ಬಿಜೆಪಿಯವರು ಪೊಲೀಸ್‌ ಠಾಣೆಯನ್ನೇ ಕಾಪಾಡಲು ಆಗದವರು, ಶಾಸಕರ ಮನೆಗೆ ಬೆಂಕಿ ಹಾಕಲು ಬಿಟ್ಟವರು. ಇವರ ಯೋಗ್ಯತೆ ಏನು ಎನ್ನುವುದನ್ನು ನಾವು ಹೇಳಬೇಕಾ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ. 

ಬೆಂಗಳೂರು (ಜು.28): ಬಿಜೆಪಿಯವರು ಪೊಲೀಸ್‌ ಠಾಣೆಯನ್ನೇ ಕಾಪಾಡಲು ಆಗದವರು, ಶಾಸಕರ ಮನೆಗೆ ಬೆಂಕಿ ಹಾಕಲು ಬಿಟ್ಟವರು. ಇವರ ಯೋಗ್ಯತೆ ಏನು ಎನ್ನುವುದನ್ನು ನಾವು ಹೇಳಬೇಕಾ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರುದ್ಯೋಗಿಗಳಾಗಿರುವ ಬಿಜೆಪಿಯವರಿಗೆ 5 ಗ್ಯಾರಂಟಿಗಳು ಜಾರಿ ಆಗಿರುವುದು, ಚೆನ್ನಾಗಿ ನಡೆಯುತ್ತಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಸದಾ ಸರ್ಕಾರದ ವಿರುದ್ಧ ಕುಂಟು ನೆಪ, ಸುಳ್ಳು ಆರೋಪಗಳನ್ನು ಮಾಡುತ್ತಾ ಮೈ ಪರಚಿಕೊಳ್ಳುತ್ತಿದ್ದಾರೆ. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಅಮಾಯಕರನ್ನು ಬಿಡು ಎಂದು ಯಾರೂ ಹೇಳಿಲ್ಲ. 

ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಅದನ್ನು ಬಿಜೆಪಿಯವರಿಂದ ಹೇಳಿಸಿಕೊಂಡು ಮಾಡಬೇಕಿಲ್ಲ ಎಂದರು. ರಾಜ್ಯದಲ್ಲಿ ಪ್ರತಿಪಕ್ಷಗಳೇ ಇಲ್ಲ. ಬಿಜೆಪಿಯವರಿಗೆ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ಜೆಡಿಎಸ್‌ಗೆ ಮುಂದೆ ಅಸ್ತಿತ್ವ ಇರುತ್ತೋ ಇಲ್ವೋ ಗೊತ್ತಿಲ್ಲ. ಬಿಜೆಪಿಯಲ್ಲಿ ವಿಲೀನ ಆಗುತ್ತೇನೋ ಗೊತ್ತಿಲ್ಲ. ಈಗ ರಾಜ್ಯದಲ್ಲಿ ಒರಿಜಿನಲ್‌ ಬಿಜೆಪಿಯೂ ಇಲ್ಲ, ಜೆಡಿಎಸ್‌ ಇಲ್ಲ. ಬಿಜೆಪಿಯವರು ಹತಾಶರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರು ಎಸ್‌.ಪಿ. ರೋಡ್‌ನಿಂದ ಪೆನ್‌ಡ್ರೈವ್‌ ತಂದು ಪ್ರದರ್ಶಿಸಿರಬಹುದು ಎಂದು ವ್ಯಂಗ್ಯವಾಡಿದರು.

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್‌ ಪಡೆಯಲ್ಲ: ಸಚಿವ ಎಂ.ಬಿ.ಪಾಟೀಲ್‌

