ಜಿದ್ದಾಜಿದ್ದಿನ ಕಣವಾಗಿರುವ ವಿಧಾನಸಭೆ ಚುನಾವಣೆಗೆ ಅಬ್ಬರದ ಬಹಿರಂಗ ಪ್ರಚಾರ ಸೋಮವಾರ ಸಂಜೆ 6ಗಂಟೆಗೆ ಮುಕ್ತಾಯವಾಗಲಿದ್ದು, ‘ನಿಶ್ಶಬ್ದ ಅವಧಿ’​ (ಸೈಲೆಂಟ್‌ ಪೀರಿಯಡ್‌) ಪ್ರಾರಂಭವಾಗಲಿದೆ. 

ಬೆಂಗಳೂರು (ಮೇ.08): ಜಿದ್ದಾಜಿದ್ದಿನ ಕಣವಾಗಿರುವ ವಿಧಾನಸಭೆ ಚುನಾವಣೆಗೆ ಅಬ್ಬರದ ಬಹಿರಂಗ ಪ್ರಚಾರ ಸೋಮವಾರ ಸಂಜೆ 6ಗಂಟೆಗೆ ಮುಕ್ತಾಯವಾಗಲಿದ್ದು, ‘ನಿಶ್ಶಬ್ದ ಅವಧಿ’​ (ಸೈಲೆಂಟ್‌ ಪೀರಿಯಡ್‌) ಪ್ರಾರಂಭವಾಗಲಿದೆ. ಆದರೆ, ಅಂತಿಮ ಕ್ಷಣದವರೆಗೆ ಮತದಾರರ ಮನವೊಲಿಕೆ ಕಸರತ್ತು ಮುಂದುವರೆಯಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭ್ಯರ್ಥಿಗಳು ಅಥವಾ ಅವರ ಪರವಾಗಿ ಮುಖಂಡರು, ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ಪ್ರಚಾರವನ್ನೂ ನಡೆಸಬಹುದು. ಚುನಾವಣಾ ಅಖಾಡದಲ್ಲಿ ಮತಬೇಟೆಯ ಅಬ್ಬರ ತೀವ್ರವಾಗಿದ್ದು, ಪ್ರಚಾರದ ಭರಾಟೆ ಸ್ತಬ್ದವಾಗಲಿದೆ. ಮತದಾನ ಮುಕ್ತಾಯದ 48 ಗಂಟೆಗೂ ಮೊದಲು ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 6ಗಂಟೆಯೊಳಗೆ ಎಲ್ಲಾ ಕ್ಷೇತ್ರದಲ್ಲಿಯೂ ಬಹಿರಂಗ ಪ್ರಚಾರ, ಸಾರ್ವಜನಿಕ ಸಭೆಗಳು ಮುಕ್ತಾಯವಾಗಲಿವೆ. ನಿಶಬ್ದ ಅವಧಿ​ಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. 

2ನೇ ದಿನವೂ ಮೋದಿ ರೋಡ್‌ ಶೋ ಕಮಾಲ್‌: 8 ಕಿ.ಮೀ. ಸಂಚಾರ ವೇಳೆ ಹೂ ಮಳೆ

ಸ್ಟಾರ್‌ ಪ್ರಚಾರಕರು, ಮುಖಂಡರು ಕ್ಷೇತ್ರವನ್ನು ತೊರೆಯಬೇಕು. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಅಂತಿಮ ಮತಯಾಚನೆಯ ಕಸರತ್ತು ನಡೆಸಲಿದ್ದಾರೆ. ಸೋಮವಾರ ಸಂಜೆ 6 ಗಂಟೆಯ ಬಳಿಕ ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡು ಬಂದರೆ ಚುನಾವಣಾ ಆಯೋಗದ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದ್ದಾರೆ. ಇದೇ ವೇಳೆ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗುತ್ತದೆ.

5 ಮಂದಿಗಿಂತ ಹೆಚ್ಚು ಮಂದಿ ಓಡಾಡುವಂತಿಲ್ಲ: ಸೋಮವಾರ ಸಂಜೆ 6 ಗಂಟೆಯ ಬಳಿಕ ನಿಶ್ಶಬ್ದ ಅವಧಿಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಗುಂಪು ಗುಂಪಾಗಿ ಓಡಾಡುವಂತಿಲ್ಲ. ಪ್ರತಿ ಕ್ಷೇತ್ರದಲ್ಲಿ ಐದು ಮಂದಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ ಮತ್ತು ಓಡಾಡುವಂತೆಯೂ ಇಲ್ಲ. ಐದು ಮಂದಿಗಿಂತ ಹೆಚ್ಚು ಜನ ಒಂದೆಡೆ ಕಂಡು ಬಂದರೆ ನೀತಿ ಸಂಹಿತೆ ಉಲ್ಲಂಘನೆಯಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದೆ.

ಕಾಂಗ್ರೆಸಿಗರ ಮನೆ ಮೇಲೆ ರಾತ್ರೋರಾತ್ರಿ ಐಟಿ ದಾಳಿ: ಭಾರಿ ಅಕ್ರಮ ಹಣ ಪತ್ತೆ

ಹೊರ ರಾಜ್ಯ ಪೊಲೀಸರ ನಿಯೋಜನೆ: ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಚುನಾವಣಾ ಕಾರ್ಯಕ್ಕೆ ಎಂಟು ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆಂಧ್ರಪ್ರದೇಶದಿಂದ ಒಂದು ಸಾವಿರ ಪೊಲೀಸರು ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ಒಂದು ಸಾವಿರ, ತೆಲಂಗಾಣದಿಂದ 516 ಪೊಲೀಸರು ಮತ್ತು 684 ಗೃಹರಕ್ಷಕ ದಳ ಸಿಬ್ಬಂದಿ, ಮಹಾರಾಷ್ಟ್ರದಿಂದ ಮೂರು ಸಾವಿರ ಗೃಹರಕ್ಷಕ ದಳ ಸಿಬ್ಬಂದಿ, ತಮಿಳುನಾಡಿನಿಂದ 500 ಪೊಲೀಸರು ಮತ್ತು ಒಂದು ಸಾವಿರ ಗೃಹರಕ್ಷಕ ದಳ, ಕೇರಳದಿಂದ 600 ಪೊಲೀಸರು ಮತ್ತು ಗೋವಾದಿಂದ 100 ಪೊಲೀಸರು ಮತ್ತು 100 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.