ರಾಜಕೀಯ ದುಡ್ಡಿದ್ದವರ ಆಟ, ಅದರ ಉಸಾಬರೀನೇ ಬೇಡವೆಂದು ವಿದ್ಯಾವಂತರು, ಪ್ರಾಮಾಣಿಕರು ಮೂಗು ಮುರಿಯೋ ಈ ಕಾಲದಲ್ಲಿ ಇಲ್ಲೊಬ್ಬರು ಜಡ್ಜ್‌ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ, ಹದಗೆಡುತ್ತಿರುವ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

ಶೇಷಮೂರ್ತಿ ಅವಧಾನಿ

Add Asianetnews Kannada as a Preferred SourcegooglePreferred

ಕಲಬುರಗಿ (ಏ.19): ರಾಜಕೀಯ ದುಡ್ಡಿದ್ದವರ ಆಟ, ಅದರ ಉಸಾಬರೀನೇ ಬೇಡವೆಂದು ವಿದ್ಯಾವಂತರು, ಪ್ರಾಮಾಣಿಕರು ಮೂಗು ಮುರಿಯೋ ಈ ಕಾಲದಲ್ಲಿ ಇಲ್ಲೊಬ್ಬರು ಜಡ್ಜ್‌ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ, ಹದಗೆಡುತ್ತಿರುವ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂತಹ ಸಾಹಸಕ್ಕೆ ಕೈ ಹಾಕಿದವರು ಕಿರಿಯ ಸಿವಿಲ್‌ ನ್ಯಾಯಾಧೀಶ ಸುಭಾಶ್ಚಂದ್ರ ರಾಠೋಡ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಂಕದಾಳ ಗ್ರಾಮದ ಸುಭಾಶ್ಚಂದ್ರ ರಾಠೋಡ, ತಮ್ಮ 7 ವರ್ಷಗಳ ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿ. ಜೆಡಿಎಸ್‌ ಸೇರಿ ತಮ್ಮ ಬದುಕಿನ ಹೊಸ ಪಯಣಕ್ಕೆ ಮುನ್ನುಡಿ ಬರೆದಿದ್ದಾರೆ. 

ಜೆಡಿಎಸ್‌ ಇವರನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿಸಿದೆ. ಸಮಾಜ ಸುಧಾರಣೆಯಲ್ಲಿ ಪ್ರಮುಖ ಯೋಗದಾನ ನೀಡುತ್ತಿರುವ ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌.ಹಿರೇಮಠ, ಲೋಕಾಯುಕ್ತ ಸಂತೋಷ ಹೆಗ್ಡೆ ಅವರಿಂದ ಸ್ಫೂರ್ತಿ ಪಡೆದ ಸುಭ್ಚಾಂದ್ರ, ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ‘ಭ್ರಷ್ಟಾಚಾರ ಮುಕ್ತ ನಾವು- ಸಮಾಜ’ ಎಂಬ ಸಂಘಟನೆ ಕಟ್ಟಿಹೋರಾಟ ಮಾಡಿದವರು. ಈಗ ರಾಜಕೀಯಕ್ಕೆ ಧುಮುಕಿದ್ದಾರೆ.

ಕೋಟ್ಯಧಿಪತಿಗಳಿಂದ ಬೆಂಗಳೂರಿನಲ್ಲಿ ನಾಮಪತ್ರ: ಪ್ರಿಯಕೃಷ್ಣ ಸಹಸ್ರ ಕೋಟಿ ಒಡೆಯ

ಕಡು ಬಡತನದಲ್ಲೇ ಅರಳಿದ ಪ್ರತಿಭೆ: ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಸಂಕದಾಳ ಗ್ರಾಮದ ಸುಭಾಶ್ಚಂದ್ರ ಅವರು ಕಡು ಬಡತನ ಕಂಡುಂಡವರು. ಕೆಲಸ ಅರಸಿಕೊಂಡು ಗುಳೆ ಹೋಗುತ್ತಿದ್ದ ಕುಟುಂಬ ಇವರದ್ದು. ತಂದೆ ಸಾರಿಗೆ ಇಲಾಖೆಯಲ್ಲಿ ಚಾಲಕ. ಹೊಟ್ಟೆಗೆ ತಿನ್ನಲು ದಿನಸಿ ಇಲ್ಲದಿದ್ದರೂ ಪರವಾಗಿಲ್ಲ, ತಮ್ಮ 6 ಜನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂಬ ಹಂಬಲದವರು. ಅದರಿಂದಲೇ ಇವರ ಕುಟುಂಬದ 6 ಗಂಡು ಮಕ್ಕಳಲ್ಲಿ ನಾಲ್ವರು ಕಾನೂನು ಪದವಿ ಪೂರೈಸಿ ವಕೀಲ, ನ್ಯಾಯಾಧೀಶರಾಗಿ ಗಮನ ಸೆಳೆದಿದ್ದಾರೆ.

