ಕೃಷಿ ಅಧಿಕಾರಿಗಳೆದುರು ಹಣದ ಬೇಡಿಕೆ ಇಟ್ಟಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ‘ಪೇ-ಸಿಎಸ್‌’ ಅಭಿಯಾನ ನಡೆಸಿದರು. 

ಮಂಡ್ಯ (ಆ.10): ಕೃಷಿ ಅಧಿಕಾರಿಗಳೆದುರು ಹಣದ ಬೇಡಿಕೆ ಇಟ್ಟಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ‘ಪೇ-ಸಿಎಸ್‌’ ಅಭಿಯಾನ ನಡೆಸಿದರು. ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಸಚಿವ ಚಲುವರಾಯಸ್ವಾಮಿ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಪೇ-ಸಿಎಸ್‌ ಅಭಿಯಾನದ ಪೋಸ್ಟರ್‌ ಅಂಟಿಸಿ, ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ, ಹೆದ್ದಾರಿಯ ಮಧ್ಯಭಾಗದ ಕಲ್ಲುಗಳಿಗೂ ಪೋಸ್ಟರ್‌ ಅಂಟಿಸಿದ ಬಿಜೆಪಿಯ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು. ಅಲ್ಲದೆ, ಪೇ-ಸಿಎಸ್‌ ಪೋಸ್ಟರ್‌ಗಳನ್ನು ಕಿತ್ತು ಹಾಕಿದರು. ಈ ಹಿಂದೆ ಕಾಂಗ್ರೆಸಿಗರು ಬಿಜೆಪಿ ವಿರುದ್ಧ ಪೇಸಿಎಂ ಅಭಿಯಾನ ನಡೆಸಿದ್ದರು.

Add Asianetnews Kannada as a Preferred SourcegooglePreferred

ಸುಳ್ಳು ದೂರು ಖಂಡಿಸಿ ಪ್ರತಿಭಟನೆ: ರಾಜ್ಯ ಪಾಲರಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಸುಳ್ಳು ದೂರು ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ.ರಾಜೇಶ್‌ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು, ಮುಖಂಡರು ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಡಳಿತ ಸೌಧದ ಎದುರು ತೆರಳಿ ನಕಲಿ ಸಹಿ ಮಾಡಿ ರಾಜ್ಯ ಪಾಲರಿಗೆ ದೂರು ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರಾಜ್ಯ ಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪ ಪರಾಕಾಷ್ಠೆಗೆ: ಕೋಟ ಶ್ರೀನಿವಾಸ ಪೂಜಾರಿ

ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ, ಷಡ್ಯಂತ್ರ ರೂಪಿಸಿ ಸತ್ಯಕ್ಕೆ ದೂರವಾದ ಅರೋಪ ಮಾಡಿದ್ದಾರೆ. ಇದರಿಂದ ಕೃಷಿ ಸಚಿವರ ತೇಜೋವಧೆ ಆಗಿದೆ. ಕೂಡಲೇ ಪತ್ರ ಬರೆದಿರುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಮನ್ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ ಮಾತನಾಡಿ, ಕಳೆದ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಪಕ್ಷಕ್ಕೆ ಅಧಿಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಈ ರೀತಿಯ ತಂತ್ರಗಳನ್ನು ಎಳೆಯುವ ಮೂಲಕ ಸಚಿವರ ಘನತೆಗೆ ದಕ್ಕೆ ತರುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನನ್ನ ಸಾಯಿಸಿ ಉಪಚುನಾವಣೆ ಕುತಂತ್ರ: ಪ್ರಭು ಚವ್ಹಾಣ್‌ ಆರೋಪ

ಪ್ರತಿಭಟನೆ ನಂತರ ಡಿವೈಎಸ್ಪಿ ಕಚೇರಿಗೆ ತೆರಳಿ ಇನ್ಸ್‌ಪೆಕ್ಟರ್‌ ಅಶೋಕ್‌ಕುಮಾರ್‌ಗೆ ಮನವಿ ಪತ್ರ ನೀಡಿದರು. ಮುಖಂಡರಾದ ಎಚ್‌.ಟಿ.ಕೃಷ್ಣೇಗೌಡ, ತುರುಬಹಳ್ಳಿ ರಾಜೇಗೌಡ, ಕಂಚನಹಳ್ಳಿ ಬಾಲು, ಎಂ.ಪ್ರಸನ್ನ, ಹನುಮಂತು, ಸಾರಿಮೇಗಲಕೊಪ್ಪಲು ರಮೇಶ್‌, ತಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಹಾಲ್ತಿ ಗಿರೀಶ್‌, ನಂಜುಂಡಪ್ಪ, ಬೆಳ್ಳೂರು ಪಾಪಾಣ್ಣ, ತಿಮ್ಮಪ್ಪ, ರಮೇಶ್‌, ಅಶೋಕ್‌, ಸಂಪತ್‌ಕುಮಾರ್‌, ಪುಟ್ಟಮ್ಮ ಮಾಯಣ್ಣಗೌಡ, ಸತೀಶ್‌, ವಸಂತಮಣ್ಣಿ, ಗೀತಾ ದಾಸೇಗೌಡ, ಯಶೋಧಮ್ಮ, ಸಾವಿತ್ರಮ್ಮ, ಹರಳಕೆರೆ ಪ್ರಸನ್ನ, ನರಸಿಂಹಮೂರ್ತಿ, ದಿನೇಶ್‌ ಸೇರಿದಂತೆ ಹಲವರು ಹಾಜರಿದ್ದರು.