ವಿಧಾನಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸ ಶಕ್ತಿಕೇಂದ್ರವಾಗಿ ಹೊರ ಹೊಮ್ಮುವ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇದೆ.

ಬೆಂಗಳೂರು: ವಿಧಾನಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸ ಶಕ್ತಿಕೇಂದ್ರವಾಗಿ ಹೊರ ಹೊಮ್ಮುವ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇದೆ. ಸದಾಶಿವನಗರದ ನಿವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿನ್ನೆ ತಡರಾತ್ರಿಯವರೆಗೂ ಜಿಲ್ಲಾ ನಾಯಕರ ಜೊತೆಗೆ ಚರ್ಚೆ ಮಾಡಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ಡಿಕೆಶಿ ಗೆ ಸಿಗುತ್ತಾ ಪಟ್ಟ ಎಂಬ ಬಗ್ಗೆ ಕುತೂಹಲ ಮೂಡಿದೆ.

Add Asianetnews Kannada as a Preferred SourcegooglePreferred

ಇತ್ತ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಡಿಕೆಶಿ ಸಾರಥ್ಯದಲ್ಲಿ ಕಾಂಗ್ರೆಸ್ ಚುನಾವಣಾ ಸಂಘಟನೆ ನಡೆಸಿತ್ತು. ಹೀಗಾಗಿ ಪಕ್ಷ ಅಧಿಕಾರಕ್ಕೆ ಬಂದರೆ ಡಿಕೆಶಿ ಗೆ ಸಿಗುತ್ತಾ ಪಟ್ಟ ಎಂಬುದು ಸೇರಿದಂತೆ ಹತ್ತು ಹಲವು ಕುತೂಹಲಗಳಿಗೆ ಇಂದೇ ಉತ್ತರ ಸಿಗಲಿದೆ. ಈ ಮಧ್ಯೆ ಚುನಾವಣೆ ಬಳಿಕವಿಶ್ರಾಂತಿ ಹಾಗೂ ಆರೋಗ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿದ್ದ ಕುಮಾರಸ್ವಾಮಿ ಮರಳಿ ಬೆಂಗಳೂರಿಗೆ ಬಂದಿದ್ದಾರೆ. ಏರ್‌ಪೋರ್ಟ್‌ನಲ್ಲಿ ಈ ವೇಲೆ ಮಾಧ್ಯಮ ಪ್ರತಿನಿಧಿಗಳು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಬೇರೆ ಪಕ್ಷದ ಜೊತೆ ಮೈತ್ರಿ ಬಗ್ಗೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ತನ್ನನ್ನು ಇದುವರೆಗೆ ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಗಳ ಪ್ರಕಾರ, ಬಿಜೆಪಿ ಅಥವಾ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಬಂದಿದೆ. ಹೀಗಿರುವಾಗ ನನ್ನ ಯಾರು ಸಂಪರ್ಕಿಸುತ್ತಾರೆ. ನನ್ನನ್ನು ಯಾರೂ ಸಂಪರ್ಕಿಸಿಲ್ಲ, ಕಾಂಗ್ರೆಸ್ ನಾಯಕರು ಈಗಾಗಲೇ ಗದ್ದುಗೆಗೆ ಏರಲು ಸೂಟು ಬೂಟು ಹೊಲಿಸಿ ಸಿದ್ಧವಾಗಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಾನು ಯಾರಿಗೂ ಆಫರ್ ನೀಡಿಲ್ಲ, ನನಗೂ ಯಾರು ಆಫರ್ ಮಾಡಿಲ್ಲ,, ಇನ್ನೆರಡು ಗಂಟೆ ಕಾಯಿರಿ ನಿಮಗೆ ಎಲ್ಲವೂ ತಿಳಿಯಲಿದೆ ಎಂದು ಹೇಳಿ ಹೊರಟು ಹೋದರು.