Asianet Suvarna News Asianet Suvarna News

Karnataka Politics : ಲಖನ್ ಬಿಜೆಪಿ ಬೆಂಬಲಿಸಲು ಲಖನ್ ಷರತ್ತು - ರಮೇಶ್‌ಗೆ ಸಚಿವ ಸ್ಥಾನ?

  • ರಮೇಶ ಜಾರಕಿಹೊಳಿ ವಿರುದ್ಧ ಸದ್ಯ ಕ್ರಮ ಇಲ್ಲ
  •  ಕ್ರಮ ಕೈಗೊಂಡರೆ ಜಿಪಂ-ತಾಪಂ ಚುನಾವಣೆಯಲ್ಲಿ ಪರಿಣಾಮ ಸಾಧ್ಯತೆ
  •  ವರಿಷ್ಠರ ಹೆಗಲಿಗೆ ಹಾಕಲು ರಾಜ್ಯ ನಾಯಕರ ತೀರ್ಮಾನ
  • ರಮೇಶ್‌ಗೆ ಸಚಿವ ಸ್ಥಾನ ಕೊಟ್ರೆ ಬೆಂಬಲ: ಲಖನ್‌ ಷರತ್ತು?
     
New MLC Lakhan Jarkiholi Condition For support BJP snr
Author
Bengaluru, First Published Dec 17, 2021, 11:20 AM IST

ಸುವರ್ಣಸೌಧ (ಡಿ.17):    ಸಹೋದರ ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ತಾವು ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ (BJP) ಬೆಂಬಲ ನೀಡಲು ಸಿದ್ಧವಿರುವುದಾಗಿ ನೂತನ ಸದಸ್ಯ ಲಖನ್‌ ಜಾರಕಿಹೊಳಿ (Lakhan Jarkiholi)  ಷರತ್ತಿನ ರೂಪದ ಸಂದೇಶ ರವಾನಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಬಿಜೆಪಿಗೆ (BJP) ವಿಧಾನಪರಿಷತ್ತಿನಲ್ಲಿ ಬಹುಮತಕ್ಕೆ ಕೇವಲ ಒಂದು ಮತದ ಕೊರತೆಯಿದೆ. ಹೀಗಾಗಿ ಆ ಕೊರತೆಯನ್ನು ಭರಿಸಲು ತಾವು ಸಿದ್ಧ. ಸಹೋದರನಿಗೆ ಸಚಿವ ಸ್ಥಾನ ನೀಡಲಿ ಎಂಬ ಮಾತನ್ನು ಲಖನ್‌ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷೇತರರಾಗಿ ಗೆದ್ದಿರುವ ಲಖನ್ ಜಾರಕಿಹೊಳಿ ಬೆಂಬಲದ ವಿಚಾರವಾಗಿ ಅನೇಕ ರೀತಿಯ ಚರ್ಚೆಗಳು ನಡೆಯುತ್ತಲೇ ಇದ್ದು ಯಾವುದೇ ಅಂತಿಮ ನಿರ್ಧಾರ ಇನ್ನ ಹೊರ ಬಂದಿಲ್ಲ. ಆದರೆ ಬಿಜೆಪಿ ಬೆಂಬಲಿಸುವ ವಿಚಾರ ಈಗ ಹೆಚ್ಚು ಸದ್ದು ಮಾಡುತ್ತಿದೆ. 

ಸದ್ಯಕ್ಕೆ ಯಾವುದೇ ಕ್ರಮ ಇಲ್ಲ :  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬೆಳಗಾವಿಯ ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಸೋಲು ಉಂಟಾದ ಬೆಳವಣಿಗೆಗೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಿರಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ.

ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಮುಂಬರುವ ಜಿಲ್ಲಾ-ತಾಲೂಕು ಪಂಚಾಯ್ತಿ ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು ಎಂಬ ಆತಂಕವನ್ನು ರಾಜ್ಯ ನಾಯಕರು ಹೊಂದಿದ್ದಾರೆ. ಜತೆಗೆ ಇದೇ ಅಭಿಪ್ರಾಯವನ್ನು ಸಂಘ ಪರಿವಾರದ ಸ್ಥಳೀಯ ಮುಖಂಡರೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ, ಕ್ರಮ ಕೈಗೊಳ್ಳಲೇಬೇಕು ಎಂದಾದರೆ ಆ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಲಿ. ನಮ್ಮಿಂದ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಳ್ಳುವುದು ಬೇಡ ಎಂಬ ನಿಲುವಿಗೆ ರಾಜ್ಯ ನಾಯಕರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಹಿರಂಗ ಹೇಳಿಕೆಗೆ ನಿರ್ಭಂಧ:  ಅಲ್ಲದೆ, ಬೆಳಗಾವಿ (Belagavi) ಚುನಾವಣೆ ಸೋಲಿಗೆ ಸಂಬಂಧಿಸಿದಂತೆ ರಮೇಶ್‌ ಜಾರಕಿಹೊಳಿ ಅವರನ್ನು ಗುರಿಯಾಗಿಸಿಕೊಂಡು ಪಕ್ಷದ ಯಾವುದೇ ಮುಖಂಡರು ಬಹಿರಂಗ ಹೇಳಿಕೆಯನ್ನೂ ನೀಡಬಾರದು ಎಂಬ ಮೌಖಿಕ ಸೂಚನೆಯನ್ನು ರಾಜ್ಯ ನಾಯಕರು ರವಾನಿಸಿದ್ದಾರೆ ಎನ್ನಲಾಗಿದೆ.

