ಸವಿತಾ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನ ಮಾಡುವೆ: ಅವಿನಾಶ ಜಾಧವ್‌

ಚಿಂಚೋಳಿ(ಫೆ.26): ಮೀಸಲು ಮತಕ್ಷೇತ್ರಕ್ಕೆ ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿ ಶಾಸಕನಾಗಿದ್ದೇನೆ ಒಂದೇ ಸಮಾಜದ ಮತಗಳಿಂದ ನಾನು ಚುನಾಯಿತನಾಗಿಲ್ಲ ಎಲ್ಲ ಸಮುದಾಯಗಳ ಮತಗಳಿಂದ ಆಯ್ಕೆಯಾಗಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನಾನು ಏನು ಆಶ್ವಾಸನೆ ಕೊಡಲಾರೆನು ನಿಮ್ಮ ಸಮಾಜಕ್ಕೆ ಸರ್ಕಾರದಿಂದ ಸೌಲಭ್ಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಾ.ಅವಿನಾಶ ಜಾಧವ್‌ ಭರವಸೆ ನೀಡಿದರು. ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ತಾಲೂಕು ಸವಿತಾ ಸಮಾಜ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ತಂದೆ ಸಂಸದ ಡಾ.ಉಮೇಶ ಜಾಧವ್‌ ರವರು ಚಿಂಚೋಳಿ ಶಾಸಕರಾಗಿದ್ದ ಮಾಡಿದ ಅಭಿವೃದ್ಧಿ ಹಾಗೇ ನಾನು ಮಾಡಿ ತೋರಿಸುತ್ತಿದ್ದೇನೆ. ನಾನು ರಾಜಕೀಯ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಬಂದಿದ್ದೇನೆ. ನಿಮ್ಮ ಸಮಾಜಕ್ಕೆ ಬೇಕಾಗುವ ಸೌಲಭ್ಯ ಕೊಡಿಸುವುದಕ್ಕಾಗಿ ಪ್ರಯತ್ನಿಸುತ್ತೇನೆ ಎಂದರು.

‘ಬೇಡ ಜಂಗಮರಿಗೆ ಜಾತಿ ಪತ್ರ ನೀಡದಂತೆ ಮಲ್ಲಿಕಾರ್ಜುನ ಖರ್ಗೆ ಪತ್ರ’

ಕಾಂಗ್ರೆಸ್‌ ಮುಖಂಡ ಸುಭಾಷ ರಾಠೋಡ ಮಾತನಾಡಿ, ಸವಿತಾ ಸಮಾಜ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಬೇಕಾದರೆ ತನ್ನ ಶಕ್ತಿ ತಾನೇ ರೂಪಿಸಿಕೊಳ್ಳಬೇಕು ಎಂದರು.

ಸವಿತಾ ಪೀಠ ಮಹಾಸಂಸ್ಥಾನ ಕೊಂಚೂರ ಸವಿತಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಕೆಲವೊಂದು ಬಲಾಢ್ಯ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಕೊಡುವುದಕ್ಕಾಗಿ ಮಧ್ಯಂತರ ವರದಿ ಪಡೆದುಕೊಂಡುನ ಸರಕಾರ ಮೀಸಲಾತಿ ಕಲ್ಪಿಸಿದೆ. ಆದರೆ ನಮ್ಮ ಸವಿತಾ ಸಮಾಜಕ್ಕೆ ಯಾವುದೇ ನ್ಯಾಯ ಕೊಡಿಸಿಲ್ಲ. ನಮ್ಮ ಸಮಾಜವು ರಾಜಕೀಯ ಪಕ್ಷಗಳಿಗೆ ಕಣ್ಣು ಕಾಣಿಸುತ್ತಿಲ್ಲ ಸಂಪೂರ್ಣವಾಗಿ ಕಡೆಗಾಣಿಸಿದೆ. ನಮ್ಮ ಪರವಾಗಿ ಮಾತು ಕೇಳುವವರಿಗೆ ನಮ್ಮ ಸಮಾಜ ಬೆಂಬಲ ನೀಡಲಾಗುವುದು. ಅನೇಕ ಬೇಡಿಕೆಗಳ ಮನವಿ ಸಲ್ಲಿಸಿದರು.

ಸಮಾರಂಭದಲ್ಲಿ ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪುರ ಮಾತನಾಡಿದರು. ಸವಿತಾ ಸಮಾಜ ಮುಖಂಡರು ಪಿಡಿಓ ರಾಮಕೃಷ್ಣ ಕೊರಡಂಪಳ್ಳಿ ಮಾತನಾಡಿದರು. ಬೀದರ್‌ ಜ್ಞಾನಸುಧಾ ಪದವಿ ಮಹಾವಿದ್ಯಾಲಯ ಆರ್ಥಶಾಸ್ತ್ರ ಉಪನ್ಯಾಸಕ ಗಿರಿಧರ ಬಿ.ಎಚ್‌. ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಉಪಾಧ್ಯಕ್ಷೆ ಸುಲೋಚೆನಾ ಕಟ್ಟಿ, ಗೋಪಾಲರಾವ ಕಟ್ಟಿಮನಿ, ರಾಮಚಂದ್ರ ಜಾಧವ್‌, ಕೆ.ಎಂ. ಬಾರಿ, ಆನಂದ ಟೈಗರ್‌ ಸೇರಿ ಹಲವರಿದ್ದರು.