* ಕಾಂಗ್ರೆಸ್ನ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆ* ಅಳಿವಿನಂಚಿನಲ್ಲಿರುವ ಕಾಂಗ್ರೆಸ್ ಬಗ್ಗೆ ಕಾರ್ಯಕರ್ತರಿಗೆ ಮುಖಂಡರ ಬಗ್ಗೆ ವಿಶ್ವಾಸವಿಲ್ಲ* ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ನಾಯಕತ್ವಕ್ಕಾಗಿ ತಿಕ್ಕಾಟ ಮುಂದುವರೆದಿದೆ
ಬೆಂಗಳೂರು(ಜು.11): ದೀರ್ಘಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದವರಿಗೆ ಬೆಲೆ, ಭವಿಷ್ಯ ಎರಡೂ ದೊರೆಯುವುದಿಲ್ಲ. ಅಳಿವಿನಂಚಿನಲ್ಲಿರುವ ಕಾಂಗ್ರೆಸ್ ಬಗ್ಗೆ ಕಾರ್ಯಕರ್ತರಿಗೆ ಮುಖಂಡರ ಬಗ್ಗೆ ವಿಶ್ವಾಸವಿಲ್ಲ. ಆದ್ದರಿಂದ ಭವಿಷ್ಯ ಅರಸಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಂದ ಅಸಂಖ್ಯಾತ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮಾದನಾಯಕನಹಳ್ಳಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್ನಿಂದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ನಾಯಕತ್ವಕ್ಕಾಗಿ ತಿಕ್ಕಾಟ ಮುಂದುವರೆದಿದೆ. ಇಬ್ಬರ ನಡುವಿನ ತಿಕ್ಕಾಟದಲ್ಲಿ ಅಲ್ಲಿನ ಕಾರ್ಯಕರ್ತರು ದಾರಿ ಕಾಣದಂತಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವ ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತದಿಂದ ಜನಪರ ಕಾರ್ಯಕ್ರಮಗಳಿಗೆ ಬಲ ಬಂದಿದೆ ಎಂದರು.
ಸಿದ್ದರಾಮಯ್ಯ ಸರ್ಕಾರದ ದಿಂಬು, ಹಾಸಿಗೆ ಹಗರಣ ಮುಚ್ಚಿ ಹಾಕಲಿಲ್ವಾ?: ಸಿದ್ದು ವಿರುದ್ಧ ಎಸ್ಟಿಎಸ್ ಗರಂ
ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾತನಾಡಿ, ಯಲಹಂಕ ಕಾಂಗ್ರೆಸ್ನಲ್ಲಿ ಸುನಾಮಿ ಎದ್ದಿದ್ದು, ಕಾರ್ಯಕರ್ತರು ಸಾಮೂಹಿಕವಾಗಿ ಬಿಜೆಪಿಗೆ ಸಾಗರೋಪಾದಿಯಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಗೆಲ್ಲಬೇಕು. ಅಭಿವೃದ್ಧಿ ಕೆಲಸಗಳು ಇನ್ನಷ್ಟುಅಗಬೇಕೆಂದು ಅನ್ಯ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.
ಹಿರಿತನಕ್ಕೆ ಬೆಲೆ ಇಲ್ಲ: ಕಾಂಗ್ರೆಸ್ನಲ್ಲಿ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದೆ. ಆದರೆ ಹಿರಿತನಕ್ಕೆ ರಾಜ್ಯದ ಕಾಂಗ್ರೆಸ್ ಮುಖಂಡರು ಸ್ಥಳೀಯ ಮುಖಂಡರ ಆಶಯಗಳಿಗೆ ಮನ್ನಣೆ ನೀಡದಿರುವುದರಿಂದ ಬೇಸತ್ತು ಕಾಂಗ್ರೆಸ್ ತ್ಯಜಿಸಿ ಅಭಿವೃದ್ಧಿ ಕೆಲಸಗಳಿಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ದಾಸನಪುರ ಹೋಬಳಿಯ ಲಕ್ಷ್ಮೇಪುರದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಸೀನಪ್ಪ ಹೇಳಿದರು.
APMC ಕಷ್ಟದಲ್ಲಿದ್ದರೆ ಸರ್ಕಾರದ ನೆರವು: ಎಸ್.ಟಿ. ಸೋಮಶೇಖರ್
ಕೆಪಿಸಿಸಿ ಸದಸ್ಯ ಹಾಗೂ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಆಲೂರು ರವಿಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೆಂಕಟೇಶ್, ಕಾಂಗ್ರೆಸ್ ಹಿರಿಯ ಮುಖಂಡರಾದ ಅಟ್ಟೂರು ಶ್ರೀನಿವಾಸ್ ಸೇರಿದಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ 28 ಹಾಲಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಸೇರಿದಂತೆ ಸಾವಿರಾರು ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಕುಮಾರ್ ಬಂಗಾರಪ್ಪ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಬಿಜೆಪಿ ಮುಂಖಂಡರಾದ ಎಸ್.ಎನ್.ರಾಜಣ್ಣ, ಕಡತನಮಲೆ ಸತ್ತೀಶ್, ದಿಬ್ಬೂರು ಜಯಣ್ಣ, ಯಲಹಂಕ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಹನುಮಣ್ಣ, ಮಂಡಲ ಅಧ್ಯಕ್ಷ ಹನುಮಯ್ಯ, ಬಿಜೆಪಿ ಮುಖಂಡರಾದ ಕೊಳ್ಳಿಗಾನಹಳ್ಳಿ ವೆಂಕಟೇಶ್, ಕಿತ್ತನಹಳ್ಳಿ ರವಿಕುಮಾರ್, ಗೋವಿಂದಪ್ಪ, ದಿಬ್ಬೂರು ಜಯಣ್ಣ, ರಾಮಮೂರ್ತಿ, ಮಾಧ್ಯಮ ಸಂಚಾಲಕ ಅಭಿನಾಶ್ ಗಣೇಶ್, ಮುಕೇಶ್, ಬಿಜೆಪಿ ಮುಖಂಡರಾದ ಜಿ.ಜೆ.ಮೂರ್ತಿ, ಸೋಮಶೇಖರ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಪದ್ಮಾವತಿ ಮತ್ತಿತರರು ಹಾಜರಿದ್ದರು.
