ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಕುರಿತು ಈಗಲೇ ಏನೂ ಹೇಳಲ್ಲ. ಪಕ್ಷ ಅದನ್ನು ನಿರ್ಧರಿಸುತ್ತದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ 15-20 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಮಾಜಿ ಸಿಎಂಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. 

ಕೊಪ್ಪಳ (ಜು.27): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಕುರಿತು ಈಗಲೇ ಏನೂ ಹೇಳಲ್ಲ. ಪಕ್ಷ ಅದನ್ನು ನಿರ್ಧರಿಸುತ್ತದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ 15-20 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಮಾಜಿ ಸಿಎಂಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಬೇಕೋ, ಬೇಡವೋ ಎನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ. ಅಷ್ಟಕ್ಕೂ ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನವೇ ಆ ಕುರಿತು ಮಾತನಾಡುವುದು ಸರಿಯಲ್ಲ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದೆ. ಕಾಂಗ್ರೆಸ್‌ ಸಂಘಟನೆ ಉತ್ತಮವಾಗಿದೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ 15-20 ಸ್ಥಾನಗಳಲ್ಲಿ ಗೆಲವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ ಎಂದರು. ಈಗಂತೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉಳಿದಂತೆ ಈ ಕುರಿತು ಹೆಚ್ಚು ಮಾತನಾಡಲು ನಿರಾಕರಿಸಿದರು.

ನಾನು ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ: ಜಗದೀಶ್‌ ಶೆಟ್ಟರ್‌

ಪತ್ರವೇ ನಕಲಿ: ಶಾಸಕರು ಸಿಎಂಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಈಗಾಗಲೇ ಶಾಸಕ ಬಸವರಾಜ ರಾಯರಡ್ಡಿ ಮತ್ತು ಬಿ.ಆರ್‌. ಯಾವಗಲ್‌ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರವೇ ನಕಲಿ ಎಂದು ಹೇಳಿದ್ದಾರೆ. ಆರೋಪ ಮಾಡಿಲ್ಲ, ಸಿಎಲ್‌ಪಿ ಸಭೆ ಕರೆಯುವಂತೆ ಹೇಳಿದ್ದಾರೆ. ಅಲ್ಲಿ ಎಲ್ಲವೂ ಚರ್ಚೆಯಾಗುತ್ತದೆ. ಪಕ್ಷ ಅಂದಮೇಲೆ ಇದೆಲ್ಲ ಇದ್ದಿದ್ದೆ. ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು. ಕಾಂಗ್ರೆಸ್‌ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಗೌರವದಿಂದಲೇ ಕಾಣುತ್ತಿದೆ. ಹೀಗಾಗಿ, ನಾನು ಮರಳಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ, ಆ ಕುರಿತು ಚರ್ಚೆಯೂ ಇಲ್ಲ. ಆದರೆ, ಬಿಜೆಪಿಗೆ ಈ ಸ್ಥಿತಿ ಬರಬಾರದಿತ್ತು. ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಆಗದ ಸ್ಥಿತಿ ಬಂದಿದೆ ಎಂದರೆ ಅದರ ಸ್ಥಿತಿ ಹೇಗಿರಬೇಡ ಹೇಳಿ? ಎಂದು ಪ್ರಶ್ನಿಸಿದರು.

ಕೆಟ್ಟದಾಗಿ ನಡೆಸಿಕೊಂಡರು: ನಾನು ಜನಸಂಘದಿಂದಲೇ ಪಕ್ಷದಲ್ಲಿ ಇದ್ದೇನೆ. ಯಾವೊಬ್ಬ ಲಿಂಗಾಯತ ನಾಯಕರು ಇಲ್ಲದ ವೇಳೆಯಲ್ಲಿ ನಾನು ಅಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ, ನನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡರು. ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರು. ನನ್ನನ್ನು ಸೋಲಿಸಲು ಯತ್ನಿಸಿದ ಬಿಜೆಪಿ ರಾಜ್ಯದಲ್ಲಿಯೇ ತಾನೇ ಅಧಿಕಾರ ಕಳೆದುಕೊಂಡಿತು. ಈಗ ಆ ಪಕ್ಷದಲ್ಲಿ ತತ್ವ, ಸಿದ್ಧಾಂತಗಳು ಇಲ್ಲ. ಎಲ್ಲವನ್ನೂ ಗಾಳಿಗೆ ತೂರಿದ್ದಾರೆ ಎಂದರು.

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ: ಜಗದೀಶ್‌ ಶೆಟ್ಟರ್‌

ನನಗೆ ಟಿಕೆಟ್‌ ಇಲ್ಲ, ರೌಡಿಶೀಟರ್‌ಗೆ ಕೊಟ್ಟರು: ಬಿಜೆಪಿಯಲ್ಲಿ ಯಾವುದೇ ತತ್ವ, ಸಿದ್ಧಾಂತ ಈಗ ಉಳಿದಿಲ್ಲ. ನಮ್ಮಂತವರಿಗೆ ಟಿಕೆಟ್‌ ನಿರಾಕರಿಸಿದರು. ಆದರೆ ಕಲಬುರಗಿಯಲ್ಲಿ ರೌಡಿಶೀಟರ್‌ಗೆ ಟಿಕೆಟ್‌ ನೀಡಿದ್ದಾರೆ. ಇನ್ನೇನು ಸಿದ್ಧಾಂತ ಇರಲು ಸಾಧ್ಯ? ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕುಟುಕಿದ್ದಾರೆ. ಜನಸಂಘದಿಂದ ಪಕ್ಷ ಸಂಘಟನೆಯಲ್ಲಿದ್ದರೂ ಅದಕ್ಕೆ ಗೌರವ ನೀಡಲಿಲ್ಲ. ನನ್ನನ್ನು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಂಡರು. ಟಿಕೆಟ್‌ ನಿರಾಕರಿಸಲು ಕಾರಣವನ್ನೂ ಹೇಳಲಿಲ್ಲ ಆದರೆ, ರೌಡಿಶೀಟರ್‌ಗಳಿಗೆಲ್ಲ ಬಿಜೆಪಿ ಟಿಕೆಟ್‌ ನೀಡುವಂತಾಗಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಅಂದಪ್ಪ ಜವಳಿ, ಶಿವಕುಮಾರ ಪಾವಲಿ, ಗುರುರಾಜ ಹಲಿಗೇರಿ, ರವಿಕುರುಗೋಡ ಇದ್ದರು.