ಇವರ ಸಹೋದರರಲ್ಲಿ ಅನೀಲ ಕುಮಾರ್‌ ಅವರು ಕಲಬುರಗಿ ಹೈಕೋರ್ಚ್‌ನಲ್ಲಿ, ಕುಮಾರ್‌ ಅವರು ವಿಜಯಪುರದಲ್ಲಿ, ಸುನೀಲ್‌ ಅವರು ಬಸವನ ಬಾಗೇವಾಡಿಯಲ್ಲಿ ನ್ಯಾಯಾಧೀಶರಾಗಿದ್ದಾರೆ. ಇನ್ನಿಬ್ಬರು ಸಹೋದರರಾದ ವಿಜಯ ಹಾಗೂ ರವಿ ಸಂಕದಾಳದಲ್ಲೇ ಕೃಷಿಕರಾಗಿದ್ದಾರೆ. ಇವರ ತಾಯಿ ಕಮಲಾಬಾಯಿ ಪ್ರಸ್ತುತ ಸಂಕದಾಳ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದಾರೆ. ಕಾನೂನು ವ್ಯಾಸಂಗ ಮಾಡಿದ ಸುಭಾಶ್ಚಂದ್ರ, 2016ರಲ್ಲಿ ವಕೀಲರಾಗಿ ವೃತ್ತಿ ಶುರು ಮಾಡಿದರು. ಇದರ ಬೆನ್ನಲ್ಲೇ ಸಿವಿಲ್‌ ಕಿರಿಯ ಶ್ರೇಣಿ ನ್ಯಾಯಾಧೀಶರಾದವರು. ಚಿತ್ತಾಪುರದಲ್ಲಿ ನ್ಯಾಯಾಧೀಶರಾಗಿ 4 ವರ್ಷ್ ಸೇವೆ ಸಲ್ಲಿಸಿದರು. 

ಅಲ್ಲಿಂದ ವಿಜಯಪುರ, ಗದಗದಲ್ಲಿಯೂ ಸೇವೆ ಸಲ್ಲಿಸಿ ಕೊನೆಗೆ ಗದಗದಿಂದಲೇ ತಮ್ಮ ನ್ಯಾಯಾಧೀಶರ ಹುದ್ದೆಗೆ ಗುಡ್‌ಬೈ ಹೇಳಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ನ್ಯಾಯಾಧೀಶರಾಗಿ ಕೆಲಸ ಮಾಡಿದ 7 ವರ್ಷಗಳ ಪೈಕಿ 4 ವರ್ಷಗಳ ಕಾಲ ಚಿತ್ತಾಪುರದಲ್ಲಿಯೇ ಸೇವೆ ಸಲ್ಲಿಸಿದ್ದು, ಅಲ್ಲಿಂದಲೇ ಚುನಾವಣೆ ಎದುರಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಶೆಟ್ಟರ್‌ ಇಷ್ಟು ವರ್ಷ ಗೆದ್ದಿದ್ದು ಬಿಜೆಪಿ ವರ್ಚಸ್ಸಿನಿಂದ, ವೈಯಕ್ತಿಕವಾಗಲ್ಲ: ಅರುಣ್‌ ಸಿಂಗ್‌

ರಾಜಕೀಯ ಪವಿತ್ರ ಕ್ಷೇತ್ರ. ಆದರೆ, ಈಗ ಪ್ರಾಮಾಣಿಕರ ಸಂಖ್ಯೆ ಸೊರಗುತ್ತಿದೆ. ಅಪ್ರಾಮಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಜಾಪ್ರಭುತ್ವದ ಪ್ರಮುಖ ಕಂಬವೇ ಹೀಗೆ ಕುಸಿಯೋದನ್ನು ನೋಡುತ್ತ ಕುಳಿತುಕೊಳ್ಳಲು ನನ್ನಿಂದ ಆಗಲಿಲ್ಲ. ರಾಜಕೀಯ ಸೇರಿದರೆ ಹೆಚ್ಚು ಜನರಿಗೆ ಧ್ವನಿ, ನ್ಯಾಯ ಕೊಡಬಹುದು, ಹದಗೆಡುತ್ತಿರುವ ರಾಜಕೀಯ ರಂಗದಲ್ಲಿ ಸುಧಾರಣೆ ಕೂಡಾ ತರಬಹುದು ಎಂಬುದು ನನ್ನ ಗಟ್ಟಿನಂಬಿಕೆ. ಅದಕ್ಕೇ ನಾನು ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಕಾಲಿಟ್ಟಿರುವೆ.
- ಸುಭಾಶ್ಚಂದ್ರ ರಾಠೋಡ, ಚಿತ್ತಾಪುರದ ಜೆಡಿಎಸ್‌ ಅಭ್ಯರ್ಥಿ.