ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ.ಸಿ ರೆಡ್ಡಿ, ಎಂ.ವಿ.ಕೃಷ್ಣಪ್ಪ, ಎಸ್‌.ಎನ್‌.ಪ್ರಸನ್ನಕುಮಾರ್‌, ವಿ.ಕೃಷ್ಣರಾಂ, ಆರ್‌.ಎಲ್‌.ಜಾಲಪ್ಪ ನಂತರ 2009ರಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಈ ಜಿಲ್ಲೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ನದ್ದೇ ದರ್ಬಾರು.

ಚಿಕ್ಕಬಳ್ಳಾಪುರ(ಜ.06):  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಆಗಲೇ ಚುನಾವಣಾ ತಾಲೀಮು ಶುರುಮಾಡಿವೆ. ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಟಫ್ ಫೈಟ್ ಇದ್ದರೆ, ಜೆಡಿಎಸ್ ಸಹಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕ ಸಮರದ ತಯಾರಿಯಲ್ಲಿದೆ.

Add Asianetnews Kannada as a Preferred SourcegooglePreferred

ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಾರುಪತ್ಯ

2007ರಲ್ಲಿ ಅಸ್ತಿತ್ವಕ್ಕೆ ಬಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯ. ರಾಜಧಾನಿ ಬೆಂಗಳೂರಿನಿಂದ ಕೇವಲ 56 ಕಿಲೋಮೀಟರುಗಳ ದೂರದಲ್ಲೇ ಚಿಕ್ಕಬಳ್ಳಾಪುರ ಇದೆ. ಈಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳಿವೆ. ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ.ಸಿ ರೆಡ್ಡಿ, ಎಂ.ವಿ.ಕೃಷ್ಣಪ್ಪ, ಎಸ್‌.ಎನ್‌.ಪ್ರಸನ್ನಕುಮಾರ್‌, ವಿ.ಕೃಷ್ಣರಾಂ, ಆರ್‌.ಎಲ್‌.ಜಾಲಪ್ಪ ನಂತರ 2009ರಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಈ ಜಿಲ್ಲೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ನದ್ದೇ ದರ್ಬಾರು.

ಕಾಂಗ್ರೆಸ್ ಸರ್ಕಾರದ್ದು ಸೇಡಿನ ರಾಜಕಾರಣ: ಮುನಿರಾಜು

2019ರಲ್ಲಿ ಬಿಜೆಪಿ ಪಾಲಾದ ಕ್ಷೇತ್ರ

2009ರಿಂದ ಸತತ 2 ಬಾರಿ ಎಂ.ವೀರಪ್ಪ ಮೊಯ್ಲಿ ಸ್ಪರ್ಧಿಸಿ ಕೇಂದ್ರ ಸಚಿವರಾಗಿದ್ದರು. ಮೊಯ್ಲಿ ಈ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು. ಇದೇ ಅವಧಿಯಲ್ಲಿ ಚಿಕ್ಕಬಳ್ಳಾಪುರದ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ವಶವಾಗಿದ್ದವು. ಆದರೆ 2019ರಲ್ಲಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಪ್ಪಂದದಿಂದ ಚುನಾವಣೆ ಎದುರಿಸಿದ ಹಿನ್ನೆಲೆ ಕಮಲ ಪಾಳಯದ ಬಿ.ಎನ್‌.ಬಚ್ಚೇಗೌಡ ಗೆಲುವು ಸಾಧಿಸಿದ್ದು ಒಂದು ದಾಖಲೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈಗ ಮತ್ತೇ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಈಗಾಗಲೇ ಚುನಾವಣಾ ತಯಾರಿ ಆರಂಭಿಸಿರುವ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕುತೂಹಲ ಸೃಷ್ಟಿಯಾಗಿದೆ. ಜತೆಗೆ, ಬಿಜೆಪಿ, ಜೆಡಿಎಸ್‌ ನಡೆ ಏನಾಗಲಿದೆ ಈ ಕ್ಷೇತ್ರದ ಸಂಸದ ಬಚ್ಚೇಗೌಡರು ಅನಾರೋಗ್ಯ ಹಾಗೂ ವಯಸ್ಸಿನ ಕಾರಣದಿಂದ ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಮುಂದಿನ ಬಿಜೆಪಿ ಅಭ್ಯರ್ಥಿಯಾರಾಗ್ತಾರೆ ಅನ್ನೋ ಚರ್ಚೆಯೂ ನಡೆದಿದೆ.

