Asianet Suvarna News Asianet Suvarna News

ಕೆಪಿಸಿಸಿ ಶೀಘ್ರ ಪುನಾರಚನೆ, ಯುವ ಮುಖಗಳಿಗೆ ಹೊಣೆ: ಸುರ್ಜೇವಾಲಾ

‘ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಪುನರ್ ರಚನೆ ಬಗ್ಗೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಕೆಪಿಸಿಸಿ ಪುನರ್‌ ರಚನೆ ಪ್ರಸ್ತಾವನೆ ಇಡುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ. 

KPCC quick restructuring young faces responsible Says Randeep Singh Surjewala gvd
Author
First Published Nov 2, 2023, 7:43 AM IST

ಬೆಂಗಳೂರು (ನ.02): ‘ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಪುನರ್ ರಚನೆ ಬಗ್ಗೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಕೆಪಿಸಿಸಿ ಪುನರ್‌ ರಚನೆ ಪ್ರಸ್ತಾವನೆ ಇಡುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಕೆಪಿಸಿಸಿ ಸಂಘಟನಾ ವಿಭಾಗದ ಪ್ರಮುಖ ಪದಾಧಿಕಾರಿ ಸ್ಥಾನಗಳಲ್ಲಿರುವ ಅನೇಕರು ಶಾಸಕರಾಗಿದ್ದಾರೆ ಹಾಗೂ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದಾರೆ. 

ಹೀಗಾಗಿ ಕೆಪಿಸಿಸಿ ಪುನರ್‌ ರಚನೆ ಅನಿವಾರ್ಯ ಎಂಬುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದರು. ಈ ವೇಳೆ ಕೆಪಿಸಿಸಿ ಪುನರ್‌ ರಚನೆ ಮಾಡುವ ಮೂಲಕ ಪದಾಧಿಕಾರಿ ಸ್ಥಾನಗಳಲ್ಲಿರುವ ಸಚಿವರು, ಶಾಸಕರಿಗೆ ಜವಾಬ್ದಾರಿಯಿಂದ ಮುಕ್ತಿ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಸರ್ಕಾರಿ ಶಾಲೆಗಳಿಗಿನ್ನು ಉಚಿತ ವಿದ್ಯುತ್‌, ನೀರು: ಸಿದ್ದರಾಮಯ್ಯ ಘೋಷಣೆ

ಕೆಪಿಸಿಸಿ ಪುನರ್ ರಚನೆ ಮೂಲಕ ಪದಾಧಿಕಾರಿ ಹುದ್ದೆಗಳಲ್ಲಿರುವ ಶಾಸಕರು, ಸಚಿವರಿಗೆ ಜವಾಬ್ದಾರಿಯಿಂದ ಮುಕ್ತಿ ನೀಡಲಾಗುವುದು ಎಂದು ಹೇಳಿದರು. ಇನ್ನು ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಪಕ್ಷಕ್ಕೆ ಹುಮ್ಮಸ್ಸಿನಿಂದ ದುಡಿಯುತ್ತಿರುವ ಯುವಕರ ಹೆಗಲಿಗೆ ನೀಡಬೇಕಾಗಿದೆ. ಮುಂದೆ ಶಾಸಕರು, ಸಂಸದರಾಗಬಹುದಾದ ಸಂಘಟನಾಚತುರ ಯುವಕರನ್ನು ಹುಡುಕಿ ಜವಾಬ್ದಾರಿಯನ್ನು ಹಸ್ತಾಂತರಿಸಲಾಗುವುದು. ತನ್ಮೂಲಕ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದರು.

ಬಿಜೆಪಿಗೆ ತಿರುಗೇಟು: ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ತಿಕ್ಕಾಟ ಶುರುವಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಹೌದು ಈ ಹೇಳಿಕೆಯನ್ನೂ ನಾನೂ ಕೇಳಿದ್ದೇನೆ. ಬಿಜೆಪಿಯವರು 6 ತಿಂಗಳ ಹಿಂದೆ ನೇಮಕ ಮಾಡಿರುವ ವಿರೋಧಪಕ್ಷದ ನಾಯಕರು ಈ ಹೇಳಿಕೆ ನೀಡಿದ್ದರು’ ಎಂದು ಪ್ರತಿಪಕ್ಷ ನಾಯಕರ ನೇಮಕ ಮಾಡದ ಬಿಜೆಪಿಗೆ ಟಾಂಗ್‌ ನ ಈಡಿದರು.

ನೂತನ ಕಾರ್ಯಾಧ್ಯಕ್ಷರ ನೇಮಕದ ಬಗ್ಗೆ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಹೈಕಮಾಂಡ್ ನಾಯಕರು ಬುಧವಾರ ನಡೆಸಿದ ಸಭೆಯ ವೇಳೆ ಪಕ್ಷಕ್ಕೆ ನೂತನ ಕಾರ್ಯಾಧ್ಯಕ್ಷರ ನೇಮಕ ಕುರಿತು ವಿಸ್ತೃತ ಚರ್ಚೆ ನಡೆದಿದೆ ಎನ್ನಲಾಗಿದೆ. ಹಾಲಿ ಕಾರ್ಯಾಧ್ಯಕ್ಷರು ಸರ್ಕಾರದಲ್ಲಿ ಸಚಿವ ಸ್ಥಾನ ಹಾಗೂ ವಿವಿಧ ಹುದ್ದೆ ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆದಿದ್ದು ಸರಿಯಲ್ಲ: ಗಾಯಕ ಮುದ್ದುಕೃಷ್ಣ

ಮೂಲಗಳ ಪ್ರಕಾರ ಸಚಿವ ಸ್ಥಾನ ಹೊಂದಿರುವ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಹಾಗೂ ಪರಿಷತ್ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಅವರನ್ನು ಬದಲಿಸಿ ಅವರ ಸ್ಥಾನಕ್ಕೆ ಕ್ರಮವಾಗಿ ವಿನಯ ಕುಲಕರ್ಣಿ, ಅಂಜಲಿ ಲಿಂಬಾಳ್ಕರ್, ಜಿ.ಸಿ. ಚಂದ್ರಶೇಖರ್ ಹಾಗೂ ತನ್ವೀರ್ ಸೇಠ್ ಅವರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಇವರಲ್ಲದೆ ಮತ್ತೊಬ್ಬ ಕಾರ್ಯಾಧ್ಯಕ್ಷ ಚಂದ್ರಪ್ಪ ಅವರ ಬದಲಿಗೆ ರಾಯಚೂರು ಮೂಲದ ವಸಂತ ಕುಮಾರ ಅವರ ನೇಮಕದ ಪ್ರಸ್ತಾಪವೂ ಆಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios