ಸಂಸದ ಶ್ರೇಯಸ್ ಪಟೇಲ್ ಅವರು ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಹೆಸರೇ ಇಲ್ಲ ಎಂದು ಟೀಕಿಸಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ಹಾಸನಕ್ಕೆ ಕೊಡುಗೆ ನೀಡಿದ್ದರೂ, ರೇವಣ್ಣ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಹಾಸನ (ಮಾ.11):  ರಾಜ್ಯ ಬಜೆಟ್‌ನಲ್ಲಿ ಹಾಸನ ಹೆಸರಿಲ್ಲ ಎಂದು ಟೀಕೆ ಮಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರೇ ಇಲ್ಲಿ ನೋಡಿ ಕೇಂದ್ರ ಬಜೆಟ್‌ನಲ್ಲಿ ಹಾಸನ ಅಲ್ಲ, ಕರ್ನಾಟಕ ಹೆಸರೇ ಇಲ್ಲ. ಕೇಂದ್ರ ಬಜೆಟ್‌ನ ಪುಸ್ತಕದಲ್ಲಿ ಕರ್ನಾಟಕ ಸೇರಿ ಎಷ್ಟೋ ರಾಜ್ಯಗಳ ಹೆಸರೇ ಇಲ್ಲ ಎಂದು ಹಾಸನದಲ್ಲಿ ಸಂಸದ ಶ್ರೇಯಸ್‌ ಪಟೇಲ್ ಟೀಕೆ ಮಾಡಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೊಬ್ಬ ಜನಪ್ರತಿನಿದಿ ಇದ್ದೀನಿ. ನನಗೆ ಕೇಂದ್ರ ಬಜೆಟ್ ಪುಸ್ತಕ ಕೊಡ್ತಾರೆ, ನನಗಿಂತ ಗೊತ್ತಾ ಅವರಿಗೆ. ಕೆಂದ್ರ ಬಜೆಟ್ ಪುಸ್ತಕದಲ್ಲಿ ಎಷ್ಟೋ ರಾಜ್ಯಗಳ ಹೆಸರಿಲ್ಲ. ಇನ್ನು ಹಾಸನ ಹೆಸರು ಇರುತ್ತಾ.? ರಾಜ್ಯ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡಬಾರದು. ಗಲಾಟೆಯಾದ ಸಂದರ್ಭದಲ್ಲಿ ಪೊಲೀಸರು ನಿಭಾಯಿಸುತ್ತಾರೆ. ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಬಾರದು ಎಂದು ಹೇಳಿದರು.

ಎಣ್ಣೆ ಕುಡಿದು ಬಂದು ಡ್ಯೂಟಿ ಮಾಡಿದ್ದರೆ ಸಾಕ್ಷಿ, ಪುರಾವೆಗಳಿದ್ದಲ್ಲಿ ಕೊಡಲಿ. ಇವರ ಕಾಲದಲ್ಲಿ ಏನೇನು ಆಗಿದೆ ಗೊತ್ತಿದೆ. ಇವರ ಕಾಲದಲ್ಲಿ ಯಾವ ಗ್ಯಾರೆಂಟಿ ಕೊಟ್ಟಿದ್ದಾರೆ.? ನಾವು ಕೆಲಸ ಮಾಡುತ್ತಿದ್ದೇವೆ ಮುಂದಕ್ಕೂ ಮಾಡಿ ತೋರಿಸುತ್ತೇವೆ. ಅಭಿವೃದ್ಧಿಗೆ ಕೈ ಜೋಡಿಸಲಿ, ಸಲಹೆ ನೀಡಲಿ. ಅವರು ಹಿರಿಯರಿದ್ದಾರೆ, ಚುನಾವಣೆ ಸಂದರ್ಭದಲ್ಲಿ ಚುನಾವಣೆ ಮಾಡೋಣ. ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಲಹೆ, ಸಹಕಾರ ನೀಡಲಿ ಎಂದು ಮಾಜಿಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್‌ಪಟೇಲ್ ತಿರುಗೇಟು ನೀಡಿದರು.

ಇದನ್ನೂ ಓದಿ: ಉದ್ಭವಮೂರ್ತಿ ಸೂರಜ್ ರೇವಣ್ಣ ಅವರದ್ದು ಬಾಲಿಶ ಹೇಳಿಕೆ: ಸಂಸದ ಶ್ರೇಯಸ್ ಪಟೇಲ್ ತಿರುಗೇಟು

ನಾಲ್ಕೈದು ತಿಂಗಳಿನಲ್ಲಿ ಸರ್ಕಾರ ಬೀಳುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ ಹೇಳುತ್ತಾ ಬಂದಿದ್ದಾರೆ. ತಿಳಿದವರಿಗೆ, ಬುದ್ದಿವಂತರಿಗೆ ಏನಾದರೂ ಉತ್ತರ ಕೊಡಬಹುದು. ಯಾವ ಮಾನದಂಡದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ನಮ್ಮ ಸರ್ಕಾರ ಅಸ್ಥಿರವಾಗಿದೆಯೇ ನೀವೇ ನೋಡಿ.. ನಮ್ಮಲ್ಲಿ 140 ಜನ ಶಾಸಕರಿದ್ದಾರೆ. ಇಡೀ ರಾಜ್ಯದ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಏನಾದರೂ ಹೇಳಿಕೊಳ್ಳಲಿ ಬಿಡಿ ಎಂದು ಸೂರಜ್‌ ರೇವಣ್ಣ ಬಗ್ಗೆ ವ್ಯಂಗ್ಯವಾಡಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಜೋಡೆತ್ತುಗಳು. ಅಭಿವೃದ್ಧಿ ವಿಷಯದಲ್ಲಿ ಅವರು ಜೋಡೆತ್ತುಗಳು ಆಗಿದ್ದಾರೆ. ವಿರೋಧ ಪಕ್ಷದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಲಾಲ್ ಬಜೆಟ್ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕು ಇಲ್ಲವಾ? ನಮ್ಮಲ್ಲೂ ಕೆಂಪು ರಕ್ತ ಹರಿತಿದೆ, ಅವರಲ್ಲೂ ಕೆಂಪು ರಕ್ತ ಹರಿತಿದೆ. ಅಲ್ಪಸಂಖ್ಯಾತರಿಗೆ ಇನ್ನೂ ಹೆಚ್ಚು ಅನುದಾನ ಕೊಡಲಿ ಎಂದು ಒತ್ತಾಯಿಸುತ್ತೇನೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಇದನ್ನೂ ಓದಿ: ಜಯಲಕ್ಷ್ಮಿ ರೈಸ್ ಮಿಲ್ ಓನರ್ ಮಗ ಇವತ್ತು ಹಾಸನದ ಎಂಪಿ ಆಗಿದ್ದಾನೆ: ಶ್ರೇಯಸ್ ಪಟೇಲ್ ತಾಯಿ