‘ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ 12 ಮಂದಿ ಶಾಸಕರು, ಇಬ್ಬರು ಲೋಕಸಭಾ ಸದಸ್ಯರು ಹಾಗೂ ಒಬ್ಬ ರಾಜ್ಯಸಭಾ ಸದಸ್ಯರು ಇರುವಾಗ ಪಕ್ಷದ$ಅಧಿಕೃತ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ ಏನರ್ಥ? ಕೇವಲ ರಮೇಶ್‌ ಜಾರಕಿಹೊಳಿ ಅವರೊಬ್ಬರೇ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಗಿ ತಮ್ಮ ಸಹೋದರ ಲಖನ್‌ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎನ್ನುವುದಾದರೆ ಅವರು ರಾಜಕೀಯವಾಗಿ ಬಲಿಷ್ಠರು ಎಂದಾಯಿತಲ್ಲವೇ’ ಎಂಬ ಪ್ರಶ್ನೆಯನ್ನು ಸಂಘ ಪರಿವಾರದ ಮುಖಂಡರು ಪಕ್ಷದ ರಾಜ್ಯ ನಾಯಕರಿಗೆ ಇಟ್ಟಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ಚರ್ಚಿಸಿ ತೀರ್ಮಾನ ಎಂದಿದ್ದ ಲಖನ್ : 

ಬಿಜೆಪಿ (BJP) ಸೇರುವ ಕುರಿತು ನಮ್ಮ ನಾಯಕರ ಜತೆಗೆ, ನಮ್ಮ ಮತದಾರರ ಜತೆಗೆ ಹಾಗೂ ನನ್ನ ಜಿಲ್ಲೆಯ ನಾಯಕರೊಂದಿಗೆ ಚರ್ಚೆ ಮಾಡುತ್ತೇನೆ. ನಂತರ ಮುಂದಿನ ದಿನಗಳ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಲಖನ್‌ ಜಾರಕಿಹೊಳಿ(Lakhan Jarkiholi) ತಿಳಿಸಿದ್ದಾರೆ.  ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ (BJP) ಕೆಲ ನಾಯಕರು ಕಾಂಗ್ರೆಸ್‌ (Congress) ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ಗೆ (Congress) ಗೆಲುವಾಗಿದೆ. ಕಾಂಗ್ರೆಸ್‌ನ ಸ್ವಯಂ ಘೋಷಿತ ನಾಯಕರು, ಬಿಜೆಪಿ ನಾಯಕರು ಸೇರಿಕೊಂಡು ಖಾಸಗಿ ಹೋಟೆಲ್‌ನಲ್ಲಿ (Hotel) ಮೀಟಿಂಗ್‌ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು ಎಂದು ದೂರಿದರು.

3500 ಬಿಜೆಪಿ (BJP) ಮತಗಳು ಕಾಂಗ್ರೆಸ್‌ಗೆ (Congress) ಬಿದ್ದಿವೆ. 2400 ಕಾಂಗ್ರೆಸ್‌ ಮತಗಳನ್ನು ಬಿಜೆಪಿಯವರು ಪಡೆದುಕೊಂಡಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ ಜೊತೆ ಕೈಜೋಡಿಸಿಕೊಂಡು ಅವರ ಮತ ಅವರೇ ಒಡೆದುಕೊಂಡಿದ್ದಾರೆ. ಇನ್ನೊಬ್ಬರ ಮೇಲೆ ಬಿಜೆಪಿ ನಾಯಕರು ಅಪವಾದ ಮಾಡೋದು ತಪ್ಪು ಎಂದರು.

ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ (Ramesh Jarkiholi) ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಲೋಕಸಭಾ ಉಪ ಚುನಾವಣೆಯಲ್ಲಿ (Loksabha By Election) ರಮೇಶ್‌ ಜಾರಕಿಹೊಳಿ ಕೆಲಸ ಮಾಡಿದ್ದಕ್ಕೆ ಬಿಜೆಪಿ (BJP) ಗೆದ್ದಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ. ಆಗ ಈ ವಿಚಾರ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಬಿಜೆಪಿಯ 13 ಶಾಸಕರು, ಇಬ್ಬರು ಸಂಸದರು, ಒಬ್ಬ ರಾಜ್ಯಸಭಾ ಸದಸ್ಯರಿದ್ದಾರೆ (Rajyasabha Member). ನಿಮಗೆ ಗೆಲ್ಲಿಸಲು ಆಗಲಿಲ್ಲ ಅಂದರೆ ರಮೇಶ ಜಾರಕಿಹೊಳಿ (Ramesh Jarkiholi) ಸ್ಟ್ರಾಂಗ್‌ ಇದ್ದ ಹಾಗಾಯಿತು. ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಬೇಕೆಂದರೆ ರಮೇಶ್‌ ಜಾರಕಿಹೊಳಿ ಶಕ್ತಿಯನ್ನು ಪಕ್ಷ ಬಳಸಿಕೊಳ್ಳಬೇಕು ಎಂದರು.

Follow Us:
Download App:
  • android
  • ios