Asianet Suvarna News Asianet Suvarna News

ಡಿಕೆಶಿ ಅವರ ಆಸ್ತಿ ಅಕ್ರಮ ಎನ್ನುವ ಎಚ್‌ಡಿಕೆ ಅವರದ್ದು ಬೇನಾಮಿ ಅಲ್ಲವೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 1400 ಕೋಟಿ ಆಸ್ತಿ ಎಲ್ಲಿಂದ ಬಂತು ಎನ್ನುವ ಕುಮಾರ್ ಸ್ವಾಮಿ ಮತ್ತು ಅವರ ಕುಟುಂಬದವರ 43 ಜನರಿಗೆ ನೈಸ್ ರಸ್ತೆಯ ಅಕ್ಕಪಕ್ಕದಲ್ಲಿ ಹಲವಾರು ಎಕರೆ ಬೇನಾಮಿ ಜಮೀನು ಇದೆ. ಇದು ಎಲ್ಲಿಂದ ಬಂತು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

KPCC spokesperson M Lakshman Slams On HD Kumaraswamy At Madikeri gvd
Author
First Published Oct 27, 2023, 10:23 PM IST

ವರದಿ: ರವಿ.ಎಸ್.ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಮಡಿಕೇರಿ
 
ಮಡಿಕೇರಿ (ಅ.27):
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 1400 ಕೋಟಿ ಆಸ್ತಿ ಎಲ್ಲಿಂದ ಬಂತು ಎನ್ನುವ ಕುಮಾರ್ ಸ್ವಾಮಿ ಮತ್ತು ಅವರ ಕುಟುಂಬದವರ 43 ಜನರಿಗೆ ನೈಸ್ ರಸ್ತೆಯ ಅಕ್ಕಪಕ್ಕದಲ್ಲಿ ಹಲವಾರು ಎಕರೆ ಬೇನಾಮಿ ಜಮೀನು ಇದೆ. ಇದು ಎಲ್ಲಿಂದ ಬಂತು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದ್ದಾರೆ. ಇವರ ಬೇನಾಮಿ ಆಸ್ತಿಯ ಬಗ್ಗೆ ಅಶೋಕ್ ಖೇಣಿ ಅವರೇ ಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿದ್ದಾರೆ, ಇದು ನಾನು ಮಾಡುತ್ತಿರುವ ಆರೋಪವಲ್ಲ ಎಂದು ದಾಖಲೆ ತೋರಿಸಿದರು. ಇದನ್ನೆಲ್ಲಾ ಜನರಿಗೆ ಬಿಡುಗಡೆ ಮಾಡುವುದಾಗಿ ಲಕ್ಷ್ಮಣ್ ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ ರಾಜ್ಯದಲ್ಲಿ 1.5 ಲಕ್ಷ ಕೋಟಿ ಲೂಟಿ ಮಾಡಿದ್ದಾರೆ. 

ಹಿಂದಿನ ಬಿಜೆಪಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ 30 ಸಾವಿರ ಕೋಟಿ ರೂಪಾಯಿ ಗುತ್ತಿಗೆದಾರರಿಗೆ ಬಾಕಿ ಉಳಿಸಿ ಹೋಗಿದೆ. ಮಾನ್ಯ ಮುಖ್ಯಮಂತ್ರಿಯವರು ಈ ಕುರಿತು ಶ್ವೇತಪತ್ರ ಹೊರಡಿಸಬೇಕು. ನೀವು ಅಧಿಕಾರ ಸ್ವೀಕರಿಸುವ ಸಂದರ್ಭ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂದು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸುತ್ತೇವೆ. ಇದು ರಾಜ್ಯದ ಜನತೆಗೆ ಗೊತ್ತಾಗಬೇಕು. ಬಿಜೆಪಿಯವರು ರಾಜ್ಯದ ಆರ್ಥಿಕತೆಯನ್ನು ಗುಡಿಸಿ ಹೊರಟು ಹೋಗಿದ್ದಾರೆ. ತಾವು ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಿದ್ದರು ಹತ್ತಾರು ಕಾಮಗಾರಿಗಳನ್ನು ಸುಮ್ಮನೆ ಅಡ್ವಾನ್ಸ್ ಆಗಿ ಗುತ್ತಿಗೆ ನೀಡಿದ್ದಾರೆ. ಆ ಮೂಲಕ 5%, 10% ಕಮಿಷನ್ ಪಡೆದಿದ್ದಾರೆ. 