ಬಿಜೆಪಿಯಲ್ಲಿ ಟಿಕೆಟ್‌ಗೆ ಭಾರಿ ಲಾಭಿ

ಕಳೆದ 3 ಚುನಾವಣೆಗಳಲ್ಲಿ ಲೋಕಸಭೆ ಕ್ಷೇತ್ರದ ಉಸ್ತುವಾರಿಯಾಗಿದ್ದ ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ತಮ್ಮ ಪುತ್ರ ಅಲೋಕ್‌ ವಿಶ್ವನಾಥ್‌ಗೆ ಟಿಕೆಟ್‌ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಬಿ.ಎಸ್‌.ಯಡಿಯೂರಪ್ಪ ಅವರ ಗಮನಕ್ಕೆ ಈ ಬಗ್ಗೆ ತರಲಾಗಿದ್ದು, ಟಿಕೆಟ್‌ ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ. ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಒಂದು ಕಡೆ ಪ್ರಯತ್ನ ನಡೆಸುತ್ತಿದ್ದರೆ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಸಂತೋಷ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಜ್ಜವರ ಲೋಕೇಶ್‌ ಸಹ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಪ್ತ ಬಳಗದಲ್ಲಿರುವ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು, ಮತ್ತು ಮಾಜಿ ಸಚಿವ ಡಾ.ಕೆ.ಸುಧಾಕರ್ ಸಹಾ ಆಕಾಂಕ್ಷಿ ಗಳಾಗಿದ್ದಾರೆ.

ವಿ.ಸೋಮಣ್ಣ ಜೊತೆ ಮಾತನಾಡಿದ್ದೇನೆ, ಅವರು ಬಿಜೆಪಿ ಪಕ್ಷ ಬಿಡೊಲ್ಲ: ಆರ್.ಅಶೋಕ್

ವೀರಪ್ಪ ಮೊಯ್ಲಿ ಪ್ರಬಲ ಆಕಾಂಕ್ಷಿ

ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಮಲ ಅರಳಿದ್ದು, ಈ ಬಾರಿ ಹೊಸಬರ ಪ್ರವೇಶವಾಗುತ್ತಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಟಿಕೆಟ್‌ ತನಗೇ ಎಂಬಂತೆ ನಿತ್ಯ ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ಮಾಜಿ ಸಂಸದ ವೀರಪ್ಪಮೊಯ್ಲಿ ಜತೆಗೆ ಹಿರಿಯರು, ಕಿರಿಯರು ಟಿಕೆಟ್‌ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮುಖ್ಯವಾಗಿ ರಕ್ಷಾರಾಮಯ್ಯ ಒಂದು ಕಡೆ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಮಾಜಿ ಸಚಿವ ಶಿವಶಂಕರ್‌ರೆಡ್ಡಿ ಸಹ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಆಕಾಂಕ್ಷಿಗಳನ್ನು ಹೊರತುಪಡಿಸಿದರೆ ಇತ್ತ ಬಿಜೆಪಿಯಲ್ಲೂಆಕಾಂಕ್ಷಿಗಳ ಪ್ರಯತ್ನ ಮುಂದುವರಿದಿದೆ.

ಜೆಡಿಎಸ್‌ ಬೆಂಬಲ ಮುಖ್ಯ

ಒಂದೊಮ್ಮೆ ಕ್ಷೇತ್ರ ಜೆಡಿಎಸ್‌ ಪಾಲಾದರೆ ಕಮಲ ಪಾಳಯದ ಆಕಾಂಕ್ಷಿಗಳ ಕನಸು ಛಿದ್ರವಾಗಲಿದೆ. ಆದರೆ, ಬಹುತೇಕ ಜೆಡಿಎಸ್‌ ಮೈತ್ರಿಯಾದರೂ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಹೀಗಾಗಿ, ಜೆಡಿಎಸ್‌ ನಿರ್ಧಾರದ ಮೇಲೆ ಆಕಾಂಕ್ಷಿಗಳ ಹಾದಿ ಸುಗಮಗೊಳ್ಳಲಿದೆ.