* ಬೆಳಗಾವಿಯಲ್ಲಿ ಬಿಜೆಪಿ ಸೋಲು, ಲಖನ್‌ ಗೆಲುವು* ಲಖನ್‌ ಕಣಕ್ಕಿಳಿಸಿದ ರಮೇಶ್‌ಗೆ ಏನು ಮಾಡಬೇಕು?* ರಮೇಶ್‌ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಲ್ಲ* ಅಳೆದೂ ತೂಗಿ ಹೆಜ್ಜೆ ಇಡಲು ಬಿಜೆಪಿ ನಿರ್ಧಾರ

ಬೆಂಗಳೂರು(ಡಿ.,16): ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬೆಳಗಾವಿಯ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಂತೇಶ ಕವಟಗಿಮಠ ಅವರ ಸೋತು ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಗೆಲುವು ಸಾಧಿಸಿದ ಬೆನ್ನಲ್ಲೇ ಬಿಜೆಪಿಗೆ ಮುಂದೇನು ಮಾಡಬೇಕು ಎಂಬುದು ತೋಚದೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಕ್ಷದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್‌ ಅವರನ್ನು ತಾವೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿರುವುದು ಈಗ ಜಗಜ್ಜಾಹೀರಾಗಿರುವ ಸಂಗತಿ. ಈ ಬಗ್ಗೆ ಪಕ್ಷದ ವರಿಷ್ಠರು ಮುಂಚೆಯೇ ಎಚ್ಚರಿಕೆಯನ್ನೂ ನೀಡಿದ್ದರು. ಲಖನ್‌ ಗೆಲುವು ಸೋಲಿಗಿಂತ ಪಕ್ಷದ ಅಧಿಕೃತ ಅಭ್ಯರ್ಥಿ ಕವಟಗಿಮಠ ಅವರ ಗೆಲುವು ಮುಖ್ಯ ಎಂಬ ಸಂದೇಶವನ್ನು ಚುನಾವಣೆಗೆ ಮುಂಚೆಯೇ ವರಿಷ್ಠರು ರಮೇಶ್‌ ಅವರಿಗೆ ನೀಡಿದ್ದರು.

ಬೆಳಗಾವಿಯಲ್ಲಿ ಪ್ರಾಬಲ್ಯ ಹೊಂದಿರುವ ರಮೇಶ್‌ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವುದು ಅಷ್ಟುಸುಲಭದ ಮಾತೇನೂ ಅಲ್ಲ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ನಾಂದಿ ಹಾಡಿದ್ದರು. ಮೇಲಾಗಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಸೇರಿದಂತೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ರಮೇಶ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

Council Election Karnataka : ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ರಮೇಶ್‌ ಜಾರಕಿಹೊಳಿ ?

ಹಾಗೊಂದು ವೇಳೆ ರಮೇಶ್‌ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಲ್ಲಿ ಈಗಿರುವ ಬಿಜೆಪಿ ಸರ್ಕಾರಕ್ಕೂ ಅಪಾಯ ತಂದೊಡ್ಡಬಹುದು ಎಂಬ ಭೀತಿಯೂ ಬಿಜೆಪಿ ಪಾಳೆಯದಲ್ಲಿದೆ. ಹೀಗಾಗಿಯೇ ಬೆಳಗಾವಿ ಸೋಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು ಅಳೆದೂ ತೂಗಿ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ ಸೋಲಿನ ಕುರಿತು ವರಿಷ್ಠರ ಜತೆ ಚರ್ಚೆ: ರಮೇಶ್‌ ಜಾರಕಿಹೊಳಿ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಕ್ಷ ಸೋಲಬಾರದಿತ್ತು. ಆದರೆ, ಸೋತಿದೆ. ಪಕ್ಷದಲ್ಲಿ ಏನಾಗಿದೆ? ಏನಿಲ್ಲ ಎಂಬುವುದನ್ನು ನಮ್ಮ ವರಿಷ್ಠರ ಜತೆಗೆ ಮಾತನಾಡಿದ್ದೇನೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದರು.

ನಗರದ ತಮ್ಮ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕೆ ಸೋಲುಂಟಾಗಿದೆ ಎಂಬುವುದನ್ನು ಪಕ್ಷದಲ್ಲಿಯೇ ಆಂತರಿಕವಾಗಿ ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.

MLC Election Result 5 ಹೆಚ್ಚು ಸ್ಥಾನ ಗೆದ್ದ ಬಿಜೆಪಿಯಲ್ಲಿ ಹೊಸ ಚೈತನ್ಯ, ಜೆಡಿಎಸ್ ನಿರ್ಲಕ್ಷ್ಯ ಇಲ್ಲ ಎಂದ ಬಿಎಸ್‌ವೈ!

ಸೋಲಿನ ಪಟ್ಟವನ್ನು ಲೀಡರ್‌ ಆದವರಿಗೆ ಕಟ್ಟುತ್ತಾರೆ. ಗುಡ್ಡಕ್ಕೆ ಭಾರ ಹೊರುವ ತಾಕತ್ತು ಇದೆ ಎಂದ ಅವರು, ಕಾಂಗ್ರೆಸ್‌ ಸೋಲಿಸುತ್ತೇನೆ ಅಂತಾ ನಾನು ಹಠಕ್ಕೆ ಬಿದ್ದಿದ್ದು ನಿಜ. ಇವತ್ತು ಅವರ ಪಕ್ಷ ಗೆದ್ದಿದೆ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಲಖನ್‌ ಕೈಗೆ ಸಿಗಲಿಲ್ಲ:

ಚುನಾವಣೆ ಚಿತ್ರಣ ಬದಲಾಗಿದ್ದಕ್ಕೆ ನಾನು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದೆ. ಕೊನೆಯ ಮೂರ್ನಾಲ್ಕು ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಯಿತು. ಲಖನ್‌ ಜಾರಕಿಹೊಳಿ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ. ಬಿಜೆಪಿಗೆ ಹೋಗುವ ಕುರಿತು ಲಖನ್‌ ಜಾರಕಿಹೊಳಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.