ಜೆಡಿಎಸ್ ಜೊತೆ ಮೈತ್ರಿಯಾದ್ರೆ ನಮ್ಮ ಹಕ್ಕು ಬಿಟ್ಟು ಕೊಡುವ ಸಂದರ್ಭ ಬರೋದಿಲ್ಲ: ಸಿ.ಟಿ.ರವಿ

ಈಗ ಗುತ್ತಿಗೆದಾರರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಕುಮಾರಸ್ವಾಮಿ ಮಾತನಾಡುವುದರಲ್ಲಿ 99 ರಷ್ಟು ಸುಳ್ಳು ಇರುತ್ತವೆ. ಜನರು ದಯವಿಟ್ಟು ಅದನ್ನು ನಂಬಬೇಡಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಎಂಎಲ್ಎ ಗಳನ್ನು ಬಿಜೆಪಿ ಸೆಳೆಯಲು ಪ್ರಯತ್ನಗಳು ನಡೆಯುತ್ತಿವೆ ಅದಕ್ಕೆ ಸಾಕ್ಷ್ಯಗಳಿವೆ ಎನ್ನುವ ಮಂಡ್ಯದ ನಮ್ಮ ಶಾಸಕ ರವಿಕುಮಾರ್ ಗಣಿಗ ಅವರ ಮಾತು ಸತ್ಯ. ಆಪರೇಷನ್ ಕಮಲ ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾವಾಗಿದ್ದು, ಅವರ ಬುದ್ದಿಯೇ ಅದು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿರುವ ಅವರು ದೇಶದಲ್ಲಿ ಬೇರೆ ಪಕ್ಷಗಳಿಂದ ಅಧಿಕಾರ ನಡೆಯುತ್ತಿರುವುದನ್ನು ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿದ 10 ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. 

'ಸರ್ವರೂ ಎಚ್ಚರದಿಂದ ಇರಬೇಕು': ಇದು ನಾಡಿನ ಸುಪ್ರಸಿದ್ದ ಮೈಲಾರಸ್ವಾಮಿ ಕಾರ್ಣಿಕ ನುಡಿ!

ನಮ್ಮ ಎಂಎಲ್ ಗಳನ್ನು ಬಿಜೆಪಿಯವರು ಮಾತನಾಡಿಸಿರುವುದು ಸತ್ಯ. ಅದಕ್ಕೆ ಮಂಡ್ಯ ಎಂಎಲ್ಎ ರವಿಕುಮಾರ್ ಗಣಿಗ ಅವರ ಬಳಿ ದಾಖಲೆ ಇವೆ. ಅದನ್ನು ಮಾನ್ಯ ಸಿಎಂ ಅವರಿಗೆ ಕೊಡಲಾಗುತ್ತದೆ. ಇದನ್ನು ತನಿಖೆ ಮಾಡಿಸಿ ಒದ್ದು ಒಳಗೆ ಹಾಕುವ ಕೆಲಸ ಮಾಡಲಾಗುವುದು ಎಂದಿದ್ದಾರೆ. ಪ್ರಜಾಪ್ರಭುತ್ವದ ಹರಾಜಕತೆಯನ್ನು ಬಿಜೆಪಿ ಮಾಡುತ್ತಿದೆ. ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ 136 ಸೀಟು ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ನವರು ಬಾಯಿ ಮುಚ್ಚಿಕೊಂಡು ಐದು ವರ್ಷ ಸುಮ್ಮನಿರಬೇಕು. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಬಿಜೆಪಿ, ಜೆಡಿಎಸ್ ಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗೆ ಆದರೆ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಹೀಗಾಗಿ ರಾಜ್ಯದ ಜನರ ದಿಕ್ಕು ತಪ್ಪಿಸುವುದಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.

Follow Us:
Download App:
  • android
  • ios