್ಟು ಅನಾವರಣ ಮಾಡಿದ್ದಾರೆ ಎಂಬುದು ಕಾಂಗ್ರೆಸ್‌ ಆರೋಪ.

ಇದು ಪ್ರತಿಭಟನೆಯಲ್ಲ, ಬೇಡಿಕೆ: ಸಿದ್ದು

ಇದಕ್ಕೂ ಮುನ್ನ ಸುವರ್ಣಸೌಧ ಮೆಟ್ಟಿಲ ಮೇಲೆ ನಡೆಸಲಾದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಸಾವರ್ಕರ್‌ ಸೇರಿದಂತೆ ಯಾರೊಬ್ಬರ ಭಾವಚಿತ್ರ ಅಳವಡಿಕೆಗೂ ನಮ್ಮ ವಿರೋಧವಿಲ್ಲ. ಆದರೆ, ನಮ್ಮನ್ನು ಕತ್ತಲಲ್ಲಿಟ್ಟು ಮಾಡಿದ್ದಕ್ಕೆ ಆಕ್ಷೇಪವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಸಭಾಂಗಣದಲ್ಲಿ ಯಾವುದೇ ಫೋಟೋ ಅಳವಡಿಸಿದರೆ ಅದು ವಿಧಾನಸಭೆಯ ಸ್ವತ್ತಾಗುತ್ತದೆ. ಹೀಗಾಗಿ ವಿಧಾನಸಭೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಡಳಿತ ಹಾಗೂ ವಿರೋಧಪಕ್ಷದ ಎಲ್ಲರನ್ನೂ ಸೇರಿ ಒಟ್ಟಾರೆ ವಿಧಾನಸಭೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಸ್ಪೀಕರ್‌ ಅವರು ಕನಿಷ್ಠ ಸದನ ಕಲಾಪ ಸಲಹಾ ಸಮಿತಿಯಲ್ಲೂ ಚರ್ಚೆ ಮಾಡಿಲ್ಲ. ಯಾವುದೇ ಚರ್ಚೆಯಿಲ್ಲದೆ, ನನಗೂ ಆಹ್ವಾನವಿಲ್ಲದೇ ಏಕಾಏಕಿ ಅಳವವಡಿಸಿರುವುದಕ್ಕೆ ವಿರೋಧವಿದೆ ಎಂದು ಹೇಳಿದರು.

ಸ್ಪೀಕರ್‌ ಅವರು ಯಾರ ಭಾವಚಿತ್ರ ಅಳವಡಿಸಬೇಕು ಎಂದು ನಮ್ಮ ಜತೆ ಚರ್ಚಿಸಿಲ್ಲ. ಹೀಗಾಗಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌, ನೆಹರೂ, ವಲ್ಲಭಭಾಯಿ ಪಟೇಲ್‌, ಜಗಜೀವನ್‌ ರಾಮ್‌, ಬಸವಣ್ಣ, ಶಿಶುನಾಳ ಶರೀಫರು, ವಾಲ್ಮೀಕಿ, ನಾರಾಯಣಗುರು, ಕುವೆಂಪು ಅವರಂತಹ ರಾಷ್ಟ್ರೀಯ ನಾಯಕರು ಹಾಗೂ ದಾರ್ಶನಿಕರ ಫೋಟೋ ಇಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದರು.

ಗಮನ ಬೇರೆಡೆ ಸೆಳೆಯುವ ಷಡ್ಯಂತ್ರ:

ರಾಜ್ಯದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಮತದಾರರ ಪಟ್ಟಿಹಗರಣ, ಕಾನೂನು ಸುವ್ಯವಸ್ಥೆ ಹಾಳಾಗಿರುವುದು ಸೇರಿದಂತೆ ನಾವು ಪ್ರಸ್ತಾಪಿಸುವ ಅಂಶಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಏಕಾಏಕಿ ಭಾವಚಿತ್ರ ಅಳವಡಿಕೆ ಮಾಡಿದ್ದಾರೆ. ಈ ರೀತಿ ಭಾವಚಿತ್ರ ಅಳವಡಿಕೆ ಮಾಡಿದರೆ ಭಾವಚಿತ್ರದಲ್ಲಿರುವ ಗಣ್ಯರಿಗೂ ಗೌರವ ತೋರಿದಂತಾಗುವುದಿಲ್ಲ ಎಂದು ಹೇಳಿದರು.

ಧರಣಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಸತೀಶ್‌ ಜಾರಕಿಹೊಳಿ, ಮಾಜಿ ಸಚಿವರಾದ ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟಿಲ್‌ ಸೇರಿದಂತೆ ಹಲವವರು ಭಾಗವಹಿಸಿದ್ದರು.

ದಾರ್ಶನಿಕರ ಫೋಟೋ ಅಳವಡಿಸಲು ಸ್ಪೀಕರ್‌ಗೆ ಸಿದ್ದು ಪತ್ರ

ಧರಣಿಗೂ ಮೊದಲು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು ಬೆಳಗಾವಿ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ದಾರ್ಶನಿಕರು, ವಿಚಾರವಂತರು ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದ್ದಾರೆ.

Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್‌ ಫೋಟೋ ಅನಾವರಣ

ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನಾರಾಯಣಗುರು, ಬಾಬಾಸಾಹೇಬ್‌ ಅಂಬೇಡ್ಕರ್‌, ಜವಾಹರಲಾಲ್‌ ನೆಹರೂ, ಬಾಬು ಜಗಜೀವನ್‌ರಾಮ್‌, ಕುವೆಂಪು, ವಲ್ಲಭಭಾಯಿ ಪಟೇಲ್‌ ಮುಂತಾದವರ ಭಾವಚಿತ್ರ ಅಳವಡಿಸಬೇಕು. ಅವರÜ ವಿಚಾರಧಾರೆ, ಆದರ್ಶಗಳು ಸಾರ್ವಕಾಲಿಕ ಸತ್ಯ ಮತ್ತು ಅನುಕರಣೀಯ, ಆ ಕಾರಣದಿಂದ ಈ ಎಲ್ಲಾ ಮಹನೀಯರ ಭಾವಚಿತ್ರಗಳನ್ನು ಬೆಳಗಾವಿಯ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಅಳವಡಿಸಿ ಅವರ ಆದರ್ಶಗಳಿಗೆ ಮೆರುಗು ನೀಡಬೇಕು ಎಂದು ಹೇಳಿದ್ದಾರೆ.

Follow Us:
Download App:
  • android
  • ios