ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಇದೀಗ ಕರ್ನಾಟಕದ ಬಿಜೆಪಿಯಲ್ಲಿ ಸ್ಟಾರ್ ಐಕಾನ್ ಆಗಿದ್ದಾರೆ. ಇದರ ಮಧ್ಯೆ ಬಿ.ವೈ. ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

ತುಮಕೂರು, (ಅ.30): ಸದ್ಯ ಕರ್ನಾಟಕ ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರ ಸ್ಟಾರ್ ನಾಯಕರಾಗಿದ್ದಾರೆ. ಪಕ್ಷ ಸಂಘನೆಯಲ್ಲಿ ಮುಂಚೂಣೆಯಲ್ಲಿರುವ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಚುನಾವಣೆಗಳು ಬಂದಾಗಲೆಲ್ಲ ಇವರದ್ದೇ ಮಾತು.

Add Asianetnews Kannada as a Preferred SourcegooglePreferred

ಕಳೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದರು. ಇದೀಗ ತುಮಕೂರಿನ ಶಿರಾ ಬೈ ಎಲೆಕ್ಷನ್ ಉಸ್ತುವಾರಿ ವಹಿಸಿಕೊಂಡಿದ್ದು, ತುಮಕೂರಿನಲ್ಲೇ ಠಿಕಾಣಿ ಹೂಡಿ ಬಿಜೆಪಿ ಅಭರ್ಥಿ ಗೆಲುವಿಗೆ ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಇನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಲಿಟ್ಟಲ್ಲಿ ಗೆಲುವು ನಿಶ್ಚಿತ ಎಂದು ಸಚಿವ ಡಾ.ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ.

ಶಿರಾ ಬೈ ಎಲೆಕ್ಷನ್: ಸಂದರ್ಶನದಲ್ಲಿ ಮಹತ್ವದ ವಿಷಯಗಳನ್ನ ಬಿಚ್ಚಿಟ್ಟ ವಿಜಯೇಂದ್ರ

ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರ ಮದಲೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಮಾಡುವುದಾಗಿ ಮಾತುಕೊಟ್ಟರೆ ಎಂದಿಗೂ ಮಾತು ತಪ್ಪುವುದಿಲ್ಲ. ಶಿರಾ ಕ್ಷೇತ್ರವನ್ನು 3ನೇ ಶಿಕಾರಿಪುರವನ್ನಾಗಿ ಮಾಡುತ್ತಾರೆ ಎಂದು ಹೇಳಿದರು.

ಶಿರಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ. ಮಂಡ್ಯ ಜಿಲ್ಲಾಯಲ್ಲಿ ನನ್ನನ್ನು ಗೆಲ್ಲಿಸಿದರು. ಮೂರು ಖಾತೆ ನೀಡಿ ಸಚಿವನನ್ನಾಗಿ ಮಾಡಿದರು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎನ್ನುತ್ತಿದ್ದರು. ಆದರೆ, ಈಗ ಯಡಿಯೂರಪ್ಪ ಅವರ ಕನಸು ನೆರವೇರಿದೆ ಎಂದರು.

ಕೆಆರ್ ಪೇಟೆಯನ್ನು ಗೆಲ್ಲಿಸಿದರೆ 2ನೇ ಶಿಕಾರಿಪುರ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ಅದರಂತೆ ಈಗ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗುತ್ತಿದೆ. ವಿಜಯೇಂದ್ರ ಅವರು ಕೆಆರ್ ಪೇಟೆ ಚುನಾವಣೆ ನೇತೃತ್ವ ವಹಿಸಿದ್ದರು. ಅವರು ಕೊಟ್ಟ ಮಾತಿನಂತೆ ಈಗ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.

150 ಹಾಸಿಗೆಯ ಹೈಟೆಕ್ ಆಸ್ಪತ್ರೆ ಬರುತ್ತಿದೆ. ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರನ್ನು ಗೆಲ್ಲಿಸಿಕೊಡಿ. ಕ್ಷೇತ್ರವನ್ನು ಮೂರನೆ ಶಿಕಾರಿಪುರ ಮಾಡುತ್ತಾರೆ ಎಂಬ ಭರವಸೆ ನೀಡಿದರು. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಹರಿದುಬರುತ್ತದೆ. ಇದಕ್ಕೆ ಉದಾಹರಣೆ ಕೆಆರ್ ಪೇಟೆ ಕ್ಷೇತ್ರ. ಅದೇ ರೀತಿ ಶಿರಾ ಕ್ಷೇತ್ರ ಕೂಡ ಅಭಿವೃದ್ಧಿಯಾಗಲಿದೆ ಎಂದು ಭರವಸೆ ನೀಡಿದರು.