Asianet Suvarna News Asianet Suvarna News

ಆಂಧ್ರ, ಒಡಿಸಾಗೆ ಇಂದು ನೂತನ ಸರ್ಕಾರ: ನಾಯ್ಡು, ಮಾಝಿಗೆ ಸಿಎಂ ಪಟ್ಟ

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ಚಂದ್ರಬಾಬು ನಾಯ್ಡು, ಆದಿವಾಸಿ ನಾಯಕ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ಮುಂದಿನ ಮುಖ್ಯಮಂತ್ರಿ ಎಂದು ಎಂದು ಬಿಜೆಪಿ ಘೋಷಿಸಿದೆ. ಈ ಮೂಲಕ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಲಿದ್ದಾರೆ. 
 

New Government for Andhra Pradesh and Odisha on June 12th grg
Author
First Published Jun 12, 2024, 6:38 AM IST | Last Updated Jun 12, 2024, 6:38 AM IST

ಅಮರಾವತಿ/ಭುವನೇಶ್ವರ:(ಜೂ.12): ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ತೆಲುಗು ದೇಶಂ ಪಕ್ಷದ ನೇತಾರ ಚಂದ್ರಬಾಬು ನಾಯ್ಡು ಬುಧವಾರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮರಾವತಿ ಬಳಿಯ ಕೇಸರಪಳ್ಳಿ ಐಟಿ ಪಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯ್ಡು ಮತ್ತು ಅವರ ಇತರೆ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯಾಗಿ ಎನ್‌ಡಿಎ ನಾಯಕರು ಭಾಗಿಯಾಗಲಿದ್ದಾರೆ.ಚಂದ್ರಬಾಬು ನಾಯ್ಡು 1995ರಲ್ಲಿ ಮೊದಲ ಬಾರಿಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 

ಈ ವೇಳೆ ಹೈದರಾಬಾದ್‌ ನಗರವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿಸಿದ್ದರು. ಸತತ 2 ಬಾರಿಗೆ ಅಧಿಕಾರ ನಡೆಸಿದ ಬಳಿಕ 2004ರಲ್ಲಿ ಸೋಲುಂಡ ನಾಯ್ಡು, 2014ರಲ್ಲಿ ಆಂಧ್ರ ವಿಭಜನೆಯಾದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆಗ ತಮ್ಮ ಕನಸಿನ ರಾಜಧಾನಿಯಾಗಿ ಅಮರಾವತಿಯನ್ನು ನಿರ್ಮಿಸುವ ಕಾರ್ಯ ಕೈಗೊಂಡರು. ಆದರೆ 2019ರಲ್ಲಿ ಪರಾಭವಗೊಳ್ಳಬೇಕಾಯಿತು. ಈಗ ಮತ್ತೊಮ್ಮೆ 2024ರಲ್ಲಿ ಆಯ್ಕೆಯಾಗುವ ಮೂಲಕ ಆಂಧ್ರಪ್ರದೇಶವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೇರಿಸುವ ಗುರಿಯ ಜೊತೆಗೆ ಬಡವರ ಏಳಿಗೆಗಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಸೂಪರ್‌-6 ಯೋಜನೆ ಜಾರಿ ಮಾಡಬೇಕಾದ ಸವಾಲು ಹೊಂದಿದ್ದಾರೆ.

ಆಂಧ್ರ ಖಾಲಿ ಖಜಾನೆ: ಸೂಪರ್ 6 ಭರವಸೆ ಈಡೇರಿಕೆಯೇ ನಾಯ್ಡುಗೆ ದೊಡ್ಡ ಸವಾಲು

ಜನಸೇನಾ, ಬಿಜೆಪಿ ಸಹಕಾರ: 

2024ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಸ್ವತಂತ್ರವಾಗಿ ಅಧಿಕಾರ ರಚಿಸುವಷ್ಟು ಸ್ಪಷ್ಟ ಬಹುಮತ ಗಳಿಸಿದ್ದರೂ(134), ಚುನಾವಣಾಪೂರ್ವ ಮೈತ್ರಿಯಂತೆ ಜನಸೇನಾ ಪಕ್ಷ ಹಾಗೂ ಬಿಜೆಪಿಯೂ ಸರ್ಕಾರದ ಭಾಗವಾಗಿದ್ದಾರೆ. ಒಟ್ಟಾರೆ ಎನ್‌ಡಿಎ ಮೈತ್ರಿಕೂಟ 164 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪ್ರತಿಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಕೇವಲ 11 ಸ್ಥಾನಗಳಿಗೆ ಸೀಮಿತವಾಗಿದೆ.