ಪಿಡಿಒಗಳು ಶೀಘ್ರ ಮಾತೃ ಇಲಾಖೆಗೆ ವಾಪಸ್‌: ಬೇರೆ ಇಲಾಖೆ ಹಾಗೂ ಸ್ಥಳಗಳಿಗೆ ನಿಯೋಜನೆ ಮೇಲೆ ನೇಮಕವಾಗಿರುವ ಗ್ರಾಮ ಪಂಚಾಯತಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಿಬ್ಬಂದಿ, ಅಧಿಕಾರಿಗಳನ್ನು ವಾಪಸು ಮಾತೃ ಇಲಾಖೆಗೆ ಕರೆಸಿಕೊಳ್ಳಲು ಆದೇಶಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಶಶಿಲ್‌ ಜಿ.ನಮೋಶಿ ಪರವಾಗಿ ಜೆಡಿಎಸ್‌ನ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್‌ ಖರ್ಗೆ, ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 660 ಪಿಡಿಒ, 604 ಗ್ರೇಡ್‌ 1 ಕಾರ್ಯದರ್ಶಿ ಹಾಊ 719 ಗ್ರೇಡ್‌ 2 ಕಾರ್ಯದರ್ಶಿ ಹುದ್ದೆಗಳು ಖಾಲಿಯಿವೆ. 

ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 150 ಪಿಡಿಒಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಉಳಿದ 510 ಪಿಡಿಒಗಳ ನೇಮಕಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಗ್ರಾ.ಪಂ. ಕಾರ್ಯದರ್ಶಿ ಹುದ್ದೆ ಸೇರಿ ಆರ್‌ಡಿಪಿಆರ್‌ ಇಲಾಖೆಗೆ ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.

ನನ್ನ ವಿರುದ್ಧ ಹಕ್ಕು ಚ್ಯುತಿ ಮಂಡನೆ: ಶಾಸಕರೊಬ್ಬರ ಬಳಿ ಆಪ್ತ ಸಹಾಯಕರಾಗಿ ನಿಯೋನೆಗೊಂಡಿರುವ ಪಿಡಿಒ ಒಬ್ಬರು ಮಾತೃ ಇಲಾಖೆಗೆ ವಾಪಸಾಗದೆ ಶಾಸಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ನಮ್ಮದೇ ಪಕ್ಷದ ಶಾಸಕರು ಆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ವಿಧಾನಸಭೆಯಲ್ಲಿ ಹಕ್ಕು ಚ್ಯುತಿಯನ್ನೂ ಮಂಡಿಸಿದ್ದಾರೆ. ಹೀಗಾದರೆ ಇಲಾಖೆಯಲ್ಲಿ ಕೆಲಸ ಮಾಡುವುದು ಕಷ್ಟಎಂದು ಪ್ರಿಯಾಂಕ್‌ ಖರ್ಗೆ ಅಳಲು ತೋಡಿಕೊಂಡರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಾಗವಾಗಿ ಕೆಲಸ ನಡೆಯುವಂತೆ ಮಾಡಲು ನಿಯೋಜನೆ ಮೇರೆಗೆ ಬೇರೆ ಇಲಾಖೆ ಹಾಗೂ ಬೇರೆ ಜಿಲ್ಲೆಗಳ ಗ್ರಾ.ಪಂ.ಗೆ ತೆರಳಿರುವ ಪಿಡಿಒಗಳನ್ನು ವಾಪಸು ಕರೆಸಿಕೊಳ್ಳಲಾಗುತ್ತಿದೆ. 

ಲೋಕಸಭೆ: ರಾಜ್ಯದಲ್ಲಿ 15-20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು​: ಜಗದೀಶ್‌ ಶೆಟ್ಟರ್‌

ಈ ಕುರಿತಂತೆ ಆದೇಶ ಹೊರಡಿಸಲಾಗಿದ್ದು, ಅವರಲ್ಲಿ ಬಹುತೇಕರು ಮಾತೃ ಇಲಾಖೆ ಹಾಗೂ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದವರು ವಾಪಸು ಬರುವುದನ್ನು ತಡೆಯಲು ಶಾಸಕರು, ಸಚಿವರ ಮೂಲಕ ಒತ್ತಡ ಹೇರುತ್ತಿದ್ದಾರೆ. ಆದರೆ, ಇಲಾಖೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡಬೇಕೆಂದರೆ ಸಿಬ್ಬಂದಿ, ಅಧಿಕಾರಿಗಳನ್ನು ವಾಪಸು ಕರೆಸಿಕೊಳ್ಳುವುದು ಅನಿವಾರ್ಯವಾಗಿದ್ದು, ಜನಪ್ರತಿನಿಧಿಗಳು ಅದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.