ಮಾಝಿ ಒಡಿಶಾ ಮೊದಲ ಬಿಜೆಪಿ ಸಿಎಂ

ಭುವನೇಶ್ವರ: ಆದಿವಾಸಿ ನಾಯಕ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ಮುಂದಿನ ಮುಖ್ಯಮಂತ್ರಿ ಎಂದು ಎಂದು ಬಿಜೆಪಿ ಘೋಷಿಸಿದೆ. ಈ ಮೂಲಕ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಲಿದ್ದಾರೆ. ಉಪಮುಖ್ಯಮಂತ್ರಿಗಳಾಗಿ ಕನಕ ವರ್ಧನ್ ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಹೆಸರಿಸಲಾಗಿದೆ.ಈ ಎಲ್ಲರೂ ಬುಧವಾರ ಸಂಜೆ 4.45ಕ್ಕೆ ಭುವನೇಶ್ವರದ ಜನತಾ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

147 ಸದಸ್ಯ ಬಲದ ಸದನದಲ್ಲಿ ಬಿಜೆಪಿ ಇತ್ತೀಚೆಗೆ 78 ಸ್ಥಾನ ಗೆದ್ದು ಸರಳ ಬಹುಮತ ಸಂಪಾದಿಸಿತ್ತು. ಬಿಜೆಡಿಯ ನವೀನ್‌ ಪಟ್ನಾಯಕ್‌ 24 ವರ್ಷ ಬಳಿಕ ಅನಿರೀಕ್ಷಿತವಾಗಿ ಅಧಿಕಾರ ಕಳೆದುಕೊಂಡಿದ್ದರು. ಇದರ ಬೆನ್ನಲ್ಲೇ ಸಿಎಂ ಹುದ್ದೆಗೆ ಹಿರಿಯ ನಾಯಕರಾದ ಧರ್ಮೇಂದ್ರ ಪ್ರಧಾನ್‌, ಜುವಾಲ್‌ ಓರಾಂ, ಸಂಬಿತ್‌ ಪಾತ್ರ, ಜೈ ಪಾಂಡ ಸೇರಿ ಕೆಲವರ ಮಧ್ಯೆ ಪೈಪೋಟಿ ನಡೆದಿತ್ತು. ಆದರೆ ಇವರೆಲ್ಲ ಲೋಕಸಭೆ ಸದಸ್ಯರು. ಹೀಗಾಗಿ ಶಾಸಕರಿಗೆ ಹಾಗೂ ತಳಮಟ್ಟದ ರಾಜಕಾರಣಿಗೆ ಮಣೆ ಹಾಕುವ ನಿಟ್ಟಿನಲ್ಲಿ ಈಗ 4 ಬಾರಿಯ ಶಾಸಕ ಮೋಹನ್‌ ಚರಣ್‌ ಮಾಝಿ ಅವರಿಗೆ ರಾಜ್ಯದ ಉನ್ನತ ಹುದ್ದೆ ನೀಡಲಾಗಿದೆ.

First Woman Muslim MLA of Odisha: ಒಡಿಶಾದ ಮೊದಲ ಮುಸ್ಲಿಂ ಶಾಸಕಿ ಓದಿದ್ದು ಎಂಜಿನೀಯರಿಂಗ್!

ಮಂಗಳವಾರ ಸಂಜೆ 4:30ಕ್ಕೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಾಝಿ ಅವರನ್ನು ಆಯ್ಕೆ ಮಾಡಲಾಯಿತು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದ್ರ ಯಾದವ್ ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸಿದ್ದರು.

ಯಾರು ಮಾಝಿ?:

53 ವರ್ಷದ ಮೋಹನ ಮಾಝಿ ಅವರು 2000, 2009, 2019 ಹಾಗೂ 2024ರಲ್ಲಿ ಒಡಿಶಾದ ಕ್ಯೋಂಝಾರ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಆದಿವಾಸಿ ಜನಾಂಗದವರಾದ ಇವರು ಪಕ್ಷ ಸಂಘಟನೆಯಲ್ಲಿ ಹೆಸರುವಾಸಿ. ಒಡಿಶಾದಂಥ ಹಿಂದುಳಿದ ರಾಜ್ಯದಲ್ಲಿ ಆದಿವಾಸಿಗಳಿಗೆ ಮಣೆ ಹಾಕುವ ಉದ್ದೇಶದಿಂದ ಹಾಗೂ ತಳಮಟ್ಟದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರಲು ಕಾರಣವಾಗಿದ್ದರಿಂದ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ.

Latest Videos
Follow Us:
Download App:
  • android
  • ios